ಜೀವನವೆನ್ನುವ ದೀರ್ಘ ಪ್ರಯಾಣದಲ್ಲಿ ನಾವೂ ಎಷ್ಟೋ ಜನರನ್ನು ಭೇಟಿಯಾಗುತ್ತೇವೆ, ನೋಡುತ್ತೇವೆ, ಮಾತನಾಡುತ್ತೇವೆ.ಆದರೆ ಅವರನ್ನುದಾಟಿ ಹೋದಂತೆ  ಮರೆಯುತ್ತೇವೆ. ಕೆಲವೊಮ್ಮೆ ಅನೀರಿಕ್ಷಿತವಾಗಿ ಕೆಲವರನ್ನು ಭೇಟಿಯಾದಾಗ ಮೆಚ್ಚುತ್ತೇವೆ. ಅವರೊಂದಿಗೆ ಆತ್ಮೀಯರಾಗುತ್ತೇವೆ. ಅಲ್ಲಿ ಬಿಡಿಸಲಾಗದ ನಂಟು ಅಂಟಿಕೊಳ್ಳುತ್ತದೆ. ರಕ್ತ ಸಂಬಂಧ ಇಲ್ಲದೆಯೂ ಕರುಳು ಮಿಡಿಯುವ ಪ್ರೀತಿ ಕಟ್ಟಿಹಾಕುತ್ತದೆ.

ಆಗ ಜಾತಿ-ಮತ, ಮೇಲು-ಕೀಳು, ಯಾವುದೂ ಅಡ್ಡಿ ಬರುವುದಿಲ್ಲ. ಅಡ್ಡ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಆ ಪ್ರೀತಿಗಿರುತ್ತದೆ. ತಾಯಿ ಮಗುವಿನ ಪ್ರೀತಿ, ಸಹೋದರತ್ವದ ಪ್ರೀತಿ, ಗೆಳೆತನದ ಪ್ರೀತಿ ಎಲ್ಲವೂ ಇಲ್ಲಿ ವಿಜೃಂಭಿಸುತ್ತದೆ. ಈ ರೀತಿಯ ವಿಚಿತ್ರ ಆಕರ್ಷಣೆ, ವಿಚಿತ್ರ ಪ್ರೀತಿಯಿಂದಾಗಿಯೇ ಎಷ್ಟೋ ಅನಾಥ ಮಕ್ಕಳು ತಾಯಂದಿರನ್ನು ಪಡೆಯುತ್ತಾರೆ. ಎಷ್ಟೋ ಹೃದಯಗಳು ಸಹೋದರತ್ವದ ಭಾವನೆಯಿಂದ ಒಟ್ಟುಗೂಡುತ್ತವೆ. ಕೆಲವೊಮ್ಮೆ ಈ ರೀತಿಯ ಅನಿರೀಕ್ಷಿತ ಭೇಟಿಗಳು ಜೀವನದ ಗುರಿಯನ್ನೇ ಬದಲಾಯಿಸುತ್ತದೆ. ನಮಗರಿಯದೇ ನಾವು ಈ ಗತಿಯನ್ನುಅನುಸರಿಸಿ ಹೋಗುತ್ತೇವೆ. ಇದಕ್ಕೆ, ಏನೆನ್ನುವುದು?

ವಿಧಿ? ಹಣೆಬರಹ? ಹಿಂದಿನ ಜನ್ಮದ ಕರ್ಮಗಳ? ಸೋಲು, ಗೆಲುವು?... ಇದಕ್ಕೆಉತ್ತರವಿಲ್ಲ. ಇದುವೇ ಜೀವನ... ಏನಿದೆ-ಏನಿಲ್ಲ ಎನ್ನುವಂಥ ಸಂಕೀರ್ಣತೆ ತುಂಬಿದ ಜೀವನ. ಜೀವನವನ್ನು ಯಾವುದೇ ಚೌಕಟ್ಟಿನಲ್ಲಿ ಬಂಧಿಸಲು ಸಾಧ್ಯವಿಲ್ಲ. ಅನೀರಿಕ್ಷಿತ ಘಟನೆಗಳು, ಅನೀರಿಕ್ಷಿತ ತಿರುವುಗಳು ನಾವು ಹಾಕಿಟ್ಟ ಚೌಕಟ್ಟನ್ನು ಒಡೆಯುತ್ತವೆ. ಪ್ರತಿಯೊಬ್ಬರ ಬದುಕಿನಲ್ಲೂ ಇದೆಲ್ಲವೂ ನಡೆದಿರುತ್ತದೆ .

ಏನೋ ಆಗಬೇಕೆಂದು ಭವಿಷ್ಯದ  ಕನಸ ಕಟ್ಟಿ, ಮತ್ತೇನೋ ಆಗುವುದು. ಕನಸಿನ ಚೌಕಟ್ಟು ಒಡೆದಾಗ ಕುಸಿಯುತ್ತೇವೆ ಇಲ್ಲವೇ ಮತ್ಯಾವುದನ್ನೋ ಹುಡುಕುತ್ತೇವೆ. ಬದುಕೆಂದರೆ ಹೀಗೆಯೆ ಆಳಅಗಲವಿಲ್ಲದ ,ಅಂತ್ಯ ಆರಂಭಗಳಿಲ್ಲದ ಅರ್ಥವೇ ಆಗದ ಒಂದು ಅನುಭವ...



- By ಅಖಿಲಾ

ದ್ವಿತೀಯಬಿಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು