ಉಜಿರೆ: ಇದೇ 18 ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದಪೂಜ್ಯ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಕಿರಿಯ ಸ್ವಾಮೀಜಿ ಪೂಜ್ಯ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಗುರುವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. 

ಸ್ವಾಮೀಜಿದ್ವಯರು ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಆಶೀರ್ವಚನ ನೀಡಿದರು. ಕ್ಷೇತ್ರದ ಸಂಪ್ರದಾಯದಂತೆ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಲಾಯಿತು. 

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರಿಗೆ ಭಕ್ತ್ತಿಪೂರ್ವಕ ಸ್ವಾಗತಕೋರಿ ಪೂಜ್ಯರ ಪರ್ಯಾಯ ಪೀಠಾರೋಹಣ ಹಾಗೂ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ ಅವರ ಅನುಗ್ರಹವನ್ನು ಕೋರಿದರು. ತಮಗೂ ಪೂಜ್ಯ ಸ್ವಾಮೀಜಿಯವರಿಗೂ ಕಳೆದ 40 ವರ್ಷಗಳಿಂದ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಮಾಡಲು ತಮಗೆ ಅವಕಾಶ ದೊರಕಿರುವುದು ವಿಶೇಷ ಸಂತೋಷ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದರು. 

ಧರ್ಮಸ್ಥಳದ ವತಿಯಿಂದ ಸ್ವಾಮೀಜಿಯವರನ್ನು ಹೆಗ್ಗಡೆಯವರು ಗೌರವಿಸಿದರು. 

ಆಶೀರ್ವಚನ ನೀಡಿದ ಪೂಜ್ಯ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಾತನಾಡಿ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಧರ್ಮಸ್ಥಳದ ಭವ್ಯ ಪರಂಪರೆ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಇಲ್ಲಿನ ಆಚಾರ-ವಿಚಾರಗಳು, ನಂಬಿಕೆ-ನಡವಳಿಕೆಗಳು, ಶಿಸ್ತು, ಸ್ವಚ್ಛತೆ ಮತ್ತು ದಕ್ಷತೆ ಹಾಗೂ ಅನುಪಮ ಸೇವಾಕಾರ್ಯಗಳಿಂದಾಗಿ ಇಂದು ಧರ್ಮಸ್ಥಳ ಎಲ್ಲಾ ತೀರ್ಥ ಕ್ಷೇತ್ರಗಳಿಗೂ ಮಾದರಿ ಕ್ಷೇತ್ರವಾಗಿ ಬೆಳೆದಿದೆ. ವಿಶ್ವದೆಲ್ಲೆಡೆ ಬೆಳಗುತ್ತಿದೆ ಎಂದು ಸ್ವಾಮೀಜಿ ಶ್ಲಾಘಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು. 

ಹೆಗ್ಗಡೆಯವರ ಸೇವೆ-ಸಾಧನೆ ಹಾಗೂ ವಿಶಿಷ್ಟ ಕಾರ್ಯವೈಖರಿ ಉಡುಪಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ತಮಗೂ ಇದು ಸ್ಫೂರ್ತಿದಾಯಕವಾಗಿ ವಿಶೇಷ ಪ್ರೇರಣೆ ನೀಡುತ್ತದೆ ಎಂದರು. ಡಿ. ಹರ್ಷೇಂದ್ರ ಕುಮಾರ್‍ ಅವರ ಕಾರ್ಯ ದಕ್ಷತೆ ಹಾಗೂ ಸೇವಾ ವೈಖರಿಯನ್ನು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು. 

ಸ್ವಾಮೀಜಿಯವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್‍ ಅವರಿಗೆ ಫಲಮಂತ್ರಾಕ್ಷತೆ ನೀಡಿ ಗೌರವಿಸಿ ಆಶೀರ್ವದಿಸಿದರು.