ಈ ಸಲದ ಮಳೆಗಾಲ ನನಗೆ ಬಾಲ್ಯದ ದಿನಗಳನ್ನು ನೆನಪಿಸಿತು. ನಾನು ಶಾಲೆಗೆ ಹೋಗುವಾಗ ಇದೇ ರೀತಿ ಮಳೆ ಸುರಿಯುತ್ತಿತ್ತು, ಅದೂ ಒಂದೆರಡು ದಿನಗಳಲ್ಲ, ಮಳೆಗಾಲದ ನಾಲ್ಕು ತಿಂಗಳು ಹೀಗೆ. ಜೇಷ್ಠ ಮಾಸದಲ್ಲಿ ಆರಂಭವಾಗುವ ಮಳೆಗಾಲ, ಅನಂತ ಚತುರ್ದಶಿಗೆ ಮುಗಿಯುವುದು ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆರಂಭದ ಮಳೆ ಗುಡುಗು ಸಿಡಿಲುಗಳಿಂದ ಸುರಿಯುವ ಅಡ್ಡ ಮಳೆಯಾದರೆ, ಆಷಾಢದ ಮಳೆ ಎಡಬಿಡದೆ ಸುರಿಯುವ ಧಾರಾಕಾರ ಮಳೆ. ನಮ್ಮ ದಕ್ಷಿಣಕನ್ನಡದಲ್ಲಿ ತುಳುವಿನಲ್ಲಿ  ಮಾತಿದೆ, "ಆಷಾಢದ ಬರ್ಸ, ಪುಣಲ ಪಿದಾಯಿ ದಿಯೆರೆ ಬುಡ್ಪುಜ್ಜಿ" (ಆಷಾಢದ ಮಳೆ ಹೆಣವನ್ನೂ ಹೊರಗೆ ಇಡಲು ಬಿಡುವುದಿಲ್ಲ) ಎಂದು. ಒಂದು ನಿಮಿಷವೂ ಬಿಡದೆ ಸುರಿಯುವ ಮಳೆಗೆ, ಹದಿನೈದು ದಿನಗಳಿಗೊಮ್ಮೆ ಸೂರ್ಯನ ದರ್ಶನವಾಗುವುದು ಅಸಾಧ್ಯವಾಗಿರುತ್ತಿತ್ತು. ಶ್ರಾವಣದಲ್ಲಿ ಚಿರಿಪಿರಿ ಮಳೆ, ಆ ಮಳೆಗೇ ನದಿ ಹೊಳೆಗಳಲ್ಲಿ ನೀರು ತುಂಬುವುದು. ಭಾದ್ರಪದದಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು.

ಬಾಲ್ಯದ ನೆನಪು.

ಮೂರು ನಾಲ್ಕು ದಶಕಗಳ ಹಿಂದೆ, ಮಳೆಗಾಲ ಬರುವ ಮೊದಲೇ ಕರಾವಳಿ ಮತ್ತು ಮಲೆನಾಡಿನ ಜನ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. ಬೇಸಿಗೆಯಲ್ಲಿ ಅದಕ್ಕೆ ಬೇಕಾದ ಸಿದ್ಧತೆ ನಡೆದಿರುತ್ತಿತ್ತು, ಆಹಾರ ಸಾಮಾಗ್ರಿಗಳ ಸಂಗ್ರಹ, ಉಪ್ಪಿನಕಾಯಿ, ಹಪ್ಪಳ ಸಂಡಿಗೆಗಳ ತಯಾರಿ, ಮಾವಿನಕಾಯಿ, ಕಣಿಲೆ, ಹಲಸಿನತೊಳೆಗಳನ್ನು ಉಪ್ಪಿಗೆ ಹಾಕಿ ಮಳೆಗಾಲದ ಉಪಯೋಗಕ್ಕೆ ಸಂಗ್ರಹಿಸಿಡುವುದು ಹೀಗೆ. ಮಳೆಗಾಲದಲ್ಲಿ ಘಟ್ಟ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳು ಕರಾವಳಿಯ ನಮ್ಮೂರಿಗೆ ಬರುತ್ತಿರಲಿಲ್ಲ. ನಮ್ಮ ಸುತ್ತ ಮುತ್ತ ಯತೇಚ್ಛವಾಗಿ ಬೆಳೆಯುವಂತಹ ಚಗಟೆ ಸೊಪ್ಪು, ಕೆಸುವಿನೆಲೆ (ತೇವು), ಉಪ್ಪಿಗೆ ಹಾಕಿಟ್ಟ ಸಾಮಾಗ್ರಿಗಳ‌ನ್ನು ಉಪಯೋಗಿಸಿ ಖಾದ್ಯಗಳನ್ನು ತಯಾರಿಸುವುದರಲ್ಲಿ ನಮ್ಮ ಹಿರಿಯರು ನಿಸ್ಸೀಮರಾಗಿದ್ದರು. ಮಳೆಗಾಲದ ಈ ಎಲ್ಲಾ ಖಾದ್ಯಗಳ ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ.

