ಉಜಿರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಅಧಿಕಾರಿಗಳು ಹಾಗೂ ಕಾರ್ಯಕರ್ತರ ಶ್ರದ್ಧೆ, ಭಕ್ತಿ, ಪರಿಶ್ರಮ, ಬದ್ಧತೆ ಹಾಗೂ ಹೊಣೆಗಾರಿಕೆಯ ಸೇವೆಯಿಂದ ಸರ್ವತೋಮುಖ ಪ್ರಗತಿ ಸಾದಿಸಲು ಸಾಧ್ಯವಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಧರ್ಮಶ್ರೀ ಸಭಾಭವನದಲ್ಲಿ 80 ಲಕ್ಷ ಫಲಾನುಭವಿಗಳ ಆರೋಗ್ಯ ವಿಮಾ ಕಂತಿನ ಬಗ್ಯೆ 135 ಕೋಟಿ ರೂ. ನ ಚೆಕ್ ವಿಮಾ ಕಂಪೆನಿಯ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯಲ್ಲಿ ಕನಿಷ್ಠ ಮೊತ್ತದ ಕಂತನ್ನು ಪಾವತಿಸಿ ಗರಿಷ್ಠ ನೆರವು ಪಡೆಯುವ ಬಗ್ಯೆ ಹಿರಿಯ ಅಧಿಕಾರಿಗಳೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಯೋಜನಾಧಿಕಾರಿ ಡಿ. ಶ್ರೇಯಸ್ ಕುಮಾರ್ ಸಮಾಲೋಚನೆ ಹಾಗೂ ಮಾತುಕತೆ ನಡೆಸಿರುವುದರಿಂದ ಫಲಾನುಭವಿಗಳಿಗೆ ತುಂಬಾ ಪ್ರಯೋಜನವಾಗಿದೆ. ಈ ದಿಸೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್, ಹಣಕಾಸು ಅಧಿಕಾರಿ ಶಾಂತಾರಾಂ ಪೈ, ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅವರ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯ ಡಿ.ಜಿ.ಎಂ. ಪ್ರಕಾಶ್ ರೇವಣ್ಕರ್ ಮಾತನಾಡಿ, ಧರ್ಮಸ್ಥಳದಂತಹ ಪ್ರತಿಷ್ಠಿತ ಸಂಸ್ಥೆಗೆ ಸೇವೆ ನೀಡುವುದರಿಂದ ತಮಗೆ ಹೆಚ್ಚಿನ ಅನುಭವ ಹಾಗೂ ಪರಿಣತಿ ದೊರಕಿದೆ. ಜನ ಸಾಮನ್ಯರಿಗೆ ಇಲ್ಲಿ ನೀಡುವ ಸೇವೆ, ನೆರವು ಹಾಗೂ ಮಾರ್ಗದರ್ಶನ ಸ್ತುತ್ಯಾರ್ಹವಾಗಿದೆ ಎಂದರು.
ವಿಮಾ ಕಂಪೆನಿಗಳ ಹಿರಿಯ ಅಧಿಕಾರಿ ವಿನಯ್ ಸೋನಿ ಧರ್ಮಸ್ಥಳದ ಸೇವೆ, ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ವಿಮಾ ಕಂಪೆನಿಯ ಡಿ.ಜಿ.ಎಂ. ವೇದಾವತಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ಸ್ವಾಗತಿಸಿದರು. ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದವಿತ್ತರು.