ಈಗ ಕಳೆದುಕೊಂಡ ನೆಲದಂತೆ ಕಾಣುವ ಹಳೆಯ ಬಸ್ ನಿಲ್ದಾಣದಲ್ಲಿ ಹಿಂದೆ ಮುಂಜಾವ  4ರಿಂದ ರಾತ್ರಿ 11ರವರೆಗೆ ಹಗಲಿಗೆ ಸವಾಲಾಗಿ ಸಾರಿಗೆ ವ್ಯವಸ್ಥೆ ಇತ್ತು. ಮುಂಜಾವ 4 ಗಂಟೆಗೆ ಎರಡ್ಮೂರು ಹೋಟೆಲುಗಳು ಕೂಡ ತೆರೆದು ವ್ಯಾಪಾರ ನಡೆಸುತ್ತಿದ್ದವು. 60ನೇ ದಶಕ ಆರಂಭ ಆಗುವ‌ವರೆಗೆ ಬಸ್ಸಿನ ವೇಗ ಸರಾಸರಿ ‌20 ಕಿಮೀ ಇದ್ದುದರಿಂದ ಮೈಸೂರಿಗೆ, ಬೀರೂರು ಕಡೆಗೆ ಸಂಪರ್ಕ ನೀಡುವ ಬಸ್ಸುಗಳು ಮುಂಜಾವ 4 ಗಂಟೆಗೆ ಹೊರಡುತ್ತಿದ್ದವು. 

ಸ್ವಾತಂತ್ರ್ಯ ಸಿಗುವ‌ವರೆಗೆ ಮಂಗಳೂರು ಉಡುಪಿ ನಡುವೆ ಮುಂಜಾನೆ ಸಂಜೆ ಒಂದು ಬಸ್ಸು ಮಾತ್ರ ಇತ್ತು. ಅದು ಗುರುಪುರ, ಮೂಡುಬಿದಿರೆ, ಕಾರ್ಕಳ ಹಾದಿಯಾಗಿ ಉಡುಪಿಗೆ ಹೋಗುತ್ತಿತ್ತು. ಮುಂಜಾವ ಹೊರಟ ಬಸ್ಸು ವಾಪಾಸಾಗಲು‌ ತಡ ರಾತ್ರಿ. ಆಗಿನ ಬಸ್ಸುಗಳು ಈಗಿನ ಲಾರಿಯಂತೆ ಮೂತಿ ಹೊಂದಿರುತ್ತಿದ್ದವು. ಅದಕ್ಕೆ ಒಂದು ಕಬ್ಬಿಣದ ರಾಡ್ ‌ಹಾಕಿ ತಿರುಗಿಸಿದರೆ ಬಸ್ಸು ‌ಸ್ಟಾರ್ಟ್ ಆಗುತ್ತಿತ್ತು.

ನಡು ನಡುವೆ ನದಿ ದಾಟುವಂತೆ ಸಂಪರ್ಕ ಬಸ್ಸುಗಳು ‌ಉಡುಪಿ ಅಂದರೆ ಆಗಿನ ಒಡಿಪುಗೆ ಮೂಲ್ಕಿ ಮಾರ್ಗವಾಗಿ ಇದ್ದವು. ಮುಂದೆ ಕೂಳೂರು, ಆಮೇಲೆ ಹೆದ್ದಾರಿ ಸೇತುವೆಗಳೆಲ್ಲ ಆದವು. ಕುಡ್ಲ ಒಡ್ಪು ಬಸ್ಸು ಸೇವೆ ಹೆಚ್ಚಿದವು.

ಇಂದು ಕುಡ್ಲ ಒಡ್ಪು ಇಲ್ಲವೇ ಮಂಗಳೂರು ಉಡುಪಿ ಸಂಪರ್ಕಕ್ಕೆ ಓಡಾಡುವ ಬಸ್ಸುಗಳು ದೇಶದ ಬೇರೆಲ್ಲೂ ಎರಡು ನಗರ ಇಲ್ಲವೆ ಜಿಲ್ಲಾ ಕೇಂದ್ರಗಳ ನಡುವೆ ಇಲ್ಲ. ಮುಂಬಯಿಯ ಲೋಕಲ್ ರೈಲು ಓಡಾಟವನ್ನು ಇದಕ್ಕೆ ಹೋಲಿಸಬಹುದು. ಆದರೆ ಕೊರೋನಾ ಮುಂಬಯಿಯ 24 ಗಂಟೆಗಳ ಜೀವಂತಿಕೆಯನ್ನು ಕಸಿದುಕೊಂಡಿದೆ.