ಶಾಲಾ ಜೀವನ

ಶಾಲೆಗೆ ತಪ್ಪಿಸದೇ ಹಾಜರಾಗುವುದು ಆಗ ನಮ್ಮ ಮುಖ್ಯ ಧ್ಯೇಯವಾಗಿತ್ತು, ಎಂತಹ ಧಾರಾಕಾರ ಮಳೆ ಸುರಿಯುತ್ತಿರಲಿ ನಾವೆಂದೂ ಅಮ್ಮನ ಬಳಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದೇ ಇಲ್ಲ. ಹೇಳಿದರೂ ಅಮ್ಮ ಒಪ್ಪುವ ಸಾಧ್ಯತೆ ಇಲ್ಲ ಎಂಬ ಅರಿವು ನಮಗಿತ್ತು, ಆಗ ಮಳೆಗಾಲ ಎಂಬುದು ಸಾಮಾನ್ಯ ವಿಷಯ. ಮಳೆ ಎಂದು ನಾಲ್ಕು ತಿಂಗಳು ಶಾಲೆ ತಪ್ಪಿಸಿ ಕುಳಿತುಕೊಳ್ಳುವುದು ಸಾಧ್ಯವಿತ್ತೇ?

ಆಗ ನಮಗೆ ಈಗಿನ ಮಕ್ಕಳ ತರಹ ವಾಟರ್ ಪ್ರೂಫ್ ಬ್ಯಾಗ್ ಎಲ್ಲಾ ಇರಲಿಲ್ಲ, ಹೆಗಲಿನ ಒಂದೇ ಬದಿಗೆ ನೇತು ಹಾಕುವ ದಪ್ಪ ಖಾಕಿ ಚೀಲವೇ ನಮ್ಮ ಪುಸ್ತಕಗಳನ್ನು ಒದ್ದೆಯಾಗದಂತೆ ಕಾಪಾಡುತ್ತದೆ ಎಂಬ ನಂಬಿಕೆ. ಎಂತಹ ಗಾಳಿ ಮಳೆಗೂ ಉಲ್ಟಾ ಆಗದಂತಹ ಅಜ್ಜನ ಕೋಲಿನ ಹಿಡಿಯ ಅಗಲವಾದ ಕೊಡೆಗಳು, ಅವು ನಮ್ಮನ್ನು ಮತ್ತು ನಮ್ಮ ಪುಸ್ತಕದ ಚೀಲವನ್ನು ಮಳೆಯಿಂದ ರಕ್ಷಿಸುವಲ್ಲಿ ಗುರುತರ ಪಾತ್ರ ವಹಿಸುತ್ತಿದ್ದವು. ಸತತವಾಗಿ ಧಾರಾಕಾರವಾಗಿ ಮಳೆ ಸುರಿದರೆ, ಆ ಕೊಡೆಯೂ ನಮ್ಮನ್ನು ಮತ್ತು ಪುಸ್ತಕಗಳನ್ನು ಒದ್ದೆಯಾಗದಂತೆ ಕಾಪಾಡುವಲ್ಲಿ ಸೋಲುತ್ತಿತ್ತು. ಮನೆಗೆ ಬಂದ ತಕ್ಷಣ ನಾವು ಮಾಡುತ್ತಿದ್ದ ಮೊದಲ ಕೆಲಸ, ಚೀಲದಿಂದ ಪುಸ್ತಕಗಳನ್ನು ತೆಗೆದು ಹರಡಿ ಒಣಗಿಸುವುದು, ಮತ್ತು ಒದ್ದೆಯಾದ ಚೀಲವನ್ನು ಒಣಗಿಸುವ ವ್ಯರ್ಥ ಪ್ರಯತ್ನ ಮಾಡುವುದು. ಮರುದಿನ ಅರ್ಧಂಬರ್ಧ ಒಣಗಿದ ಚೀಲವೇ ಮತ್ತೆ ನಮಗೆ ಪುಸ್ತಕಗಳನ್ನು ಹಾಕಲು ಇರುವ ಏಕೈಕ ಸಾಧನ. 

