ಕೆಳದಿಯ ಅರಸರು ತುಳುನಾಡನ್ನು ಆಳುವ ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಕಡೆ 50ರಷ್ಟು ಲಿಂಗಾಯತ ಮಠಗಳು ಸ್ಥಾಪನೆ ಆಗಿದ್ದವು. ಅವುಗಳಲ್ಲಿ ಈಗ 20ರಷ್ಟು ಮಾತ್ರ ಉಳಿದುಕೊಂಡಿವೆ. ಅವು ಕೂಡ ಒಳ ಕೋಣೆ ಸೇರಿಕೊಂಡಂತೆ ಇವೆ.
ಕೆಳದಿಯ ವೆಂಕಟಪ್ಪ ನಾಯಕನು ಗೆರಸೊಪ್ಪೆಯಲ್ಲಿ ಜೈನ ಭೈರಾಣಿಯನ್ನು ಕೊಂದು, ಬಾರಕೂರನ್ನು ಸೂರೆಗೊಂಡು ಕರಾವಳಿಯ ಉದ್ದಕ್ಕೂ ಭಯ ಹರಡಿದ. ಬೇಕಲದವರೆಗೂ ಕೋಟೆ ಕಟ್ಟಿಸಿದರು. ಬಾರಕೂರು ಬದಲು ಕಲ್ಯಾಣಪುರದಲ್ಲಿ ಮಣ್ಣಿನ ಕೋಟೆ ಕಟ್ಟಿದರು. ಬಾರಕೂರು ಬದಿಯ ಬದಲು ಕೆಮ್ಮಣ್ಣು ಕಡೆಯ ಹಂಪನಕಟ್ಟೆಯಲ್ಲಿ ಕಡಲ ದಾರಿಯ ಸುಂಕ ವಸೂಲಿ ಮಾಡಿದರು. ಮುಂದಿನ ಕೆಳದಿಯ ಅರಸರು ತುಳುನಾಡಿನಲ್ಲಿ ಭಯದ ವಾತಾವರಣ ತೊಡೆದರು. ಈ ಅವಧಿಯಲ್ಲಿ ರಾಜರ ಲಿಂಗಾಯತ ಧರ್ಮವನ್ನು ಇಲ್ಲೂ ನೆಲೆನಾಟುವಂತೆ ಮಾಡಲು ಮಠಗಳಿಗೆ ಅವರು ಪ್ರೋತ್ಸಾಹ ನೀಡಿದರು. ಆಗ ಲಿಂಗಾಯತರು ಇಲ್ಲಿ ನೆಲೆಸಿದರು.
ಉಡುಪಿಯ ಮಹತ್ತಿನ ಮಠ
ತುಳು ಧರ್ಮದವರು ಅತ್ತ ಹೆಚ್ಚು ಒಲವು ತೋರಿಲ್ಲ. ಆಗ ಈ ಸುತ್ತಿನಲ್ಲಿ ಬಸವ ಎಂಬ ಹೆಸರು ಮಾತ್ರ ಜನಪ್ರಿಯಗೊಂಡಿದೆ. ಲಿಂಗಾಯತ ವಾಸ್ತವ್ಯ ಬಲವಾಗಿಯೇ ಇತ್ತು ಎನ್ನುವುದಕ್ಕೆ ರತ್ನಾಕರವರ್ಣಿಯ ಉದಾಹರಣೆ ಕೊಡಬಹುದು.
ಮೂಡುಬಿದಿರೆಯ ರತ್ನಾಕರವರ್ಣಿಯು ಕಾರ್ಕಳ ಭೈರರಸರ ಆಸ್ಥಾನ ಕವಿ. ಈತನ ನೆರೆಮನೆಯಲ್ಲಿ ಲಿಂಗಾಯತ ಕುಟುಂಬವೊಂದು ಇತ್ತು. ಅವರಲ್ಲಿ ಒಬ್ಬಾಕೆ ಆತನ ಪ್ರೇಯಸಿಯಾಗಿದ್ದಳು ಎಂಬ ಉಲ್ಲೇಖ ಈ ಕವಿಯ ಚರಿತ್ರೆಯಲ್ಲಿ ಬರುತ್ತದೆ. ಇದು 1600ರ ಸುತ್ತು. ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು, ರಯ್ಯಾ ಮಂಚಿದಿ ಎನೆ ತೆಲುಗ, ಅಯ್ಯಯ್ಯ ಎಂಚ ಪೊರ್ಲುಂಡೆಂದು ತುಳುವರು ಮೈಯುಬ್ಬಿ ಕೇಳಬೇಕು ಎಂದ ಕವಿ ಈತ.
