ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳಾಗಿದ್ದು ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಜನವಿರೋಧಿ ನೀತಿಗಳಿಂದಲೇ ವಿಶೇಷವಾಗಿ ಗುರುತಿಸಿಕೊಂಡಿರುವುದು ದುರಾದೃಷ್ಠಕರ ಅದರಲ್ಲಿಯೂ ಕರಾವಳಿ ಜಿಲ್ಲೆಗಳನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ.
ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಇದರ ವತಿಯಿಂದ ಸರಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ ಈಗಾಗಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಜನರನ್ನು ಸೇರಿಸಿ ಕಾರ್ಕಳ ತಾಲೂಕು ಕಛೇರಿ ಮುಂಭಾಗ ಒಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಈ ಲಜ್ಜೆಗೆಟ್ಟ ಸರಕಾರ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಅದೇ ಜನವಿರೋಧಿ ನೀತಿಯನ್ನು ಮುಂದುವರೆಸಿರುವುದು ಖಂಡನೀಯ.
ಜನಸಾಮಾನ್ಯರು ಎದುರಿಸಿತ್ತಿರುವ 9/11 ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸರಕಾರ ಇನ್ನು ಯಾವುದೇ ಆಸಕ್ತಿ ತೋರಿಸದಿರುವುದು , ನಮೂನೆ 50-53 ಮತ್ತು 57 ರ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಯ ಗಮನಕ್ಕೆ ಬಾರದೆ ಏಕಾಏಕಿ ಅಧಿಕಾರಿ ಮಟ್ಟದಲ್ಲಿ ತಿರಸ್ಕರಿಸುತ್ತಿದ್ದಾರೆ ಇದರಿಂದಾಗಿ ಅನಾಧಿಕಾಲದಿಂದಲೂ ಕೃಷಿಮಾಡಿಕೊಂಡು ಬರುತ್ತಿರುವ ಬಡ ರೈತರು ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜೊತೆಗೆ ಕರಾವಳಿ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು, ಕಲ್ಲು, ಹಾಗೂ ಕೆಂಪು ಕಲ್ಲು ನಿರ್ಭಂಧ ಮಾಡಿರುವುದರಿಂದ ಜನಸಾಮನ್ಯರಿಗೆ ಹಾಗೂ ಅದನ್ನೆ ನಂಬಿಕೊಂಡು ಇರುವ ಕಾರ್ಮಿಕರಿಗೆ ತೊಂದರೆಯಾಗಿದೆ.
ವೃಧ್ಧರಿಗೆ ಆಸರೆಯಾಗಿದ್ದ ವೃಧ್ಯಾಪ ವೇತನ , ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳನ್ನು ಅನರ್ಹಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರ ಜೊತೆಗೆ ವಿದ್ಯುತ್ ಬೆಲೆ ಏರಿಕೆ ಹೀಗೆ ಹಲವಾರು ಜನವಿರೋಧಿ ನೀತಿಗಳನ್ನು ಖಂಡಿಸುವ ಉದ್ದೇಶದಿಂದ ಉಡುಪಿ-ದ.ಕ ಜಿಲ್ಲೆಗಳ 399 ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು ಈ ನಿಟ್ಟಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ಗಳ ಎದುರುಗಡೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.