ಇದ್ದ ಎರಡು ಜೊತೆ ಸಮವಸ್ತ್ರಗಳನ್ನು (ಬಿನ್ನಿ ಕಂಪೆನಿಯರ, ದಪ್ಪ ಲಾಂಗ್‌ಕ್ಲಾತ್‌ನ ಸ್ಕರ್ಟ್) ಒಣಗಿಸಿ ಹಾಕುವುದೇ ಆಗ ದೊಡ್ಡ ಸಾಹಸ. ಮಳೆಗಾಲದಲ್ಲಿ ನಮಗೆ ಶಾಲೆಯಲ್ಲಿ ಆಡಿಸುವ ಆಟ, ಮಾರಾಮಾರಿ ಮತ್ತು ಲಗೋರಿ, ನೀಲಿ ಸ್ಕರ್ಟ್ ಮತ್ತು ಬಿಳಿ ರವಕೆ(ಶರ್ಟ್) ಮೇಲೆ ಕೆಂಪು ಮಣ್ಣಿನ ವಿಧ ವಿಧದ ಚಿತ್ತಾರಗಳನ್ನು ಮೂಡಿಸುವ ಚೆಂಡು, ಆಗ ನಮ್ಮ ಕೋಪ ತೀರಿಸಲು ಇರುವ ಪ್ರಮುಖ ಅಸ್ತ್ರ. ನಮ್ಮ ಬಟ್ಟೆಯ ಮೇಲೆ ಯಾರು ಚಿತ್ತಾರ ಬಿಡಿಸಿದರೋ ಅವರ ಬಟ್ಟೆಯ ಮೇಲೂ ಚಿತ್ತಾರ ಬಿಡಿಸಿಯೇ ಶುದ್ಧ ಎಂಬ ಹಠ. ಮನೆಗೆ ಬಂದ ಮೇಲೆ ಸಿಗುವ ಅಮ್ಮನ ಸಹಸ್ರನಾಮವನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ ಅಲ್ಲವೇ.

