ಉಡುಪಿ: ಹಿರಿಯ ನಾಗರಿಕ ರಕ್ಷಣೆ, ಪಾಲನೆ ಮತ್ತು ಪೋಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಹಿರಿಯನಾಗರಿಕರ ಆರ್ಥಿಕ, ದೈಹಿಕ, ಮಾನಸಿಕ ಮತ್ತು ಮನೋವೈದ್ಯಕೀಯ ಆರೋಗ್ಯ ಅಗತ್ಯತೆಗಳು ಇತರರಿಗಿಂತ ಹೆಚ್ಚಿರುತ್ತವೆ. ಹಿರಿಯ ನಾಗರಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಅವರ ಅವಶ್ಯಕತೆಗಳನ್ನು ಪೂರೈಸಿ ಗೌರವಯುತ ಬದುಕು ನೀಡುವುದು ನಮ್ಮ ಜವಾಬ್ದಾರಿ. ಹಿರಿಯನಾಗರಿಕರಿಗಾಗಿ ಜಾರಿಯಾಗಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರಗಳು ಪರಿಣಾಮಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಇವರ ಸಹಯೋಗದೊಂದಿಗೆ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರಿಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯನಾಗರಿಕರ ರಕ್ಷಣಾ ಕಾಯ್ದೆ-2007ಅನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಅಟಲ್ ವಯೋ ಅಭ್ಯುದಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯು ವಯೋವೃದ್ಧರು ಗೌರವಯುತ ಮತ್ತು ಗುಣಮಟ್ಟದ ಜೀವನ ನಡೆಸಲು ಸಹಾಯ ಮಾಡುತ್ತದೆ. ಹಿರಿಯ ನಾಗರಿಕರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸಮಾಲೋಚನಾ ಕೇಂದ್ರಗಳನ್ನು ತೆರೆಯುವ ಜೊತೆಗೆ ಜಿಲ್ಲಾ ಹಂತದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಸಮಿತಿ ರಚಿಸಲಾಗಿದೆ. ಮಕ್ಕಳಿಂದ ಪರಿತ್ಯಕ್ತರಾದ, ಆಸ್ತಿ ವಿಚಾರದಲ್ಲಿ ಮೋಸ ಹೋದ ಅಥವಾ ಸೈಬರ್ ವಂಚನೆಗೊಳಗಾದ ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಕಾನೂನಿನ ನೆರವು ಪಡೆಯಬಹುದು. ಮಕ್ಕಳಿಂದ ತಮ್ಮ ಜೀವನ ನಿರ್ವಹಣೆಯನ್ನು ಬಯಸುವುದು ಪಾಲಕರ ಕಾನೂನುಬದ್ದ ಹಕ್ಕಾಗಿದೆ. ಸಮಾಜವೂ ಕೂಡಾ ಹಿರಿಯನಾಗರಿಕರ ಬಗ್ಗೆ ಸಹಾನುಭೂತಿ ಹೊಂದಿರಬೇಕು ಎಂದರು. 

ಮಕ್ಕಳಿಂದ ಪಾಲಕರ ನಿರ್ವಹಣೆಯ ಬಗ್ಗೆ ಸಮಸ್ಯೆಗಳಾದಾಗ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಬಹುದು. ಒಂದು ವೇಳೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ದಾನಪತ್ರದ ಮೂಲಕ ಮಕ್ಕಳಿಗೆ ವರ್ಗಾಯಿಸಿದ್ದು ಮಕ್ಕಳು ಪಾಲಕರ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ದಾನಪತ್ರವನ್ನು ರದ್ದುಪಡಿಸಿ ಆಸ್ತಿಯನ್ನು ಮರಳಿ ಪಾಲಕರ ಹೆಸರಿಗೆ ವರ್ಗಾಯಿಸಬಹುದಾಗಿದ್ದು ಪಾಲಕರು ಯಾವುದೇ ಕಾರಣಕ್ಕೂ ತಮ್ಮ ಜೀವಮಾನದ ಗಳಿಕೆಯನ್ನು ಕಳೆದುಕೊಂಡು ಇನ್ನೊಬ್ಬರ ಮುಂದೆ ಕೈಯೊಡ್ಡುವಂತಾಗಬಾರದು ಎಂದರು.

ಹಿರಿಯ ನಾಗರಿಕರು ಬಿ.ಪಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಕೇಂದ್ರ ಸರ್ಕಾರವು ಆಯುಷ್ಮಾನ್  ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು 5 ಲಕ್ಷ ರೂವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು. ಹಿರಿಯ ನಾಗರಿಕರು ಸರ್ಕಾರದ ಈ ಎಲ್ಲ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. 

