ಇಂತಹ ಸಾಹಿತ್ಯ ಭಾರತದಲ್ಲಿ ಬಹು ಹಿಂದಿನಿಂದ ಇತ್ತೇ ಎಂದು ಪರಿಶೀಲನೆ ಮಾಡಿದರೆ ಇದಕ್ಕೆಲ್ಲ 500 ವರುಷ ದಾಟುವುದಿಲ್ಲ. ಅದಕ್ಕಿಂತ ಹಿಂದೆ ರಾಮಾಯಣ ಇತ್ತಲ್ಲ? ಇತ್ತು, ಅದಕ್ಕೆ ಕತೆ ಕಾವ್ಯಗಳಿಗಿಂತ ಹೆಚ್ಚಿನ ಮಹತ್ವ ಇರಲಿಲ್ಲ. ಒಂದಕ್ಕೊಂದು ವೈರುಧ್ಯದ ರಾಮಾಯಣಗಳು ಇದ್ದವು. ವಾಲ್ಮೀಕಿ ರಾಮಾಯಣಕ್ಕೆ ಕಾವ್ಯ ಸ್ಪರ್ಶ ದಾಟಿ ಏನೂ ಹೇಳುವುದಿಲ್ಲ. ತುಲಸಿದಾಸರ ರಾಮ ಚರಿತ ಮಾನಸ ಬಂದ ಮೇಲೆ ಒಂದೇ ‌ಬಾಣ, ಒಂದೇ ಮಾತು, ಒಂದೇ ಮಡದಿ ರಾಮ ಇಂತಹ ‌ದೈವತ್ವದ ಕತೆಗಳು ಬರತೊಡಗಿದವು.

ವಾಲ್ಮೀಕಿ ರಾಮಾಯಣದಲ್ಲಿ ಇಂತಹ ‌ದೈವತ್ವದ ಉಲ್ಲೇಖಗಳೆಲ್ಲ ಇಲ್ಲ. ಭಾಷಾ ಅಧ್ಯಯನದ ಪ್ರಕಾರ ಮಹಾಭಾರತ ರಚನೆಯ ಬಳಿಕ ರಾಮಾಯಣ ಬರೆಯಲಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕುಮಾರವ್ಯಾಸನಂತೂ ತಿಣುಕಿದನು ಫಣಿರಾಯ ರಾಮಾಯಣಗಳಾ ಭಾರದಲಿ ಎಂದು ಮಹಾಭಾರತ ಕೈಗೆತ್ತಿಕೊಂಡಿದ್ದಾನೆ.

ಇನ್ನು ಈ ವಾಲ್ಮೀಕಿ ನಾರದರ ಭಾಷೆ ಯಾವುದು? ಸುಲಿಗೆ ಮಾಡುತ್ತಿದ್ದ ವಾಲ್ಮೀಕಿಗೆ ರಾಮ ಅಂಥ ಹೇಳಲೂ ಬರುತ್ತಿರಲಿಲ್ಲ. ಮರ ಮರ ಎಂದು ಮತ್ತೆ ಮತ್ತೆ‌ ಹೇಳಿ ರಾಮ ಎಂದು ಹೇಳಲು ಕಲಿತನಂತೆ. ಮರ ಎನ್ನುವುದು ತುಳು, ಕನ್ನಡ, ತಮಿಳು ಸಹಿತ ದ್ರಾವಿಡ ಭಾಷೆಯ ಶಬ್ದ. ಅವರ ಭಾಷೆ ನಮ್ಮ ತುಳುವೋ ಕನ್ನಡವೋ ಆಗಿರಬೇಕು ಬಿಡಿ.

