ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಹಾತ್ಮ ಗಾಂಧಿ ಅವರು ಬ್ರಿಟಿಷರ, ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟಿನಿಂತು ದೇಶದ ಜನತೆಯ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ಚಿಂತನೆ, ಆದರ್ಶ, ಜೀವನ ಶೈಲಿ ದೇಶದಲ್ಲಿ ಇನ್ನೂ ಜೀವಂತವಾಗಿದ್ದರಿಂದ ಪ್ರಜಾಪ್ರಭುತ್ವ ಉಳಿದಿದೆ. ಗಾಂಧಿ ಅವರು ದೇಶವನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಗೊಳಿಸುವುದರ ಜೊತೆಗೆ ಬಡತನ, ಅಸ್ಪೃಶ್ಯತೆ ವಿರುದ್ಧ  ಹೋರಾಟ ಮಾಡಿದರು. ಅವರ ತತ್ವ- ಸಿದ್ಧಾಂತ ಪಾಲನೆ ಮಾಡುವುದೇ ನಿಜವಾಗಿ ಅವರಿಗೆ ಸಲ್ಲಿಸುವ ಗೌರವ. ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಅವರ ವ್ಯಕ್ತಿತ್ವ, ಸರಳತೆ ಎಲ್ಲರಿಗೂ ಆದರ್ಶ ಎಂದು ಸ್ಮರಿಸಿದರು.   

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮಹಾತ್ಮ ಗಾಂಧಿ ಅವರು ಶ್ರೇಷ್ಠ ಸಾಮಾಜಿಕ ಸುಧಾರಕ, ಧರ್ಮನಿಷ್ಠರು, ಸತ್ಯವಂತರಾಗಿದ್ದರು.ಇಡೀ ವಿಶ್ವವೇ ಒಪ್ಪಿ, ಅಪ್ಪಿಕೊಂಡಿರುವ ಗಾಂಧಿ ಮತ್ತು ಗಾಂಧಿವಾದವನ್ನು ದೇಶದಲ್ಲಿ ಉಳಿಸಿಕೊಳ್ಳಬೇಕಿರುವುದು ಇಂದಿನ ತುರ್ತು. ದೇಶದಲ್ಲಿ ಕೋಮು ಸೌಹಾರ್ದತೆ ಇರಬೇಕೆಂದು ಗಾಂಧೀಜಿ ಬಯಸಿದ್ದರು. ಆದರೆ, ಅದು ಇನ್ನೂ ಪೂರ್ಣವಾಗಿಲ್ಲ. ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಆಯಾಮ ನೀಡಿದವರು ಎಂದು ಹೇಳಿದರು.

ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿದರು.  ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿದರ್ ಹೆಗ್ಡೆ, ಮುಖಂಡರಾದ ಪ್ರಕಾಶ್ ಸಾಲ್ಯಾನ್, ಇಬ್ರಾಹೀಂ ನವಾಜ್, ಎಸ್.ಅಪ್ಪಿ, ಜೋಕಿಂ ಡಿಸೋಜ, ಡೆನ್ನಿಸ್ ಡಿಸಿಲ್ವ, ಶಾಲೆಟ್ ಪಿಂಟೊ, ಕೆ.ಅಶ್ರಫ್, ನೀರಾಜ್ ಚಂದ್ರಪಾಲ್, ನವೀನ್ ಡಿಸೋಜ, ಟಿ.ಹೊನ್ನಯ್ಯ, ಅಶ್ರಫ್ ಬಜಾಲ್, ಚಂದ್ರಕಲಾ ಜೋಗಿ, ರಹಿಮಾನ್ ಕೋಡಿಜಾಲ್, ಜಯಶೀಲಾ ಅಡ್ಯಂತಾಯ, ಬಶೀರ್ ಬೈಕಂಪಾಡಿ, ಟಿ.ಕೆ ಸುಧೀರ್, ಸಾರಿಕ ಪೂಜಾರಿ, ದುರ್ಗಾ ಪ್ರಸಾದ್, ಕಿರಣ್ ಬುಡ್ಲೆಗುತ್ತು, ಆಲ್ವಿನ್ ಪ್ರಕಾಶ್, ಪ್ರೇಮ್ ಬಳ್ಳಾಲ್ ಭಾಗ್, ಕೀರ್ತನ್ ಗೌಡ, ನಾಗೇಶ್ ಶೆಟ್ಟಿ ತೊಕ್ಕೊಟು, ಚಂದ್ರಹಾಸ ಪೂಜಾರಿ, ಸುರೇಶ್ ಪೂಜಾರಿ, ಲಕ್ಷ್ಮೀ ನಾಯರ್, ಎಸ್.ಕೆ ಸೌಹಾನ್, ಉದಯ ಕುಂದರ್, ರೋಬಿನ್ ಪ್ರೀತಮ್, ಲಕ್ಷ್ಮಣ್ ಶೆಟ್ಟಿ, ಶೊನ್ ಡಿಸೋಜ,  ನಾನ್ಸಿ ನೊರೊನ್ಹ, ಅವಿತ ಪ್ರಿಯ ನೊರೊನ್ಹ, ಜೋನ್ ಮೊಂತೇರೋ, ನಝೀರ್ ಬಜಾಲ್, ವಿಕಾಸ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕೆ.ಕೆ ಶಾಹುಲ್ ಹಮೀದ್ ವಂದಿಸಿದರು.