ಪುತ್ತೂರು: “ವಿದ್ಯಾರ್ಥಿ ಶಕ್ತಿ ಅತ್ಯಂತ ವಿಶೇಷವಾದದ್ದು ಮತ್ತು ಪ್ರಭಾವಶಾಲಿಯಾದುದು. ಸಮರ್ಪಕವಾದ ಈ ಸಂಘಟನಾ ಶಕ್ತಿಯನ್ನು ಬಳಸಿಕೊಂಡರೆ ಸಮಾಜದಲ್ಲಿ ಧನಾತ್ಮಕವಾದ ಬೆಳವಣಿಗೆಯನ್ನು ರೂಪಿಸಬಹುದಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಂಡಷ್ಟು ನಾಯಕತ್ವ ಗುಣಬೆಳೆಯಲು ಸಾಧ್ಯವಾಗುತ್ತದೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಇವರು ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ 2025-26 ನೇಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮೊದಲು ಜೀವನವನ್ನು ಕಟ್ಟುವ ಕಾರ್ಯವನ್ನು ಕೈಗೊಳ್ಳಬೇಕು. ಸಣ್ಣ ಗುರಿಯನ್ನು ಇರಿಸಿಕೊಳ್ಳದೆ, ಬಹುದೊಡ್ಡ ಗುರಿಯನ್ನು ಇರಿಸಿಕೊಂಡು ಮಹತ್ವಾಕಾಂಕ್ಷೆಯಿಂದ ಬೆಳೆದಾಗ ಕಾರ್ಯ ಸಾಧಿತವಾಗುತ್ತದೆ. ನಿರಂತರವಾದ ಶ್ರಮ ನಮ್ಮನ್ನು ಸಾಧನೆಯ ತುತ್ತತುದಿಗೆ ತಲುಪಿಸುವಲ್ಲಿ ಸಹಕಾರಿಯಾಗುತ್ತದೆ. ಪ್ರಜಾಪ್ರಭುತ್ವದ ಶ್ರೇಷ್ಠ ಅವಕಾಶವಾಗಿರುವ ಚುನಾವಣಾ ಪ್ರಕ್ರಿಯೆಯನ್ನು ವಿನೂತನವಾಗಿ ಪ್ರಯೋಗಿಸಿ ವಿದ್ಯಾರ್ಥಿಗಳು ಮತದಾನಗೈಯುವಲ್ಲಿ ಉತ್ತೇಜಿಸಿದ ವಿದ್ಯಾಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ.ಮಾತನಾಡುತ್ತಾ, “ನಾಯಕತ್ವ ಗುಣ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ನಾಯಕತ್ವ ಎಂದರೆ ಜವಾಬ್ದಾರಿ. ಅದರ ಹಾದಿ ಸುಲಭವಲ್ಲ. ಸ್ವಂತ ಸುಖಕ್ಕಿಂತ ಪರರ ಸುಖದ ಬಗೆಗೆ ಚಿಂತಿಸುವವನು ಉತ್ತಮ ನಾಯಕನಾಗುತ್ತಾನೆ. ನಾಯಕತ್ವ ಬೆಳೆಯಲು ಆತ್ಮವಿಶ್ವಾಸ ಅತೀ ಮುಖ್ಯವಾಗಿದ್ದು, ದೇಶವನ್ನು ನಡೆಸುವ, ನೇತೃತ್ವವನ್ನು ಸ್ವೀಕರಿಸುವ , ತಪ್ಪನ್ನು ಮನ್ನಿಸದೆ ಮುನ್ನಡೆಸುವ ಸಮರ್ಥ ನಾಯಕನ ಅವಶ್ಯಕತೆ ಇಂದಿನ ದಿನಗಳಿಗಿದೆ. ಸಂಸ್ಕಾರ-ಸಂಸ್ಕೃತಿ ಜೊತೆಗೂಡಿಗೊಂಡಾಗ ನಾಯಕತ್ವ ಕಳೆಗಟ್ಟುತ್ತದೆ”ಎಂದು ಕಿವಿಮಾತು ಹೇಳಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಲೇಜು ಅಧ್ಯಕ್ಷರಾಗಿ ದ್ವಿತೀಯ ವಿಜ್ಞಾನ ವಿಭಾಗದ ಭವಿಷ್ ಜಿ ,ಕಾರ್ಯದರ್ಶಿಯಾಗಿ ದ್ವಿತೀಯ ಕಲಾವಿಭಾಗದ ಬಿಂದು ಕೆ.ಜೆ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಗ್ರೀಷ್ಮಾ ಎಸ್.ಎ. ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಾತ್ವಿಕ್ ಆರ್ ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಮೃದ್ಧಿ ಜೆ ಶೆಟ್ಟಿ ಆಯ್ಕೆಯಾಗಿರುತ್ತಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಹಾಗೂ ಕ್ರೀಡಾ ಪ್ರತಿನಿಧಿಗಳಿಗೆ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ.ಪ್ರಮಾಣವಚನ ಬೋಧಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್ ಚುನಾವಣಾ ಪ್ರಕ್ರಿಯೆಯ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಕೆ.ಎನ್ ಸುಬ್ರಹ್ಮಣ್ಯ,ಡಾ. ಕೃಷ್ಣಪ್ರಸನ್ನ.ಕೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿಶ್ವನಾಥ್ ಕೆ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಎಂ. ಗೋಪಾಲಕೃಷ್ಣ ಭಟ್ ನೆರೆದವರನ್ನು ಸ್ವಾಗತಿಸಿದರು. ಉಪನ್ಯಾಸಕಿಯರಾದ ಭಾಗ್ಯಶ್ರೀ ಬಿ ಕಾರ್ಯಕ್ರಮವನ್ನು ನಿರೂಪಿಸಿ, ಯಶವಂತಿ ಡಿ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.