ಉಡುಪಿ, ಅಕ್ಟೋಬರ್ 2: ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿದ ಸ್ವಾತಂತ್ರ್ಯ ಪೂರ್ವದ ರೇಡಿಯೋ ಟವರ್ ನ ಪ್ರಸಾರ ಕಾರ್ಯಕ್ಕೆ ಶಾಸಕ ರಘುಪತಿ ಭಟ್ ಗಾಂಧೀ ಜಯಂತಿಯಂದು ಚಾಲನೆ ನೀಡಿದರು.

1938 ರಲ್ಲಿ ನಿರ್ಮಾಣಗೊಂಡಿರುವ ಈ ಟವರ್ ಕೆಲವು ವರ್ಷಗಳಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದು, ಕಳೆದ ಬಾರಿಯ ಗಾಂಧೀ ಜಯಂತಿ ಕಾರ್ಯಕ್ರಮದಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಇದನ್ನು ದುರಸ್ತಿಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಲು  ಸೂಚಿಸಿದ್ದರು.

ಪ್ರಸ್ತುತ ದುರಸ್ತಿಗೊಂಡಿರುವ ಈ ಟವರ್ ಮೂಲಕ, ಪಾರ್ಕ್ ಗೆ ಆಗಮಿಸುವ ಸಾರ್ವಜನಿಕರು, ಟವರ್ ನ ಕೆಳಗಡೆ ಇರುವ ಕಲ್ಲುಬಂಡೆ ಹಾಗೂ ಸುತ್ತಲಿನ ಪ್ರದೇಶದಲ್ಲಿ  ಕುಳಿತು  ಪ್ರತಿದಿನ ಸಂಜೆ 5.30 ರಿಂದ 8 ಗಂಟೆಯವರೆಗೆ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ಟವರ್ ನ ಹಳೆಯ ಮೂಲ ಸ್ವರೂಪದಲ್ಲಿ ಏನೂ ಬದಲಾವಣೆ ಮಾಡದೆ, ಹೊಸ ಮೈಕ್ ಗಳು ಮತ್ತು ರೇಡಿಯೋ ಅಳವಡಿಸಿದ್ದು,   ಕೇಳುಗರಿಗೆ ಹೊಸ ಅನುಭವ ನೀಡಲಿರುವ ಈ ಟವರ್, ಹೆಚ್ಚು ಕರ್ಕಶವಿಲ್ಲದೇ ಪಾರ್ಕ್ ನೊಳಗಿನ ಕೇಳುಗರಿಗೆ ಮಾತ್ರ ಮಾರ್ಧನಿಸಲಿದೆ. ಅಲ್ಲದೇ ಈ ಹಿಂದಿನಂತೆ ಬೆಳಗ್ಗೆ 8, ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಒಮ್ಮೆ ಟವರ್ ಮೂಲಕ ಅಲಾರಂ ಮೊಳಗಲಿದೆ.