ನೆರೆ - ಪ್ರವಾಹ

ನಮ್ಮ ಶಾಲೆಯ ಹಿಂದೆ ಒಂದು ಹಳ್ಳ ಇತ್ತು, ಅದರಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತಿತ್ತು. ಅಲ್ಲಿ ನಮ್ಮ ದಕ್ಷಿಣಕನ್ನಡದ ಪ್ರಸಿದ್ಧ ಆಟವಾದ ಕಂಬಳ(ಕೋಣಗಳ ಓಟದ ಸ್ಪರ್ಧೆ) ನಡೆಸುತ್ತಾರೆ. ಅದರ ಮೇಲೆ ನಿರ್ಮಿಸಿದ ಸೇತುವೆ, ಆ ಹಳ್ಳದ ಆಚೆ ಬದಿಯಲ್ಲಿರುವ ಊರುಗಳಿಗೆ ಮತ್ತು ಶಾಲೆಗೆ ಸಂಪರ್ಕದ ಕೊಂಡಿಯಾಗಿತ್ತು. ನಮ್ಮ ಶಾಲೆಯ ಐವತ್ತು ಪ್ರತಿಶತ ಮಕ್ಕಳು ಸೇತುವೆಯ ಆಚೆ ಬದಿಯ ಊರುಗಳಿಂದ ಬರುತ್ತಿದ್ದರು. ಅದರ ಮೇಲೆ ನೀರು ಬಂದು, ಸೇತುವೆ ಮುಳುಗಿದರೆ, ಶಾಲಾ ಆಡಳಿತ ಮಂಡಳಿಯವರು ರಜೆ ಘೋಷಿಸುತ್ತಿದ್ದರು, ಶಾಲಾ ಹಾಜರಾತಿ ಕಡಿಮೆ ಇರುವುದು ಒಂದು ಕಾರಣವಾದರೆ, ನೀರು ಅಪಾಯದ ಮಟ್ಟ ದಾಟಿದರೆ ಇಷ್ಟು ಮಕ್ಕಳನ್ನು ಕಾಪಾಡುವ ಹೊಣೆ ಅವರದ್ದು ಎಂಬುದು ಇನ್ನೊಂದು ಕಾರಣ. ಆಗ ಈಗಿನ ತರಹ ಮಾಧ್ಯಮಗಳಾದ ವಾಟ್ಸ‌ಅಪ್ ಇಲ್ಲದ ಕಾರಣ, ಶಾಲೆಗೆ ತಲುಪಿದ ಮೇಲೆಯೇ ರಜೆ ಎಂಬ ಸುದ್ದಿ ಗೊತ್ತಾಗುತ್ತಿತ್ತು. ಧಾರಾಕಾರವಾಗಿ ಸುರಿಯುವ ಮಳೆಗೆ ಒದ್ದೆ ಮುದ್ದೆಯಾಗಿ ಶಾಲೆ ತಲುಪಿದ ನಾವು ಮತ್ತೇ ಅದೇ ಮಳೆಗೆ ಪುನಃ ಒದ್ದೆಯಾಗಿ ಮನೆ ಸೇರುತ್ತಿದ್ದೆವು. ಮನೆ ತಲುಪಿದ ತಕ್ಷಣ ಮಳೆ ಕಡಿಮೆಯಾದರೆ, ಮಾತ್ರ, ನಖಶಿಖ ಅಂತ ಕೋಪ ನೆತ್ತಿಗೇರುತ್ತಿತ್ತು. ಈ ಸಮಸ್ಯೆಗೆ ನಾವು ಮಕ್ಕಳೆ ಒಂದು ಪರಿಹಾರ ಹುಡುಕಿದೆವು, ನಮ್ಮ ಮನೆ ಗುಡ್ಡದ ಮೇಲೆ ಇತ್ತು. ನಮ್ಮ ಮನೆಯ ಎದುರಿಗೆ ತಗ್ಗು ಪ್ರದೇಶದಲ್ಲಿ ಒಂದು ಗದ್ದೆ ಇತ್ತು, ಮಳೆಗಾಲದಲ್ಲಿ ಅದರಲ್ಲಿ ನೀರು ತುಂಬುತ್ತಿತ್ತು. ಆ ಗದ್ದೆಯ ನೀರಿನ ಮಟ್ಟ ಮತ್ತು ನಮ್ಮ ಶಾಲೆಯ ಬಳಿಯ ಹಳ್ಳದ ನೀರಿನ ಮಟ್ಟ ಹೋಲಿಸಿ ಗುರುತಿಸಿ ಇಟ್ಟಿದ್ದೇವು. ಗದ್ದೆಯಲ್ಲಿ ನೀರಿನ ಮಟ್ಟ ಇಷ್ಟಿದ್ದರೆ, ಶಾಲೆಯ ಸಮೀಪದ ಸೇತುವೆ ಮುಳುಗುತ್ತದೆ,  ಶಾಲೆಗೆ ರಜೆ ಕೊಡುತ್ತಾರೆ ಎಂದು. ಮಳೆಗಾಲದ ಇಂತಹ ಸಂದರ್ಭಗಳಲ್ಲಿ ಬೆಳಿಗ್ಗೆ ಎದ್ದು ಮೊದಲು ಮಾಡುವ ಕೆಲಸ ಆ ಗದ್ದೆಯ ನೀರಿನ ಮಟ್ಟ ನೋಡುವುದು, ಅದರ ಮೇಲೆ ನಮ್ಮ ಶಾಲೆಗೆ ಹೊರಡುವ ವಿಷಯ ನಿರ್ಧಾರವಾಗುತ್ತಿತ್ತು.

ಮಹಾ ಪ್ರವಾಹ.

ನಾನು ನನ್ನ ಜೀವನದಲ್ಲೇ ನೋಡಿದ ಬಹಳ ದೊಡ್ಡ ಮಟ್ಟದ ಪ್ರವಾಹವೆಂದರೆ, ಸಾವಿರದ ಒಂಬೈನೂರ ಎಪ್ಪತ್ನಾಲ್ಕರಲ್ಲಿ ದಕ್ಷಿಣ ಕನ್ನಡದ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದಂತಹ ಪ್ರವಾಹ. ಆಗ ನನಗೆ ಸುಮಾರು ಐದು ವರ್ಷ ನೆರೆ ಎಂದರೇನೆಂದೆ ತಿಳಿದಿರದ, ನೆರೆಯಿಂದ ಉಂಟಾಗುವ ಕಷ್ಟ, ನಷ್ಟ, ಆಘಾತಗಳ ಅರಿವಿಲ್ಲದ ವಯಸ್ಸು. ಜಲಾವೃತಗೊಂಡ ಊರಿನ ದೃಶ್ಯ ಮಾತ್ರ ನನ್ನ ಕಣ್ಣಿಗೆ ಈಗಲೂ ಅಚ್ಚು ಒತ್ತಿದಂತಿದೆ.

