ಮುಂಬಯಿ: ಲಕ್ನೋ ಕನ್ನಡ ಅಸೋಸಿಯೇಶನ್ ಮತ್ತು ಹೃದಯವಾಹಿನಿ ಕರ್ನಾಟಕ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಉತ್ತರ ಪ್ರದೇಶದ ಲಕ್ನೋ ಇಲ್ಲಿನ ಉತ್ತರ ಪ್ರದೇಶ್ ಸಂಸ್ಕೃತ್ ಸಂಸ್ಥಾನ್ ಸಭಾಗಂಣದಲ್ಲಿ ರಚಿಸಿದ ದಿ.ಸಾಹಿತಿ ಚನ್ನವೀರ ಕಣವಿ ವೇದಿಕೆಯಲ್ಲಿ ಕಳೆದ ಭಾನುವಾರ (ಫೆ.25) 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವು ನಡೆಸಲ್ಪಟ್ಟಿತು.
ಲಕ್ನೋ ಕನ್ನಡ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಿಸರ್ವ್ ಬ್ಯಾಂಕ್ನ ಪ್ರಾದೇಶಿಕ ನಿರ್ದೇಶಕ ಬಾಲು ಕೆಂಚಪ್ಪ ಜ್ಯೋತಿ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದ್ದು ಗೌರವ ಅತಿಥಿಗಳಾಗಿ ನಿವೃತ್ತ ಮೈಸೂರು ಜಿಲ್ಲಾಧಿಕಾರಿ ಡಾ| ಡಿ.ಎಸ್ ವಿಶ್ವನಾಥ್ (ಐಎಎಸ್), ಮುಂಬಯಿಯ ಸಾಹಿತಿ ಮತ್ತು ಸಮಾಜ ಸೇವಕಿ ಪ್ರಭಾ ಎನ್.ಪಿ ಸುವರ್ಣ ಮತ್ತು ಸಾಹಿತಿ ಸಿದ್ದರಾಮಯ್ಯ ಹೊನ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲು ಕೆಂಚಪ್ಪ ಮಾತನಾಡಿ ಉತ್ತರ ಪ್ರದೇಶದಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಲಕ್ನೋ ನಗರದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದ್ದರೂ 40 ವರ್ಷಗಳ ಹಿಂದೆ ಕರ್ನಾಟಕದಿಂದ ಇಲ್ಲಿಗೆ ಬಂದ ಬ್ಯಾಂಕ್ ಉದ್ಯೋಗಿಗಳು ಲಕ್ನೋದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ನಾವು ವರ್ಷಂ ಪ್ರತಿ ಎರಡು ಮೂರು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಇಂದಿನ ಸಮ್ಮೇಳನ ಲಕ್ನೋ ಕನ್ನಡಿಗರಿಗೆ ಹೊಸ ಹುಮ್ಮಸ್ಸು ನೀಡಿದೆ ಎಂದರು.
ಸಮ್ಮೇಳನಾಧ್ಯಕ್ಷ ಸಂಗಮೇಶ ಬಾದವಾಡಗಿ ಮಾತನಾಡಿ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡೇತರರಿಗೆ ಕನ್ನಡ ಕಲಿಯುವ ಅವಕಾಶ ನೀಡುತ್ತಿಲ್ಲ. ಇವರೇ ಅವರ ಬಾಷೆಯಲ್ಲಿ ಮಾತನಾಡಲು ಮುಂದಾಗುತ್ತಾರೆ. ಹಾಗಾಗಿ ನಾವು ಕನ್ನಡೇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂದರು.
ಕನ್ನಡ ಆಸೋಶಿಯೇಶನ್ ಲಕ್ನೋ ಕಾರ್ಯದರ್ಶಿ ಸಂಜೀವ ನಾಯಕ ಸ್ವಾಗತ ಭಾಷಣಗೈದು ಕರ್ನಾಟಕದಿಂ ದ ಇಲ್ಲಿಗೆ 50ಕ್ಕೂ ಹೆಚ್ಚು ಜನ ಕಲಾವಿದರು ಆಗಮಿಸಿರುವುದು ಇದೇ ಮೊದಲು ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ನುಡಿಗಳನ್ನಾಡಿ ದೇಶದ ವಿವಿಧ ರಾಜ್ಯಗಳಲ್ಲಿ ಈ ವರಿಗೆ ಒಟ್ಟು 18 ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಉತ್ತರ ಪ್ರದೇಶದಲ್ಲಿ ಇದು ಪ್ರಪ್ರಥಮ ಸಮ್ಮೇಳನವಾಗಿದೆ ಎಂದರು.
