ಉಡುಪಿ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು, ಭಾರತೀಯ ತಾಂತ್ರಿಕ ಸಂಸ್ಥೆ (IIT) ಧಾರವಾಡವು ನವೆಂಬರ್ 7 ರಿಂದ 9, 2025 ರ ವರೆಗೆ ಆಯೋಜಿಸಿದ್ದ ಪ್ರತಿಷ್ಠಿತ ಐಇಇಇ ಇಂಜಿನಿಯರಿಂಗ್ ಇನ್ಫೊರ್ಮ್ಯಾಟಿಕ್ಸ್ ಸಮ್ಮೇಳನ (ICEI 2025) ದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದಿದ್ದಾರೆ.

“VR-Based Crop Health Visualization and Analysis Using Multispectral Images for Precision Agriculture” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಟ್ಟೆಯ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ವಿಭಾಗದ ಯಶಸ್ ಆರ್. ಅವರು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಭೋಜರಾಜ ಬಿ. ಇ. ಮತ್ತು ಎನ್.ಐ.ಟಿ.ಕೆ ಸುರತ್ಕಲ್ ನ ಜಲ ಸಂಪನ್ಮೂಲ ಹಾಗೂ ಓಶನ್ ಇಂಜಿನಿಯರಿಂಗ್ ವಿಭಾಗದ ಡಾ. ಪೃಥ್ವಿರಾಜ್ ಯು. ಅವರ ಸಹಯೋಗದೊಂದಿಗೆ ಮಾಡಲಾದ ಸಂಶೋಧನಾ ಕಾರ್ಯಕ್ಕೆ ಈ ಪ್ರಶಸ್ತಿಯು ಲಭಿಸಿದೆ.

ಈ ಸಂಶೋಧನೆಯು ಬಹು-ವರ್ಣಚಿತ್ರಗಳ (Multispectral Imagery) ಬಳಕೆಯಿಂದ ಬೆಳೆಗಳ ಆರೋಗ್ಯವನ್ನು ಪ್ರಸ್ತುತ ಸಮಯದಲ್ಲಿ ವರ್ಚುವಲ್ ರಿಯಾಲಿಟಿ (VR) ಮೂಲಕ ವೀಕ್ಷಣೆ ಮತ್ತು ವಿಶ್ಲೇಷಣೆ ಮಾಡಲು ಹೊಸ ಚೌಕಟ್ಟನ್ನು ಪರಿಚಯಿಸುತ್ತದೆ. ಇದು ನಿಖರತೆ ಹಾಗೂ ಸುಸ್ಥಿರ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ.

ಈ ಇಂಟರ್ನ್‌ಶಿಪ್‌ ಕಾರ್ಯವನ್ನು NITK ಸುರತ್ಕಲ್‌ನ ಸಿಸ್ಟಮ್ ಡಿಸೈನ್ ಕೇಂದ್ರ (CSD) ದಲ್ಲಿ ಡಾ. ಪೃಥ್ವಿರಾಜ್ ಯು. ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಗಿದ್ದು, ನಿಟ್ಟೆ ಅಪ್ಲೈಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೇಂದ್ರ (NCAIA) ದ ಸಹಕಾರವನ್ನು ಪಡೆಯಲಾಗಿದೆ. ಈ ಯೋಜನೆಗೆ ನಿಟ್ಟೆಯ ಡಾ. ಭೋಜರಾಜ ಬಿ. ಇ. ಅವರ ಮಾರ್ಗದರ್ಶನ ಪ್ರಮುಖಪಾತ್ರ ವಹಿಸಿದೆ.

ಈ ಪ್ರಶಸ್ತಿ, ನಿಟ್ಟೆ ತಾಂತ್ರಿಕ ಕಾಲೇಜಿನ ಅಂತರವಿದ್ಯಾ ಸಂಶೋಧನೆ ಹಾಗೂ ನವೋದ್ಯಮಕ್ಕೆ ನೀಡಲಾಗಿರುವ ಬೆಂಬಲ ಮತ್ತು ಪ್ರೋತ್ಸಾಹವನ್ನು ವಿವರಿಸುತ್ತದೆ.