ದೇಹ ಕ್ಷೀಣಿತನಾದಾಗ ಕುಟುಂಬಿಕರ ತಿರಸ್ಕಾರಕ್ಕೆ ಒಳಗಾಗಿ ಮನೆ - ಮಠ ಕಳೆದುಕೊಂಡು ಮುಂದಿನ ಬದುಕು ಹೇಗೆಂಬ ಚಿಂತೆಯಲ್ಲೇ ಮನೋತಾಳ ತಪ್ಪಿಹೋಗಿ ಬೀದಿಗೆ ಬಿದ್ದ ಆ ವೃದ್ಧನಿಗೆ ಇದೊಂದು ಪುನರ್ಜನ್ಮವೇ ಹೌದು.... ಯಾರೂ ಇಲ್ಲವಾಯಿತೇ ಎಂದು ಚಿಂತಿತರಾಗಿದ್ದ ಅವರಿಗೆ ಈಗ ನೆಂಟರಿಷ್ಟರು ನೂರಾರು...... ದೇಹಕ್ಕೆ ಬಾಧಿಸಿದ್ದ ಕಜ್ಜಿಯ ಜಿಡ್ಡಿಗಿಂತಲೂ ಮನಸ್ಸಿನ ಘಾಸಿ ಭೀಕರ ನೋವು ತರುತ್ತಿತ್ತು. ಆದರೀಗ ಅವರ ಚಿತ್ತ, ದೇಹವ್ಯಾಧಿಗೆ ಪರಿಹಾರವಾಗಿದೆ. ಯಾವ ಚಿಂತೆಯೂ ಇಲ್ಲದೆ ನಾಲ್ಕು ಹೊತ್ತು ಹೊಟ್ಟೆಗೆ ಹಿಟ್ಟು ಬೀಳುತ್ತಿದೆ. ಸರ್ವರ ಪ್ರೀತಿ - ವಾತ್ಸಲ್ಯ ದೊರೆಯುತ್ತಿದೆ. ಇದು, ಈ ಪುಣ್ಯದ ಮನೆಯಿಂದಲ್ಲದೆ ಇನ್ನೆಲ್ಲಿ ಲಭಿಸಲು ಸಾಧ್ಯವೆಂದು ಅವರು ಆನಂದಭಾಷ್ಪ ಸುರಿಸುವಾಗ ಸ್ನೇಹ ಮನೆಯ ಇತರ ನಿವಾಸಿಗಳೂ ಹೌದೆಂದು ತಲೆತೂಗುತ್ತಾರೆ.
ಮಂಗಳೂರು ಕುಂಜತ್ತಬೈಲಿನ ನಿವಾಸಿ ಸಂಜೀವ ಪೂಜಾರಿ (60) ಎಂಬವರ ಕಥೆಯಿದು. ಕುರುಚಲು ಗಡ್ಡ ಇಳಿಯಬಿಟ್ಟು, ಕಾಲನ್ನು ಕೊರೆದು ತಿನ್ನುತ್ತಿದ್ದ ಅದೇನೋ ಭಾರೀ ಗಾಯಕ್ಕೆ ಬ್ಯಾಂಡೇಜು ಸುತ್ತಿ ಮಂಗಳೂರು ನಗರದಲ್ಲಿ ಅವರು ನಡೆದಾಡುತ್ತಿದ್ದರು. ಅಲ್ಲಲ್ಲಿ ಅಂಗಡಿ ಜಗುಲಿಯ ಆಶ್ರಯ ಪಡೆಯುತ್ತಿದ್ದರು. ಆದರೆ, ತಮ್ಮ ವ್ಯಾಪಾರಕ್ಕೆ ತೊಡಕಾಗುವ ಹಿನ್ನೆಲೆಯಲ್ಲಿ ವರ್ತಕರು ಅವರನ್ನು ದೂರ ಅಟ್ಟುತ್ತಿದ್ದರು. ರಾತ್ರಿಯನ್ನು ಹೇಗೋ ಕಳೆಯುತ್ತಿದ್ದರು. ದಿನ ಹೋದಂತೆ ದೇಹ ಸೊರಗುತ್ತಿತ್ತು. ಏನೋ ಗೊಣಗುತ್ತಿದ್ದರು, ಕಣ್ಣೀರು ಹಾಕುತ್ತಿದ್ದರು.......
ಮಂಗಳೂರು ಯೇನಪೋಯ ಆಸ್ಪತ್ರೆಯ ಎಂಎಸ್ಡಬ್ಲ್ಯೂ ವಿಭಾಗ ಮುಖ್ಯಸ್ಥ ಮುಹಮ್ಮದ್ ಗುತ್ತಿಗಾರು ಅವರ ದೃಷ್ಟಿಗೆ ಈ ಅಸಹಾಯಕ ವೃದ್ಧ ಬೀಳುತ್ತಾರೆ. ಸ್ನೇಹಾಲಯದ ಜೊತೆಗೆ ಬಾಂಧವ್ಯ ಇರಿಸಿಕೊಂಡಿರುವ ಅವರು ತಕ್ಷಣವೇ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡುತ್ತಾರೆ. ಹಾಗೆ, ಮೊನ್ನೆ ಜೋಸೆಫ್ ಅವರು ಸಂಗಡಿಗರ ಜೊತೆ ತಲುಪಿದ್ದಾರೆ. ನಗರದ ಹೃದಯ ಭಾಗದ ಬಲ್ಮಠ ಹೆಣ್ಮಕ್ಕಳ ಕಾಲೇಜು ಬಳಿಯಲ್ಲಿ ಆ ವ್ಯಕ್ತಿ ಕಲ್ಲೊಂದರಲ್ಲಿ ಮುದುಡಿ ಕುಳಿತಿದ್ದರು. ಜೊತೆಗೆ ಕರೆದಾಕ್ಷಣವೇ ಮರುಮಾತಿಲ್ಲದೆ ಎದ್ದು ಬಂದಿದ್ದರು. ಈಗ, ಸಂಜೀವ ಪೂಜಾರಿ ಅವರು ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ. ಮುಂದೆ ಸಂಬಂಧಿಕರು ಕರೆದೊಯ್ಯುವ ವರೆಗೆ ಅವರಿಗೆ ಸ್ನೇಹಾಲಯದಲ್ಲಿ ಆಶ್ರಯ ನೀಡುವುದಾಗಿ ಜೋಸೆಫ್ ಕ್ರಾಸ್ತಾ ಹೇಳಿದ್ದಾರೆ