ಹಳೆಯ ಬಸ್ಸು ನಿಲ್ದಾಣದ ಇನ್ನೊಂದು ಮರೆಯುವಂತಿಲ್ಲ. ಸದಾ ಅಲ್ಲಿ ಕುಡ್ಲ ಒಡ್ಪು ಏರ್ ಎಂದು ಕೂಗಿ ಕರೆಯುವ ಕಂಡಕ್ಟರ್‌ಗಳು ಇದ್ದರು. 1995ರವರೆಗೂ ಅಂಥ ನಿರ್ವಾಹಕರನ್ನು ಕಾಣಬಹುದಿತ್ತು. ಆಗ ಮಂಗಳೂರು ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರುಕಟ್ಟೆ ಭಾಷೆ ತುಳು ಆಗಿತ್ತು. ಅದು ಬಸ್ ನಿಲ್ದಾಣ, ತರಕಾರಿ ವ್ಯಾಪಾರ, ಬಟ್ಟೆ ತಯಾರಿಕೆ, ಎಲ್ಲ ಮಾರಾಟ, ಮೊದಲ ಕುಶಲೋಪರಿ ತುಳುವಿನಲ್ಲಿ ಆರಂಭವಾಗುತ್ತಿತ್ತು.

ಬ್ಯಾರಿ, ಕೊಂಕಣಿ, ಹವ್ಯಕ, ಮಲಯಾಳಂ, ಕನ್ನಡ ಎಲ್ಲರಿಗೂ ಇಲ್ಲಿ ತುಳು ಒಲ್ಪಾಂಡ್ ಅನಿವಾರ್ಯದ ಮಾತುಕತೆಯ ನುಡಿ ಆಗಿತ್ತು.  21ನೇ ಶತಮಾನದಲ್ಲಿ ಮಂಗಳೂರು ಉಡುಪಿಗಳಲ್ಲಿ ತುಳು ಮಾರುಕಟ್ಟೆ ಇಲ್ಲವೇ ವ್ಯವಹಾರ ಭಾಷೆಯಾಗಿ ಉಳಿದಿಲ್ಲ. ಕುಡ್ಲ ಒಡ್ಪು ಎಂದರೆ ಏನೆಂದು ತಿಳಿಯದೆ ತಿಣುಕಾಡುವ‌ವರು ಇಂದು ಇಲ್ಲೆಲ್ಲ ಕಂಡು ಬರುತ್ತದೆ. 

ಉಡುಪಿಯ ಖದೀಮರಂತೂ ನಾನು ಸಣ್ಣವನಿದ್ದಾಗ ಇದ್ದ ಒಡಿಪು ಇಂಗ್ಲಿಷ್ ಸ್ಪೆಲ್ಲಿಂಗ್ ಕೂಡ ಬದಲಿಸಿದ್ದಾರೆ. ಆಗ ಬರೆಯುತ್ತಿದ್ದುದು‌ Udipi ಎಂದು, ಇಂದು ‌ಬರೆಯುವುದು Udupi ಎಂದು. ಅಂದರೆ ತುಳು ಒಡ್ಪು ಒಡಿಪು‌ ಸಮಾಧಿ ಬದಲಾವಣೆ ಇದು. 

ಕಾಸರಗೋಡು ಬಸ್ ನಿಲ್ದಾಣಕ್ಕೆ ತುಳುನಾಡು ಬಸ್ ನಿಲ್ದಾಣ ಎಂದು ಹೆಸರು ಇಡಲಾಗಿದೆ. ಕುಡ್ಲದ ತುಳುವರಿಗೆ ತುಳು ಭಾವನೆಯೇ ಇಲ್ಲವಾದುದರಿಂದ ಕುಡ್ಲ ಒಡ್ಪು ‌ಹುಡುಕುವ ಕಾಲ ಮೂಲೆಗೆ ಬಿದ್ದಿದೆ. ಅದನ್ನು ಇನ್ನು ಉತ್ಖನನ ಮಾಡಿ ಹಿಡಿಯಬೇಕಷ್ಟೆ.

ಅಂದಿನ ತುಳುವರು ಪುಸ್ತಕದ ಕನ್ನಡ ಅಗತ್ಯ ಬಿದ್ದರೆ ಮಾತನಾಡುತ್ತಿದ್ದರು. ಇಂದಿನ ತುಳುವರು ಅಚ್ಚು ಕನ್ನಡದಿಂದ ಆಚೆಗೆ ಬಂದಿದ್ದಾರೆ. ತುಳುವರು ಮಾನಸಿಕವಾಗಿ ಕುಡ್ಲ ಒಡ್ಪುದಿಂದ ಹೊರಗೆ ಬಂದಿರುವುದರಿಂದ ಅವರನ್ನು ಮಾನಸಿಕವಾಗಿಯೇ ಇದಕ್ಕೆಲ್ಲ ಮತ್ತೆ ತಯಾರಿಸಬೇಕಾಗಿದೆ.

ನೆನಪು ‌20 ಕಿಮೀ ‌ಓಟದ ಬಸ್ಸು, ನೆನಪು ಲಾರಿ‌ ಮೂತಿ ತಿವಿಸಿಕೊಳ್ಳುವ‌ ಬಸ್ಸು, ನೆನಪು ಮಾರುಕಟ್ಟೆ ಭಾಷೆಯಾಗಿದ್ದ ತುಳು, ನೆನಪು ಕುಡ್ಲ ಒಡ್ಪು ‌ಕಂಡಕ್ಟರ್!


-By ಪೇಜಾ