ನಾವು ಆಗ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬ ಊರಿನ, ದೇವಸ್ಥಾನದ ವಠಾರದಲ್ಲಿ ವಾಸವಿದ್ದೆವು. ದೇವಸ್ಥಾನದ ಹಿಂದೆ ನಮ್ಮ ಹೆಮ್ಮೆಯ ನೇತ್ರಾವತಿ ಹರಿಯುತ್ತಿದ್ದಳು. ಆಗಿನ್ನೂ ವೆಂಟೆಡ್ ಡ್ಯಾಮ್ ಎಲ್ಲಾ ಕಟ್ಟಿರಲಿಲ್ಲ, ಬೇಸಿಗೆಯಲ್ಲೂ ನೇತ್ರಾವತಿ ನೀರು ತುಂಬಿ ಬಳಕುತ್ತಾ ಸಮೃದ್ಧವಾಗಿ ಹರಿಯುತ್ತಿದ್ದಂತಹ ಕಾಲ. ಇನ್ನು ಮಳೆಗಾಲ ಅಂದರೆ ಕೇಳಬೇಕೆ, ಆ ವರ್ಷವಂತೂ ಅತಿವೃಷ್ಟಿ, ನೇತ್ರಾವತಿ ರೌದ್ರಾವತಾರ ತಾಳಿಯೇ ಬಿಟ್ಟಳು. ನಾವಿದ್ದ ಮನೆ ಸ್ವಲ್ಪ ಎತ್ತರದಲ್ಲಿತ್ತು,  ಮನೆಯ ಹಿಂದೆ ಸ್ವಲ್ಪ ತಗ್ಗು ಪ್ರದೇಶದಲ್ಲಿ ಸ್ನಾನಗೃಹ, ಬಾವಿ ಇತ್ತು. ಹಿಂದಿನ ದಿನ ರಾತ್ರಿ ಬಾವಿ ಮತ್ತು ಸ್ನಾನಗೃಹಗಳು ಅರ್ಧರ್ಧ ಮುಳುಗುವಷ್ಟು ನೀರಿನ ಮಟ್ಟ ಏರಿತ್ತು. ಎಷ್ಟೇ ಅಂದರೂ ಮನುಷ್ಯ ಆಶಾವಾದಿಯಲ್ಲವೇ, ಬೆಳಿಗ್ಗೆ ಅಂದರೆ ನೀರಿನ ಮಟ್ಟ ಇಳಿಯಬಹುದು, ನೆರೆ ಇಳಿಮುಖವಾಗಬಹುದು ಎಂಬ ಆಸೆಯಿಂದ ನಾವು ವಾಸ ಬದಲಿಸುವ ಯೋಚನೆ ಮಾಡಿಲ್ಲ. ನಡುರಾತ್ರಿಯಾಗುವಾಗ ನೀರಿನ ಮಟ್ಟ ಇಳಿಯುವ ಬದಲು ಏರುತ್ತಾ ಹೋಯಿತು, ನಮ್ಮ ಮನೆ ಹಿಂದೆ ಇದ್ದ ಇಪ್ಪತ್ತು ಮೆಟ್ಟಿಲುಗಳಲ್ಲಿ, ಹತ್ತು ಮೆಟ್ಟಿಲುಗಳು ಅದಾಗಲೇ ಮುಳುಗಿದ್ದವು. ನಮ್ಮನ್ನು ಮಲಗಿಸಿದ ನಮ್ಮ ಹೆತ್ತವರು, ಮನೆಯ ಪಾತ್ರೆ, ಪಗಡ, ಬಟ್ಟೆ ಬರೆಗಳನ್ನೆಲ್ಲಾ ಜೋಪಾನವಾಗಿ ಅಟ್ಟದ ಮೇಲೆ ಎತ್ತಿಡಲು ಆರಂಭಿಸಿದರು. ಬೆಳಗ್ಗಿನ ಜಾವ, ಏರುವ ನೀರು ಆತಂಕಕ್ಕೆ ಎಡೆಮಾಡಿತು, ಮಲಗಿದ್ದ ನಮ್ಮನ್ನು ಎಬ್ಬಿಸಿದ ಹೆತ್ತವರು ಬೇಗ ಬೇಗ ಹಾಸಿಗೆ ಹೊದಿಕೆಗಳನ್ನೂ ಅಟ್ಟಕ್ಕೇರಿಸಿದರು. ನೀರು ದೇವಸ್ಥಾನದ ಪ್ರಾಂಗಣಕ್ಕೆ ಲಗ್ಗೆ ಇಟ್ಟೆ ಬಿಟ್ಟಿತ್ತು, ಊರಿನ ಗಂಡಸರೆಲ್ಲಾ  ಅಪಾಯದಲ್ಲಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ನಮ್ಮ ತಾಯಿಯ ಸೋದರಮಾವ ಆ ಊರಿನ ಸಿಂಡಿಕೇಟ್ ಬ್ಯಾಂಕಿನ ಮೇನೆಜರ್ ಆಗಿದ್ದರು, (ನಮ್ಮ ತಂದೆಯವರೂ ಸಿಂಡಿಕೇಟ್ ಬ್ಯಾಂಕ್‌ನಲ್ಲಿದ್ದರು) ಅವರ ಮನೆ ಸಿಂಡಿಕೇಟ್ ಬ್ಯಾಂಕಿನ ಮೇಲಿನ ಮಹಡಿಯಲ್ಲಿ ಇತ್ತು. ನಮ್ಮನ್ನೆಲ್ಲಾ ಅವರ ಮನೆಗೆ ಸಾಗಿಸುವ ವ್ಯವಸ್ಥೆ ಮಾಡಿದರು, ಆರಡಿ ಎತ್ತರದ ಕಟ್ಟುಮಸ್ತಾದ ಊರಿನ ಗಂಡಸರು ಮಕ್ಕಳಾದ ನಮ್ಮನ್ನೆಲ್ಲಾ ಹೆಗಲ ಮೇಲೆ ಕೂಡಿಸಿ ಕರೆದುಕೊಂಡು ಹೋದರು. ನೀರು ಅವರ ಸೊಂಟದ ತನಕ ಬರುತ್ತಿತ್ತು, ಐದು ಅಡಿ ಎತ್ತರದ ನಮ್ಮ ಅಮ್ಮ ಆ ನೀರಿನಲ್ಲಿ ನಡೆದು ಅರ್ಧ ಕಿ.ಮೀ. ದೂರವನ್ನು ಹೇಗೆ ಕ್ರಮಿಸಿದರು ಎಂದು ಈಗ ಯೋಚಿಸಿದರೂ ನನಗೆ ಉತ್ತರ ಸಿಗುತ್ತಿಲ್ಲ.  ನಾವು ಮತ್ತು ಊರಿನ ಸಾಧಾರಣ ಐವತ್ತು ಜನರು ಎರಡು ಮೂರು ದಿನಗಳ ತನಕ  ಅವರ ಮನೆಯಲ್ಲೇ ಇದ್ದೇವು, ಅಮ್ಮನವರು ಇದ್ದ ಸಾಮಾಗ್ರಿಗಳಲ್ಲೇ ಏನೋ ಬೇಯಿಸಿ ಹಾಕುತ್ತಿದ್ದರು. ಹಿರಿಯರು ಪಾಪ ಕುಳಿತುಕೊಂಡೆ ಹಗಲು ರಾತ್ರಿ ಕಳೆದಿದ್ದರು ಭಯ ಮತ್ತು ಆತಂಕದಿಂದ, ಮಲಗಿದ್ರೆ ನಿದ್ರೆ ಬರಬೇಕಲ್ಲ. ಪ್ರವಾಹ ಇಳಿಮುಖವಾಗಿ ನಾವು ನಮ್ಮ ಮನೆ ಸೇರುವಾಗ ಅದಾಗಲೇ ಎರಡು ಮೂರು ದಿನಗಳಿಂದ ನೀರು ತುಂಬಿದ ಮನೆ ನೋಡುವ ಸ್ಥಿತಿಯಲ್ಲಿಯೇ ಇರಲಿಲ್ಲ. ನೆಲದ ಮೇಲೆ ಒಂದೆರಡು ಇಂಚಿನ ಮಣ್ಣಿನ ರಾಡಿ, ಮಳೆ ನೀರಿನಿಂದ ಹಾಳಾದ, ಕೆಳಗೆ ಬಿಟ್ಟು ಹೋಗಿದ್ದ ಮಂಚ ಮುಂತಾದ ಕೆಲವು ವಸ್ತುಗಳು. ಮತ್ತೆ ನಮ್ಮ ಜನಜೀವನ ಮೊದಲಿನ ಸ್ಥಿತಿಗೆ ಬರಬೇಕಾದರೆ ಎಷ್ಟೋ ದಿನಗಳು ಕಳೆದವು. ಸಾವಿರದ ಒಂಬೈನೂರ ಇಪ್ಪತ್ಮೂರರಲ್ಲಿ ಅಷ್ಟೇ  ಮಹಾಪ್ರವಾಹ ಎದುರಿಸಿದ ನಮ್ಮ ಅಜ್ಜಿ ಹೇಳಿದರು, (ಆಗ ನಮ್ಮ ಅಜ್ಜಿ ಹದಿನಾಲ್ಕರ ಬಾಲೆ) "ಅದರ ನಂತರ ಇದೇ ನೋಡು ದೊಡ್ಡ ಪ್ರವಾಹ" ಎಂದು.