ಅಯೋಧ್ಯೆಯ ಗೆಜೆಟಿಯರ್ ನೋಡಿದರೆ ಅದು ಜೈನ ಮತ್ತು ಬೌದ್ಧ ಕೇಂದ್ರವಾಗಿತ್ತು. ಉತ್ಖನನದಲ್ಲೂ ಅದನ್ನು ಪುಷ್ಟಿಕರಿಸುವ ವಸ್ತುಗಳು‌ ದೊರೆತಿವೆ. ಹಿಂದೂಗಳಿಗಿಂತ ಈ ಅಯೋಧ್ಯೆಯು ಯವನ ಬೌದ್ಧರ ಅಂದರೆ ಬುದ್ಧ ಧರ್ಮ ಸ್ವೀಕರಿಸಿದ ಗ್ರೀಕ್ ಜನರ ಮುಖ್ಯ ನೆಲೆ ಆಗಿತ್ತು. ಚಾರಿತ್ರಿಕವಾಗಿ ಅಯೋಧ್ಯೆಯು ರಾಜಧಾನಿ ಆಗಿರಲಿಲ್ಲ. ಪ್ರಸೇನಜಿತನ ಚಳಿಗಾಲದ ಅರಮನೆ ಒಂದು ಇಲ್ಲಿತ್ತು. ಇಲ್ಲಿ ಭಾರತದ ಮೊದಲ ಬ್ರಾಹ್ಮಣ ರಾಜ ಪುಷ್ಯಮಿತ್ರ ಶುಂಗನ ಶಾಸನ ದೊರೆತಿದೆ. ಅದರಲ್ಲೂ ರಾಮನ ಇಲ್ಲವೆ ರಾಮ ಮಂದಿರದ ಉಲ್ಲೇಖ ಇಲ್ಲ.

ವೇದ ಉಪನಿಷತ್ತುಗಳು ‌ಮುಖ್ಯವಾಗಿ ಪ್ರಕೃತಿ ಪೂಜೆಯನ್ನು ಹೇಳಿದೆ, ಯಜ್ಞ ಮಂತ್ರಗಳ ಕೋಶವಾಗಿದೆ. ಅಲ್ಲಿ ಸಹ ರಾಮನ ಉಲ್ಲೇಖ ಇಲ್ಲ. ದಾಸರಲ್ಲಿ ಕವಿಯೂ ಆದ ಕನಕದಾಸರು ಮೋಹನ ತರಂಗಿಣಿ ಮೊದಲಾದ ಕಾವ್ಯಗಳ ಜೊತೆಗೆ ರಾಮಧಾನ್ಯ ಚರಿತೆ ಎಂಬ ವಿಡಂಬನೆಯನ್ನೂ  ಬರೆದಿದ್ದಾರೆ. ಅದು ಸಹ 500 ವರುಷ ಈಚಿನದೇ ಆಗಿದೆ.

ದೇವಸ್ಥಾನಗಳ ಚರಿತ್ರೆ ಕೂಡ ಇದಕ್ಕೆ ಹೊರತಾಗಿ ಇಲ್ಲ. ದೇವಿಯ, ಶಕ್ತಿಯ, ಲಿಂಗದ, ಬಸದಿ, ಚೈತ್ಯಾಲಯಗಳಷ್ಟು ಹಳೆಯ ರಾಮ ಮಂದಿರಗಳು ಎಲ್ಲೂ ಕಂಡುಬರುವುದಿಲ್ಲ. ರಾಮೇಶ್ವರದಂಥ ಮಂದಿರಗಳು ಇದ್ದು, ಇಲ್ಲಿ ರಾಮನು ಶಿವನನ್ನು ಪೂಜಿಸಿದ ನೆನಪಿನ ಗುಡಿಗಳು ಇವೆ ಅಷ್ಟೆ. ಇನ್ನು ರಾಮ ಭಜನಾ ಮಂದಿರಗಳು ಶತಮಾನದ ಇತಿಹಾಸ ಮಾತ್ರ ಹೊಂದಿದೆ.

                                                                      ತಾಯ್‌ಲ್ಯಾಂಡ್‌ನ ರಾಮ ರಾಜ ವಂಶ

ತಾಯ್‌ಲ್ಯಾಂಡ್‌ನಲ್ಲಿ ರಾಮ ರಾಜರು, ಅಯೋಧ್ಯೆ ಇತ್ಯಾದಿ ಇದೆ. ಆದರೆ ಅವರು ಪುರಾತನ ಎಂದು ಹೇಳಿದರೂ ಅವರ ರಾಜ ವಂಶದ ಲಿಖಿತ ಚರಿತ್ರೆ 500 ವರುಷ ದಾಟುವುದಿಲ್ಲ. ಇಲ್ಲಿನ 1ನೇ ರಾಮನ ‌ಆಡಳಿತ 1782ರಿಂದಷ್ಟೆ ಆರಂಭವಾಗುತ್ತದೆ.