ಪ್ರಮೀಳಾ ಚೋಳಯ್ಯ
ಕೆಳದಿ ಅವಸಾನದ ಬಳಿಕ ಲಿಂಗಾಯತ ಮಠಗಳಿಗೆ ಪೋಷಣೆ ಸಿಗಲಿಲ್ಲ. ಮಠದ ಆಡಳಿತದ ಕುಟುಂಬದ ಹೊರತು ಬೇರೆ ಲಿಂಗಾಯತ ಕುಟುಂಬಗಳು ತುಳುನಾಡಿನಲ್ಲಿ ಉಳಿಯಲೂ ಇಲ್ಲ. ಈ ಮಠಗಳಿಗೆ ಇದ್ದ ದತ್ತಿ ನೆಲದ ಒಂದಷ್ಟು ಗೇಣಿ ಬರುತ್ತಿತ್ತು. ಆದರೆ ಜಾಗ ಬೇರೆಯವರ ವಶವಾಗುತ್ತ ಹೋಯಿತು. ಉಳಿದ ಗೇಣಿದಾರರು ಭೂಮಸೂದೆ ಕಾಯ್ದೆಯಡಿ ನೆಲದೊಡೆಯರು ಆಗುವುದರೊಂದಿಗೆ ಈ ಮಠಗಳು ಮಠದ ಕಟ್ಟಡದ ಆವರಣದ ನೆಲಕ್ಕೆ ಮಾತ್ರ ಸೀಮಿತಗೊಂಡರು.
ಉಡುಪಿ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಜಂಗಮ ಮಠ, ಕಲ್ಲು ಮಠ ಇತ್ಯಾದಿ ಹೆಸರುಗಳಿಂದ ಕರೆಯಲಾದ ಮಠವು ಆರಂಭವಾದುದು 1715ರಲ್ಲಿ. ಒಂದು ಕಾಲದಲ್ಲಿ ಉಡುಪಿ ಮಠದವರಿಗೂ ಅಕ್ಕಿ ಸಹಾಯ ನೀಡಿದ ಮಠವಿದು. ಇಂದು ಇದು ಮಠದ ಕಟ್ಟಡ, ಸುತ್ತು ಅಂಗಳ ಮಾತ್ರ ಉಳಿಸಿಕೊಂಡು ಉಸಿರು ಹಿಡಿದಿದೆ. ಬದಿಯ ಮಠದ ಬೆಟ್ಟು ಪ್ರದೇಶ ಒಂದು ಕಾಲದಲ್ಲಿ ಮಠದ ಆಸ್ತಿ ಆಗಿತ್ತು. ಈಗ ಇಲ್ಲ.
ಈಗಿನ ಮಠಪತಿ ನಿರಂಜನ ಚೋಳಯ್ಯ
ನಿರಂಜನ ಚೋಳಯ್ಯರು ಈಗ ಮಠದ ಉಸ್ತುವಾರಿ ಹೊಂದಿದ್ದು ಅವರು ಒಂಬತ್ತನೆಯ ತಲೆಮಾರಿನವರು. ಇವರ ತಾಯಿ ಪ್ರಮೀಳಾ ಚೋಳಯ್ಯ. ಅವರು ಚಿತ್ರ ಕಲಾವಿದೆ. ಹಾಗಾಗಿ ಮಠದಲ್ಲಿ ಚಿತ್ರ ಕಲಾ ಶಾಲೆ ಆರಂಭಿಸಿದ್ದರು. ಪ್ರಮೀಳಾರ ಬಳಿಕವೂ ಅದು ನಡೆಯುತ್ತಲಿದೆ.
ಜಿಲ್ಲೆಯಲ್ಲಿ ಹಿಂದೆ ಲಿಂಗಾಯತರು ಎಂದರೆ ವರ್ಗಾವಣೆ ಆಗಿ ಬಂದ ಅಧಿಕಾರಿಗಳು, ಅಷ್ಟೇ ಬೇಗ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದರು. ಕಳೆದ ದಶಕದಿಂದ ಸ್ಥಿತಿ ಬದಲಾಗಿದೆ. ವ್ಯಾಪಾರ ವಹಿವಾಟು, ನಾನಾ ಕೆಲಸಗಳಿಗೆಂದು ಲಿಂಗಾಯತರು ಬಂದು ಸೇರಿದ್ದಾರೆ. ಬಹು ಹಿಂದೆ ಈ ಜಿಲ್ಲೆಗೆ ದುಡಿಮೆಗೆ ಬಂದ ಉತ್ತರ ಕರ್ನಾಟಕದವರಲ್ಲಿ 0.1% ಕೂಡ ಲಿಂಗಾಯತರು ಇರಲಿಲ್ಲ. ದಶಕದಿಂದ ಬಂದವರಲ್ಲಿ ಲಿಂಗಾಯತರು ಒಂದಷ್ಟು ಜನರಿದ್ದಾರೆ. ಉರ್ವ ಸ್ಟೋರ್ಸ್ ತುಳು ಅಕಾಡೆಮಿಯ ಪಕ್ಕದಲ್ಲಿ ಒಂದು ಲಿಂಗಾಯತ ಸಂಘದ ಕಟ್ಟಡವೂ ಆಗುತ್ತಿದೆ. ಅದರ ಕೆಲಸ ಕುಂಟುತ್ತ ಸಾಗಿರುವುದನ್ನು ನೋಡಿದರೆ ಲಿಂಗಾಯತರ ವಾಸ್ತವ್ಯ ಜಿಲ್ಲೆಯಲ್ಲಿ ಇನ್ನೂ ಕಡಿಮೆ ಪ್ರಮಾಣದಲ್ಲಿಯೇ ಇದೆ ಎಂಬುದು ಸ್ಪಷ್ಟ.
-By ಪೇಜಾ