ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾದ ಪ್ರಕಾರ ಜಗತ್ತಿನಲ್ಲಿ ನಿರಂತರತೆ ಉಳಿಸಿಕೊಂಡಿರುವ ಅತಿ ಹಳೆಯ ಧರ್ಮ ಜೈನ ಧರ್ಮ.
ಜೈನ ಧರ್ಮದ ಪುರಾತನತೆಯನ್ನು ಕ್ರಿ. ಪೂ. 7ನೇ ಶತಮಾನದವರೆಗೆ ಒಯ್ಯಬಹುದು. ಆದಿನಾಥ, ಅಜಿತನಾಥ, ಸಂಭವನಾಥರಿಂದ ಆರಂಭಗೊಂಡು 24ನೇ ತೀರ್ಥಂಕರ ಮಹಾವೀರರೊಂದಿಗೆ ಜೈನ ಧರ್ಮವು ಭಾರತದಲ್ಲಿ ನೆಲೆಯೂರಿತು.
ಅಧ್ಯಯನದ ಪ್ರಕಾರ 23 ತೀರ್ಥಂಕರರ ಕಾರ್ಯಕ್ಷೇತ್ರವು ಪಡುವಣ ಭಾರತ ಮತ್ತು ಭಾರತದ ಹೊರಗೆ ಪಡುವಣ ಏಶಿಯಾದಲ್ಲಿ ಇದ್ದಂತೆ ಕಂಡುಬರುತ್ತದೆ. ಮಹಾವೀರರ ಕಾರ್ಯಕ್ಷೇತ್ರ ಇಡೀ ಭಾರತ ಎಂದರೂ ಮುಖ್ಯವಾಗಿ ಮೂಡಣ ಭಾರತವಾಗಿದೆ.
ಭಾನುವಾರ ಏಪ್ರಿಲ್ 25, ವರ್ಧಮಾನ ಮಹಾವೀರನ ಜನ್ಮ ದಿನವಾಗಿದ್ದು ಸರಕಾರಿ ರಜೆ ಜೊತೆಗೆ ಆದಿತ್ಯವಾರದ ರಜೆಯೂ ಇದೆ. ಜೈನರು ಮಹಾವೀರರ ಜನ್ಮ ದಿನವನ್ನು ಮಹಾವೀರ ಜನ್ಮ ಕಲ್ಯಾಣತ್ ಎಂದು ಆಚರಿಸುತ್ತಾರೆ. ಇಡೀ ಲೋಕದ ಎಲ್ಲ ಜೈನರೂ ಅಂದು ಇಡೀ ದಿನ ಉಪವಾಸ ಇರುತ್ತಾರೆ. ಬಟ್ಟೆ ಮತ್ತು ಆಹಾರ ದಾನ ಮಾಡಲೇಬೇಕೆಂಬ ನಿಯಮವಿದೆ.
ಮಂತ್ರ ಧ್ಯಾನದಲ್ಲಿ ತೊಡಗಿರುತ್ತಾರೆ. ಣಮೋ ಅರಿಹಂತಾಣಾಂ, ಣಮೋ ಸಿದ್ದಾಣಾಂ, ಣಮೋ ಆಯರಿಯಾಣಂ, ಣಮೋ ಉವಜ್ಯಾಯಾಣಂ, ಣಮೋ ಸರ್ವ ಸಾವೂಣಾಂ ಪ್ರಾರ್ಥನೆ ಇರುತ್ತದೆ. ಸರ್ವ ಜೈನ ಅರಿಹಂತರಿಗೆ, ಸಿದ್ದ ಪುರುಷರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ, ಸಾಧುಗಳಿಗೆ ವಂದಿಸುವೆ ಎಂಬುದು ಇದರ ತಾತ್ಪರ್ಯ.
ಮಹಾವೀರರು ನಿರ್ವಾಣ ಹೊಂದಿದ ಬಿಹಾರದ ಪಾವಾಪುರಿ, 23ನೇ ತೀರ್ಥಂಕರ ಪಾರ್ಶ್ವನಾಥರು ನಿರ್ವಾಣ ಹೊಂದಿದ ಗುಜರಾತಿನ ಗಿರ್ನಾರ್ನ ಪಾಲಿಟಾನಾದಲ್ಲಿ ಈ ಹಬ್ಬ ವಿಶೇಷವಾಗಿ ನಡೆಯುತ್ತದೆ. ಪ್ರತಿಯೊಬ್ಬ ಜೈನರ ಮನೆಯಲ್ಲಿ ಹಾಗೂ ಪ್ರತಿಯೊಂದು ಜೈನ ಬಸದಿ ಆಲಯಗಳಲ್ಲಿ ಈ ಜನ್ಮೋತ್ಸವ ಜೋರಾಗಿ ನಡೆಯುತ್ತದೆ. ಆಲಯಗಳಲ್ಲಿ ರಾಜಸ್ತಾನದ ಮಹಾವೀರ್ಜಿ ದೇವಾಲಯ, ಕೊಲ್ಕತ್ತಾದ ಪಾರ್ಶ್ವನಾಥ ದೇವಸ್ಥಾನಗಳಲ್ಲಿ ಇದು ಪ್ರಮುಖ ಉತ್ಸವವಾಗಿ ನಡೆಯುತ್ತದೆ.
ಜೈನ ಮಂದಿರಗಳನ್ನು ಬಸದಿ ಎನ್ನುವರು. ಆದರೆ ಇಂದೆಲ್ಲ ಅವು ದೇವಾಲಯ ಎನಿಸಿಕೊಂಡಿವೆ. ಹೊಸ ಬಸದಿಗಳ ನಿರ್ಮಾಣವು ದೇವಾಲಯ ಮಾದರಿಯಲ್ಲಿ ಆಗಿವೆ.
ಜೈನರ ವಿಷ್ಣು, ಲಕ್ಷ್ಮಿ ಮೊದಲಾದ ದೇವರು ಹಿಂದೂಗಳದ್ದಾಗಿದ್ದಾರೆ. ಅವರ ಯಕ್ಷ ಯಕ್ಷಿ ಸಹ ಬೇರೆಡೆ ಕಳೆದು ಹೋಗಿದ್ದಾರೆ. ಈಗ ಲಭ್ಯವಿರುವ ಆಧಾರದಂತೆ ಭಾರತದಲ್ಲಿ ಜೈನರು ಪ್ರಾಕೃತ ಭಾಷೆ ಬರೆಯಲು ಬಳಸಿದ್ದೇ ಭಾರತದ ಮೂಲ ಲಿಪಿ. ಈ ಲಿಪಿಯ ಮತ್ತು ಪ್ರಾಕೃತದ ಪುರಾತನತೆಯನ್ಮು ಜೈನರೇ ಸಂಸ್ಕೃತ ಜನರಿಗೆ ಧಾರೆ ಬರೆದಿದ್ದಾರೆ. ಪ್ರಾಕೃತ ಎಂದರೆ ಪುರಾತನ, ಸಂಸ್ಕೃತ ಎಂದರೆ ಸಂಸ್ಕರಿಸಿಕೊಂಡ ಭಾಷೆ ಎಂದು ಅರ್ಥ. ಪಾಳಿ ಮೊದಲಾದ ಭಾರತದ ಮೂಲ ಭಾಷೆಗಳು ಮೊದಲೇ ಬಲಿತಿದ್ದವು. ಸಂಸ್ಕೃತದ ವೇದಗಳು ಏಕವೇದಿಯಿಂದ ಚತುರ್ವೇದಿಯವರೆಗೆ ಬಾಯಿಪಾಠದ ಮಂತ್ರಗಳು. ಸಂಸ್ಕೃತ ಬರವಣಿಗೆ ಎರವಲು ಲಿಪಿಯಿಂದ ಕ್ರಿ. ಶ. ಆರಂಭದಲ್ಲಿ ತೊಡಗಿ. ಕ್ರಿ. ಶ. 3ನೇ ಶತಮಾನದ ಬಳಿಕ ಸಾಹಿತ್ಯಗಳನ್ನು ಕಂಡಿತು.
23ನೇ ತೀರ್ಥಂಕರ ಪಾರ್ಶ್ವನಾಥ ಅವರು ಕ್ರಿ. ಪೂ. 527ರಲ್ಲಿ ನಿರ್ವಾಣ ಹೊಂದಿದರು. ಇವರ ಬಗೆಗಿನ ಲಿಖಿತ ದಾಖಲೆ ಇದೆ. ಅವರಿಗಿಂತ ಮೊದಲ 22 ತೀರ್ಥಂಕರರುಗಳ ಕಾಲದಲ್ಲಿ ಇಲ್ಲಿ ಬರವಣಿಗೆ ಇರಲಿಲ್ಲವಾದ್ದರಿಂದ ಅವರ ಖಚಿತ ದಾಖಲೆ ನಮಗೆ ಸಿಗದು. ಆದರೆ ಮಹಾವೀರರ ಕಾಲದಲ್ಲಿ 24 ತೀರ್ಥಂಕರರ ಬಗೆಗೂ ಲಿಖಿತ ದಾಖಲೆಗಳು ಆಗಿವೆ.
ಪಾರ್ಶ್ವನಾಥರ ಬಗೆಗೆ ನಾಗ ಸಂಬಂಧ ಸೂಚಿಸುತ್ತಾರೆ. ಆ ಜನರೇ ಮೂಲ ನಾಗರು. ಅಲ್ಲಿ ಆರ್ಯರು ಈ ನಾಗ ಜನರೊಡನೆ ಬೆರೆತುದರಿಂದ ನಾಗರ ಸಂಕರ ಸಮುದಾಯ ಈಗಿನ ಗುಜರಾತ್, ರಾಜಸ್ತಾನದ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಅವರು ಜೈನರಿಂದ ಲಿಪಿ ಪಡೆದಿದ್ದರು. ನಾಗರಿಂದ ಲಿಪಿ ಪಡೆದ ಆರ್ಯರು ಅದನ್ನು ದೇವನಾಗರಿ ಎಂದು ಕರೆದು ಸಂಸ್ಕೃತ ಬರೆಯಲು ಬಳಸಿದರು.
ಮಹಾವೀರರು 30ರ ಪ್ರಾಯದಲ್ಲಿ ಅಶೋಕ ಮರದಡಿ ಕುಳಿತು 12 ವರುಷ ಸಾಧನೆಯ ತಪಸ್ಸು ಮಾಡಿ ಮುಂದೆ ಧರ್ಮ ಪ್ರಚಾರ ನಡೆಸಿದರು.
ಕ್ರಿ. ಪೂ. 599ರ ನಮ್ಮ ಚೈತ್ರ ಮಾಸದ ಶುಕ್ಲ ಪಕ್ಷದ 13ನೇ ವರ್ಧಿಸುವ ಚಂದ್ರನ ದಿನದಂದು ಮಹಾವೀರರ ಜನನವು ತ್ರಯೋದಶಿ ತಿಥಿಯಲ್ಲಿ ಆಯಿತು. 2021ರಲ್ಲಿ ಏಪ್ರಿಲ್ 24 ಸಂಜೆ 7•16ರಿಂದ ತೊಡಗಿ ಏಪ್ರಿಲ್ 25ರ ಸಂಜೆ 4•12 ಗಂಟೆಯವರೆಗೆ ಈ ತಿಥಿ ಇದೆ. ಹಾಗಾಗಿ ಈ ವರುಷ ಏಪ್ರಿಲ್ 25ನ್ನು ಮಹಾವೀರರ ಜಯಂತಿ ಎಂದು ಆಚರಿಸಲಾಗುತ್ತಿದೆ. -ಪೇಜಾ