ಇತ್ತೀಚಿಗೆ ರಾಜಸ್ತಾನದಲ್ಲೂ ರಾಮ ವಂಶದ ಮಹಿಳೆ ಒಬ್ಬರು‌ ಕಂಡು ಬಂದುರು. ಇವರು ಹೇಳಿದ್ದು ಕೂಡ 50ನೇ ಸುತ್ತಿನ ತಲೆಮಾರು. ಭಾರತದಲ್ಲಿ ರಾಮ ಜನಪ್ರಿಯ ಹೆಸರು. ಬ್ರಾಹ್ಮಣರಿಗಿಂತ ಶೂದ್ರ ದಲಿತರಲ್ಲೇ ಈ ಹೆಸರು ಹೆಚ್ಚು ಚಾಲ್ತಿಯಲ್ಲಿ ಇತ್ತು. ರಾಮಲೀಲಾ ದಾಖಲೆ ‌300 ವರುಷ ದಾಟುವುದಿಲ್ಲ.

ಮಹಾತ್ಮಾ ಜ್ಯೋತಿಬಾ ಫುಲೆ ಅವರು ರಾಮನನ್ನು‌ ಸ್ಥಳೀಯ ರಾಜ‌ ಎಂದು ತನ್ನ ಗುಲಾಮಗಿರಿ ಪುಸ್ತಕದಲ್ಲಿ ಬರೆದಿದ್ದಾರೆ. 1871ರಲ್ಲಿ ಪ್ರಕಟವಾದ ಈ ಪುಸ್ತಕದ ಪ್ರಕಾರ ಆರ್ಯ ದಾಳಿಕೋರರ ನಾಯಕ ಪರಶುರಾಮನನ್ನು ರಾಮನು ಸೋಲಿಸಿ ಓಡಿಸಿದ. ಪರಶುರಾಮ ಮನ ಒಡೆದು ಕರಾವಳಿಗೆ ಬಂದು ಒಂಟಿತನದಿಂದ ಆತ್ಮಹತ್ಯೆ ಮಾಡಿಕೊಂಡ. ಫುಲೆ ಅವರ ಈ ಪುಸ್ತಕವು ಸ್ಲೇವರಿ ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ. 1992ರ ಸುತ್ತಿನಲ್ಲಿ ಮಹಾರಾಷ್ಟ್ರ ಸರಕಾರ ಅದನ್ನು ಪ್ರಕಟಿಸಿದೆ. ರಾಮರಸ‌ ಎಂಬುದು ಭಾರತದಲ್ಲಿ ಸಾಧುಗಳ ಒಂದು ಜನಪ್ರಿಯ ಪೇಯ. ಗಾಂಜಾ ಅರೆದು‌ ಮಾಡುವ ಅಮಲು ಪಾನೀಯವಿದು. ರಾಜಕುಮಾರ್‌ ರೂಪಾದೇವಿ ಒಂದು ಚಿತ್ರದಲ್ಲಿ ಇದನ್ನು ಕುಡಿದು ಆಕಾಶ ಭೂಮಿ ಮೇಲೆ ಕೆಳಗೆ ಏಕಾಯ್ತು‌ ಎಂದು ಹಾಡುತ್ತಾರೆ. ಹೌದು, ಆಕಾಶ ಭೂಮಿ ಮೇಲು ಕೆಳಗಾದ ಸಾಂಸ್ಕೃತಿಕ ಪಲ್ಲಟವೇ ದೇವರುಗಳ ಈ ಗೋಜಲುಗಳಿಗೆಲ್ಲ ಕಾರಣ.

ಮೈಸೂರು ಬಳಿಯ ಸಿದ್ದರಾಮನಹುಂಡಿ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರು. ಅಲ್ಲೀಗ ಕೋದಂಡರಾಮನ ಮಂದಿರ ಮರು ನಿರ್ಮಾಣಗೊಂಡಿದೆ. ಅದೂ ರಾಮನೆ, ಆದರೆ ಕೆಲವರ ಅಯೋಧ್ಯೆಯ ಗಲಾಟೆ ರಾಮನಲ್ಲ. ರಾಮ ಎಂದರೆ ಚೆಂದ. ಆ ಭಾವನೆ ಅಂದಗೆಡದಿರಲಿ. 


-By ಪೇಜಾ