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಮಾತನಾಡಿ ಹಿರಿಯರು ತಮ್ಮ ಜೀವಮಾನದಲ್ಲಿ ಕೂಡಿಟ್ಟ ಹಣವು ಸೈಬರ್ ವಂಚಕರ ಪಾಲಾಗದಂತೆ ಜಾಗರೂಕತೆ ವಹಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ತಮ್ಮ ಬ್ಯಾಂಕ್ ಖಾತೆ ವಿವರ, ಆಧಾರ್, ಪ್ಯಾನ್ ಕಾರ್ಡ್ ವಿವರಗಳು, ಒಟಿಪಿಗಳನ್ನು ಯಾರಿಗೂ ನೀಡಬಾರದು. ಡಿಜಿಟಲ್ ಅರೆಸ್ಟ್ ಕರೆಗಳು, ಅನಾಮಿಕ ವಿಡಿಯೋ ಕರೆಗಳು, ಹಣಗಳಿಸುವ ಸ್ಕೀಮ್‍ನ ಲಿಂಕ್‍ಗಳು, ಅನುಮಾನಾಸ್ಪದ ಲಿಂಕ್ ಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ಅಶ್ಲೀಲ ಚಿತ್ರ/ವಿಡಿಯೋ ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ವಿಡಿಯೋಗಳನ್ನು ನೋಡುವುದು ಮತ್ತು ಇತರರಿಗೆ ಹಂಚುವುದು ಶಿಕ್ಷಾರ್ಹ ಅಪರಾಧವಾಗಿದ್ದು ಹಿರಿಯನಾಗರಿಕರು ಪ್ರಬುದ್ದತೆಯಿಂದ ವ್ಯವಹರಿಸಬೇಕು. ಜಾತಿ, ಧರ್ಮ, ವ್ಯಕ್ತಿಯ ಘನತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಮಾರಕವಾಗುವ ವಿಚಾರಗಳನ್ನು ಹಂಚಿಕೊಳ್ಳಬಾರದು. ಸೈಬರ್ ವಂಚನೆಗೊಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಬೇಕು ಎಂದರು.    

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಹರಿಸುವುದು ಸಾಧ್ಯ. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕರು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ ಕೆಲವೊಂದು ಕರ್ತವ್ಯಗಳು ಸಹ ಇವೆ. ಇವುಗಳನ್ನು ಪಾಲಿಸಬೇಕು ಎಂದ ಅವರು, ದೇಶ, ರಾಜ್ಯ ಜಿಲ್ಲಾ ಹಾಗೂ ತಾಲೂಕು  ಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಜಿಲ್ಲಾ ನ್ಯಾಯಾಲಯದಲ್ಲಿಯೂ ಸಹಾಯ ಕೇಂದ್ರಗಳಿದ್ದು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ಎ.ಡಿ.ಎ.ಡಿ.ಎಲ್ ಕಾನೂನು ಸಲಹೆಗಾರ್ತಿ ಭಾನುಮತಿ ಎಂ ನಾಯರಿ ಹಿರಿಯ ನಾಗರಿಕರಿಗೆ ಕಾನೂನು ಸಲಹೆ ಬಗ್ಗೆ, ಸೆನ್ ಪೊಲೀಸ್ ಠಾಣೆಯ ಸೈಬರ್ ಇಕಾನಾಮಿಕ್ಸ್ ಮತ್ತು ನಾರ್ಕೋಟಿಕ್ಸ ಕ್ರೈಂ ನ ನಿಲೇಶ್ ಸೈಬರ್ ಮತ್ತು ಡಿಜಿಟಲ್ ವಂಚನೆ ಕುರಿತು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯನಾಗರಿಕರ ರಕ್ಷಣಾ ಕಾಯ್ದೆ-2007 ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ರೆಡ್ ಕ್ರಾಸ್ ಕರ್ನಾಟಕ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್. ವಿಶ್ವನಾಥ ಹೆಗ್ಡೆ, ಹಿರಿಯ ನಾಗರಿಕರ ಸಂಸ್ಥೆಯ ನಾಗರಾಜ್ ಹಾಗೂ ಮತ್ತಿರರು ಉಪಸ್ಥಿತರಿದ್ದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಸ್ತಾವಿಕವಾಗಿ ಮಾತನಾಡಿದರು.

ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ ಸ್ವಾಗತಿಸಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ನಿರೂಪಿಸಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ವಂದಿಸಿದರು.