ಬಯಲು ಸೀಮೆಗೂ ನೆರೆಯ ಬಿಸಿ.

ಈಗ ಕಾಲವೂ ಬದಲಾದಂತೆ ಮಳೆಯ ರೀತಿಯೂ ಬದಲಾಗಿದೆ, ಧಾರಾಕಾರವಾಗಿ ಮಳೆ ಸುರಿಯಬೇಕಾದ ಆಷಾಢದಲ್ಲಿ ಬೇಸಿಗೆಯಂತಹ ಬಿರು ಬಿಸಿಲಿನಿಂದ ಕಾದ ಧರೆ, ಈಗ ಶ್ರಾವಣದಲ್ಲಿ ಧಾರಾಕಾರ ಮಳೆ ಸುರಿಸುತ್ತಿದೆ. ಕರಾವಳಿ ಮಲೆನಾಡಿನವರಿಗೆ ಮಳೆ ಒಂದು ಸಾಮಾನ್ಯ ವಿಷಯ, ಅವರು ಮಳೆಯನ್ನು, ನೆರೆಯನ್ನು ಬಾಲ್ಯದಿಂದಲೇ ಕಂಡು, ಅದರೊಡನೆ ಆಡಿ ಬೆಳೆದವರು. ವರ್ಷಕ್ಕೊಂದು ನಾಲ್ಕು ಮಳೆ ಬಂದರೆ ಅದೇ ದೊಡ್ಡ ವಿಷಯವಾಗಿದ್ದ, ಬಯಲು ಸೀಮೆಯಲ್ಲೂ ಈ ಸಲ ಧಾರಾಕಾರ ಮಳೆ ಸುರಿಯುತ್ತಿದೆ. ಕರಾವಳಿ ಮಲೆನಾಡಿನಲ್ಲಿ ಸುರಿಯುವಂತಹ ಮಳೆ ಸತತ ಹತ್ತು ದಿನಗಳಿಂದ ಬಯಲು ಸೀಮೆಯಲ್ಲಿ ಸುರಿದು, ಅಲ್ಲಿನ ಜನರನ್ನು ಕಂಗೆಡಿಸಿದೆ. ನೆರೆ ಎಂದರೇನೆಂದು ಅರಿಯದ ಜನರು, ಅದರ ಅನುಭವದಿಂದ ತತ್ತರಿಸಿ ಹೋಗಿದ್ದಾರೆ. ಹಳ್ಳಿ ಹಳ್ಳಿಗಳೇ ಮಳೆಗೆ ಮುಳುಗಡೆಯಾಗಿವೆ‌, ಪ್ರಕೃತಿಯ ಈ ರೀತಿಯ ಅಟ್ಟಹಾಸ, ಪ್ರಕೃತಿಯ ವೈಪರೀತ್ಯವಲ್ಲದೇ ಇನ್ನೇನೂ?

ಅನಿತಾ ಪೈ

ಮಂಗಳೂರು.