ವೀರೇಶ್ ಬಂಗಾರ ಶೆಟ್ಟಿ, ಬಿಂಡಿಗನವಿಲೆ ಭಗವಾನ್ ಮತ್ತು ಪ್ರಭಾ ಸುವರ್ಣ ಸ್ವರಚಿತ ಕವನಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಜಾನಪದ ಗಾಯಕ ಗೋನಾಸ್ವಾಮಿ, ಪುಷ್ಪ ಆರಾಧ್ಯ ಇವರು ಜಾನಪದ ಗೀತೆಗಳು ಮತ್ತು ಭಕ್ತಿ ಮಂಜರಿ ಪ್ರಸ್ತುತ ಪಡಿಸಿದರು.
ಹೊಂಗಿರಣ ಸೂತ್ರದ ಗೊಂಬೆ ಆಟ ಕಲಾತಂಡ ಹಳಿಯಾಳ ಉತ್ತರ ಕನ್ನಡ ಜಿಲ್ಲೆ ತಂಡವು ಸಿದ್ದಪ್ಪ ಬಿರಾದಾರ ನಿರ್ದೇಶನದಲ್ಲಿ ಶ್ರೀ ರಾಮನ ಪಟ್ಟಾಭಿಷೇಕ ಪ್ರಸಂಗ ಸಾದರ ಪಡಿಸಿದ್ದು, ಕಮಲಾಕ್ಷ ಪ್ರಭು ಸಂಚಾಲಕತ್ವದ ಬಾಲಮಿತ್ರ ಯಕ್ಷ ಶಿಕ್ಷಣ ಪ್ರತಿಷ್ಠಾನ ಸರಳೇಬೆಟ್ಟು ಉಡುಪಿ ಇವರಿಂದ ಶರಸೇತು ಬಂಧನ, ರಾಮಕ್ಷತ್ರಿಯ ಕಲಾತಂಡ ಕೋಟೆಗಾರ್ ವಿದ್ಯಾವರ್ಧಕ ಸಂಘ ಹೊಸನಗರ ಇವರಿಂದ ಮಹಿಳಾ ಡೊಳ್ಳು ಕುಣಿತ, ಹನ್ಶಿತ್ ಆಳ್ವ, ಬಾಕ್ರಬೈಲ್ ಕಾಸರಗೋಡು ಭರತ ನಾಟ್ಯ, ನೃತ್ಯಾಂಜಲಿ ಕಲಾನಿಕೇತನ ಭರತನಾಟ್ಯ ಶಿಕ್ಷಣ ಸಂಸ್ಥೆ ಚನ್ನರಾಯಪಟ್ಟಣ ಇವರು ವಿದುಷಿ ಶೈಲಜಾ ಬಿ.ವಿ.ನಿರ್ದೇಶನದಲ್ಲಿ ನೃತ್ಯರೂಪಕ, ಮಂಜುನಾಥ್ ಮತ್ತು ತಂಡ ಕೋಲಾಟ ಕೋಲಾರ, ವಿಜಯ ಮತ್ತು ತಂಡ ಜಾನಪದ ನೃತ್ಯ ಬೆಂಗಳೂರು, ವರ್ಷಿತ ಮತ್ತು ತಂಡ ಸಮೂಹ ನೃತ್ಯ ಮಾಲೂರು, ವರುಣ್ ಮತ್ತು ತಂಡ ನೃತ್ಯ ರೂಪಕ ಬೆಂಗಳೂರು, ಶರತ್ ಮತ್ತು ತಂಡ ಜಾನಪದ ನೃತ್ಯ ಆನೇಕಲ್ ಕಲಾ ಪ್ರದರ್ಶನಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಪೂನಂ ನಾಯಕ ಮತ್ತು ತನಿಶಿ ನಾಯಕ ಕಾರ್ಯಕ್ರಮದ ವ್ಯವಸ್ಥಾಪನೆಗೆ ಯೋಗದಾನ ನೀಡಿದ್ದು ಅಭಿಷೇಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.