ಬಾಲಕ ಭರತ್ ಕೊಲೆ ಮಾಡುವಾಗ ಬಾಲಕನ ತಾಯಿ ಗೀತಾ ಬಾರಕೇರ ಹಾಗೂ ಸಹ ಶಿಕ್ಷಕ ಸಂಗನಗೌಡ ಪಾಟೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಹದ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯ ಹಲ್ಲೆಗೆ ಎರಡನೆಯ ಬಲಿ ಸಂದಾಯವಾಯಿತು. ಚಿಕಿತ್ಸೆ ಫಲಿಸದೆ ಗೀತಾ ಬಾರಕೇರ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಸು ನೀಗಿದರು.

ಆರೋಪಿ ಮುತ್ತಪ್ಪನನ್ನು ನರಗುಂದ ಬಳಿಯ ರೋಣ ಕ್ರಾಸ್‌ನಲ್ಲಿ ಬೇರೆ ಊರಿಗೆ ವಾಹನ ಹಿಡಿಯಲು ಪ್ರಯತ್ನಿಸುವಾಗ ಮೊನ್ನೆ ಪೋಲೀಸರು ಬಂಧಿಸಿದ್ದರು.

ನನಗೂ ಗೀತಾ ಅವರಿಗೂ ಸಾಮಿಪ್ಯ ಇತ್ತು. ಇತ್ತೀಚೆಗಿನ ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಗೀತಾಳು ಸಹ ಶಿಕ್ಷಕ ಸಂಗನಗೌಡ ಪಾಟೀಲ ಜೊತೆಗೆ ಸಲಿಗೆಯಿಂದ ವರ್ತಿಸಿದ್ದು ನನಗೆ ಹಿಡಿಸದ್ದರಿಂದ ಹಲ್ಲೆ ಮಾಡಿದೆ ಎಂದು ಆರೋಪಿ ಹೇಳಿದ್ದಾನೆ. ಗೀತಾ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆಯ ಮೊಬಾಯಿಲ್‌ನಲ್ಲಿ ಆರೋಪಿಯ ಹೇಳಿಕೆಗೆ ಯಾವುದೇ ಚಾಟಿಂಗ್ ಸಾಕ್ಷ್ಯ ಇಲ್ಲ. ಆದರೆ ಮುತ್ತಪ್ಪ ಹಡಗಲಿಯು ಗೀತಾ ಬಾರಕೇರ ಮೇಲಿನ ಮೋಹದಿಂದ ಈ ಹಲ್ಲೆ ನಡೆಸಿದ್ದಾನೆ ಎಂದು ಗದಗ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದರು.

ಹೇಳಿಕೆ ನೀಡದೆಯೇ ಗೀತಾ ಬಾರಕೇರ ಈಗ ನಿಧನರಾಗಿದ್ದಾರೆ. ಈ ರಕ್ತಪಾತ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು.