ಮಂಗಳೂರು: ಕೆಪಿಸಿಸಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಿ.ನಾರಾಯಣ ಸ್ವಾಮಿ ಅವರು ಶುಭಾಷ್ ಚಂದ್ರ ಶೆಟ್ಟಿ ಅವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದ.ಕ. ಜಿಲ್ಲಾ ಸಂಯೋಜಕರನ್ನಾಗಿ  ನೇಮಿಸಿ ಆದೇಶ ಹೊರಡಿಸಿದ್ದಾರೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರ ಸಲಹೆ ಮೇರೆಗೆ ಶುಭಾಷ್ ಚಂದ್ರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶುಭಾಷ್ ಚಂದ್ರ ಶೆಟ್ಟಿ ಅವರು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಲ್ಲಿ ಜೊತೆ ಕಾರ್ಯದರ್ಶಿಯಾಗಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಪ್ರ.ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಸೇವೆಸಲ್ಲಿಸಿದ್ದಾರೆ.  ಕೊಲ್ನಾಡು ಗ್ರಾ.ಪಂ ನಲ್ಲಿ 6 ಬಾರಿ ಸದಸ್ಯರಾಗಿ, 2 ಬಾರಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಕೇಂದ್ರ ಸರ್ಕಾರದ “ರಾಷ್ಟ್ರೀಯ ನಿರ್ಮಲ ಪುರಸ್ಕಾರ”, ರಾಜ್ಯ ಸರ್ಕಾರದ “ನಮ್ಮ ಗ್ರಾಮ ನಮ್ಮ ಯೋಜನಾ ಪುಸ್ಕಾರ”,  2 ಬಾರಿ ರಾಜ್ಯ ಮಟ್ಟದ “ಗಾಂಧಿ ಪುರಸ್ಕಾರ”, 3 ಬಾರಿ ಜಿಲ್ಲಾ ಮಟ್ಟದ ನರೇಗಾ ಹಾಗೂ “ಸಮುದಾಯ ಶೌಚಾಲಯ ಆಂದೋಲನಾ” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಅವರು ಪ್ರಸ್ತುತ ವಿಟ್ಲ ಪಡ್ನೂರು ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.