ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಆರಂಭವಾಗಿ 30 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ವೇದಿಕೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಜನಜಾಗೃತಿ ವೇದಿಕೆ’ ಎಂಬ ಸಂಘಟನೆಯ ಮೂಲಕ ಮದ್ಯವರ್ಜನ ಶಿಬಿರ, ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳು, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ವ್ಯಸನಭಾದಿತ ಕುಟುಂಬಗಳಿಗೆ ನೆರವಾಗಿದೆ. ವೇದಿಕೆಯ ಮೂಲಕ ಇದುವರೆಗೆ ಒಟ್ಟು 1515 ಮದ್ಯವರ್ಜನ ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಿ 1,04,534 ಜನರಿಗೆ ವ್ಯಸನಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ವ್ಯಸನಮುಕ್ತರು ನವಜೀವನ ಸಮಿತಿಗಳ ಮೂಲಕ ಸಭೆ ಸೇರಿ ಉತ್ತಮ ಜೀವನ ನಡೆಸುತ್ತಿದ್ದಾರೆ.  ವ್ಯಸನಮುಕ್ತರಿಗೆ ಪ್ರಾದೇಶಿಕವಾರು ಫ್ರೀ ಕಾನ್ಫರೆನ್ಸ್ ಕಾಲ್ ಸಭೆಗಳನ್ನು ಪ್ರತೀ ದಿನ ಆಯೋಜಿಸಲಾಗುತ್ತಿದೆ. ಸ್ವ ಉದ್ಯೋಗ ತರಬೇತಿಯನ್ನು ನೀಡುವುದರ ಮೂಲಕ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕಿಗೆ ಅವಕಾಶ ಕಲ್ಪಿಸಲಾಗಿದೆ. 

ಜನಜಾಗೃತಿ ವೇದಿಕೆಯ ಸಂಕಲ್ಪದAತೆ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತರಾದವರ ಶತದಿನೋತ್ಸವವನ್ನು ಶ್ರೀ ಕ್ಷೇತ್ರಕ್ಕೆ ಕರೆದೊಯ್ದು ಶ್ರೀ ಸ್ವಾಮಿಯ ದರ್ಶನ, ಕ್ಷೇತ್ರ ಭೇಟಿ ಮತ್ತು ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನವನ್ನು ನೀಡುವುದರ ಮೂಲಕ ಆಚರಿಸುತ್ತಾ ಬಂದಿದ್ದೇವೆ. ಇದೇ ಸಂದರ್ಭದಲ್ಲಿ ಅವರಿಗೆ ನವಜೀವನ ಗುರುತಿನ ಚೀಟಿ ವಿತರಣೆ ಹಾಗೂ ಪಾನಮುಕ್ತ ಸಾಧಕರಿಗೆ ‘ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 

ಇಂದಿನ ಈ ಕಾರ್ಯಕ್ರಮದಲ್ಲಿ 2021-22ನೇ ಸಾಲಿನಲ್ಲಿ ನಡೆಸಲಾದ ಮದ್ಯವರ್ಜನ ಶಿಬಿರಗಳ ಮೈಸೂರು, ಬೆಂಗಳೂರು ಮತ್ತು ಉಡುಪಿ ಪ್ರಾದೇಶಿಕ ವಿಭಾಗದ 14 ಶಿಬಿರಗಳ 696 ನವಜೀವನ ಸದಸ್ಯರು ಮತ್ತು ಕುಟುಂಬಸ್ಥರು, ಹೀಗೆ ಒಟ್ಟು 1520 ಮಂದಿ ಭಾಗವಹಿಸಲಿದ್ದಾರೆ.  ಸಮಾರಂಭದಲ್ಲಿ ಕಾಸರಗೋಡು ತಾಲೂಕಿನ ನಾರಾಯಣ ಪೂಜಾರಿ ಮತ್ತು ಶಿರಾ ತಾಲೂಕಿನ ರಂಗನಾಥ್ ಟಿ., ಇವರಿಗೆ ಜಾಗೃತಿ ಅಣ್ಣ ಪ್ರಶಸ್ತಿ ಹಾಗೂ ಶಿಡ್ಲಘಟ್ಟ ತಾಲೂಕಿನ ಶ್ರೀ ದೇವರಾಜ್, ಮದ್ದೂರು ತಾಲೂಕಿನ ಶ್ರೀ ವೆಂಕಟೇಶ್ ಬಿ.ಆರ್., ತೀರ್ಥಹಳ್ಳಿ ತಾಲೂಕಿನ ಭಾಸ್ಕರ್ ಆಚಾರ್, ಪಿರಿಯಾಪಟ್ಟಣದ ವಸಂತ ಜೆ. ರವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಾಗೂ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಫಾದರ್ ಮುಲ್ರ‍್ಸ್ ನರ್ಸಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥರಾದ ಡಾ| ಶಿಜಿ ಪಿ.ಜೆ.ಯವರು ಜನಜಾಗೃತಿ ವೇದಿಕೆಯ ಸಮುದಾಯ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿದ ಸಂಶೋಧನಾ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಪ್ರಾಪ್ತಿಯಾಗಿದ್ದು, ಅದರ ಪ್ರತಿಯನ್ನು ಈ ಕಾರ್ಯಕ್ರಮದಲ್ಲಿ ಪೂಜ್ಯರಿಗೆ ಹಸ್ತಾಂತರಿಸಲಿದ್ದಾರೆ. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಉದ್ಘಾಟನೆಯನ್ನು ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪಸಿಂಹ ನಾಯಕ್ ರವರು ಸಾಧಕ ನವಜೀವನ ಸದಸ್ಯರಿಗೆ ಸನ್ಮಾನ ಮಾಡಲಿದ್ದು, ಜನಜಾಗೃತಿ ವೇದಿಕೆಯ ಟ್ರಸ್ಟಿಗಳಾದ ಶ್ರೀಮತಿ ಶ್ರದ್ಧಾ ಅಮಿತ್ ರವರು ನವಜೀವನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಲಿದ್ದಾರೆ. ಡಾ| ಪಿ.ವಿ. ಭಂಡಾರಿ, ಮನೋವೈದ್ಯರು, ಡಾ| ಎ.ವಿ.ಬಾಳಿಗಾ ಆಸ್ಪತ್ರೆ, ಉಡುಪಿ ಇವರು ಶುಭನುಡಿಯಲಿದ್ದಾರೆ. ವೇದಿಕೆಯಲ್ಲಿ ಕೆ.ಎಸ್.ಹೆಗ್ಡೆ, ಆಸ್ಪತ್ರೆ ಮಂಗಳೂರಿನ ಮನೋವೈದ್ಯರಾದ ಡಾ| ಶ್ರೀನಿವಾಸ್ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ರವರು ಉಪಸ್ಥಿತರಿರುವರು ಎಂದು ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ. ರಾಮಸ್ವಾಮಿ, ಕಾರ್ಯದರ್ಶಿಗಳಾದ ಶ್ರೀ ವಿವೇಕ್ ವಿ. ಪಾÊಸ್, ಯೋಜನಾಧಿಕಾರಿ ಮೋಹನ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.