ಮಂಗಳೂರು,ಮಾ.31:- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ, ಪ್ರತಿದಿನವೂ ನೀಡಬೇಕಾದ ಗೌರವ ಆಕೆಗೆ ಸಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಮಾ.31ರ ಗುರುವಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳದ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡಬೇಕು, ಮನೆ ಮನಗಳಲ್ಲಿ ಮಹಿಳೆಗೆ ಗೌರವ ದೊರೆಯಬೇಕು, ಮಹಿಳೆಯ ಸಾಮಥ್ರ್ಯವನ್ನು ಗುರುತಿಸುವ ಕೆಲಸವಾಗಬೇಕು, ಆದಾಗ ಮಾತ್ರ ಈ ರೀತಿಯ ಆಚರಣೆಗಳಿಗೆ ಅರ್ಥ ಬರುತ್ತದೆ, ಆರೋಗ್ಯಕರ ಬದುಕು ಹಾಗೂ ಶಿಕ್ಷಣವು ಇಲ್ಲಿ ಮುಖ್ಯವಾಗುತ್ತದೆ, ಕಾಯಿದೆಗಳಿಂತಲೂ ಮುಖ್ಯವಾಗಿ ಮನಃಪರಿವರ್ತನೆಯ ಮೂಲಕ ಹೃದಯದಿಂದ ಮಹಿಳೆಗೆ ಗೌರವ ದೊರಕಿದಾಗ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತದೆ, ಭ್ರೂಣ ಹತ್ಯೆಯ ಕೃತ್ಯಗಳನ್ನು ತಡೆಗಟ್ಟಲು ಮನಪರಿವರ್ತನೆ ಅಗತ್ಯ ಇದೆ ಎಂದವರು ಹೇಳಿದರು.
ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಮೂಡಿಸುವುದಲ್ಲಿ ಭಾರತ ಸೇವಾದಳ ಸ್ಥಾಪನೆಯಾಗಿದೆ, 1923ರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಗಾಂಧಿಯವರ ಆದರ್ಶದಂತೆ ಡಾ. ಹರ್ಡೀರಕ್ರವರು ಜನರಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಮೂಡಿಸುವುಕ್ಕೆ ಭಾರತ ಸೇವಾದಳವನ್ನು ಸ್ಥಾಪನೆ ಮಾಡಿದರು ಎಂದರು.
ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎನ್, ಭಾರತ ಸೇವಾದಳದ ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ಎಚ್.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಧಾಕರ್.ಕೆ, ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯರಾದ ಫ್ರಾನ್ಸಿಸ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಬಿ. ಪ್ರಭಾಕರ್ ಶ್ರೀಯಾನ್ ಹಾಗೂ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.