ಭ್ರೂಣಾವಸ್ಥೆಯಲ್ಲಿ ಶುರು ಸಮರಾಭ್ಯಾಸ. ತನ್ನತ್ತ ಬರುತ್ತಿರುವ ಬಾಣಗಳ ಸರಮಾಲೆಯ ಸರಿಸಿ ಜೀವನ ಎದುರಿಸುವ ಕಾಣುವ ಕರಾಳ ಊರಿನ ಅಲಿಖಿತ ಅರಸಿ. ತನ್ನವರ್ಯಾರು ಪರರ್ಯಾರು ಎಂಬ ವಿಷಯದ ಕುರಿತ ವಾಸ್ತವತೆಯನ್ನು ತಿಳಿಯಲು ಬೇಕಾಗುವುದು ಅವಳ ಪೂರ್ಣಾಯಸ್ಸು. ತನ್ನ ನೆರಳನ್ನೂ ನಂಬಲು ಅಸಾಧ್ಯಳು ಆಕೆ. ಸದಾ ಭಯದಲ್ಲೇ ಏದುಸಿರು ಬಿಡುವಳು. ಅಂದೆಂದೊ ಅಜ್ಜಿ ಹೇಳಿದಳು "ಅವಳ್ಯಾವಳೋ ಅತ್ತು ಅಪಮಾನ ಹೊತ್ತು ರಾವಣನ ವಂಶ ತೊಳೆದ ಕಥೆಯ". ಕೇಳಿದಳು ಆಕೆ ಅಂದು ಒಬ್ಬನೇ ಒಬ್ಬ ರಾವಣನ ಇರುವಿಕೆಯ. ಅರಿವೇ ಇಲ್ಲದಾಗಿತ್ತು ಅಜ್ಜಿಗೆ, ಬಹುಶಃ ಅರವತ್ತರ ಮರೆವು ಇರಬಹುದು. ಇಂದು ರಾವಣನಂತಹವರು ರಕ್ತಬೀಜಾಸುರರಾಗಿ ಹೆಜ್ಜೆಹೆಜ್ಜೆಗೂ ಕಾಮದಿ ಕಾಡುತಿಹರೆಂದು. ತಗ್ಗಿದಳೂ ಬಿಡಲಿಲ್ಲಾ, ಕುಗ್ಗುತ್ತಿರುವಳು ಬಿಡುತ್ತಿಲ್ಲಾ. ಅವಳಲ್ಲಿನ ಅಂಜಿಕೆಯ ದೂರಮಾಡವವರು ಇನ್ನು  ಜನ್ಮ ಪಡೆದಿಲ್ಲ. ಮುಂದೆ ಪಡೆಯುವರೆಂಬ ನಂಬಿಕೆ  ಕಿಂಚಿತ್ತೂ ಇಲ್ಲ. ಕೆಲವೊಂದು ಘಟನೆಗಳು ಕೇಳಿದೊಡನೆಯೇ ಕರ್ಣಗಳು ಕಿವುಡಾಗುವುದು.

ಛೇ ಎಂಥಾ ಸಮಾಜದಲ್ಲಿ ಬಿಟ್ಟೆ ಭಗವಂತ! ತಂದೆಯಾದವನೇ ಮಗಳಿಗೆ ಕೀಚಕನಾಗಿ ಕಾಡುತ್ತಿರುವಾಗ, ಸಹೋದರನ ರಾವಣನಾಗಿ ವಿಕೃತಿಯಿಂದ ಮೆರೆಯುತ್ತಿರುವಾಗ, ಆತ್ಮೀಯನೇ ದುಶ್ಯಾಸನನಾಗಿ ದುಷ್ಟತೆಯ ತೋರುತ್ತಿರುವಾಗ. ನೀನೇನು ಬಹು ಅಂಗಾಂಗದ ವೈಫಲ್ಯತೆಯಿಂದ ಬಳಲುತ್ತಿದ್ದೀಯಾ ಹೇಗೆ? ಕುರುಡನಾಗಿದ್ದೀಯಾ, ಕಿವುಡನಾಗಿದ್ದೀಯಾ ಅಥವಾ ಶಕ್ತಿಹೀನನಾಗಿದ್ದೀಯಾ. ಧರ್ಮ-ಅಧರ್ಮಗಳ ತಕ್ಕಡಿಯನ್ನ ತಗಡಿಗೆ ಹಾಕಿದ್ದೀಯಾ.  ದುಷ್ಟ ಶಿಷ್ಟರ ಗುರುತಿಸುವಲ್ಲಿ ಮತಿಹೀನನಾಗಿದ್ದೀಯಾ. ಒಂದು ಕಾಣೆನಾ. ನೀನೇ ಸೃಷ್ಟಿಕರ್ತ ಆದರೆ ನೀನೇ ನೀಡಿದ ಕಾರ್ಯವ ನಿರ್ವಹಿಸುತ್ತಿರುವೆನೆಲ್ಲಾ ನಾನು. ಪ್ರಕೃತಿಯ ಹಾಗೆ ಸೃಷ್ಟಿಯ ಮೂಲ ನಾನಲ್ಲವೇ. ಆಗಿನಿಂದ ಈಗಿನವರೆಗೆ ನೀ ನನಗೆಂದು ಕೊಟ್ಟದ್ದು ಕೇವಲ ಅಗ್ನಿಪರೀಕ್ಷೆಯೇ ಹೊರತು ಮತ್ತೇನಲ್ಲಾ. ತಾಯಿಯಾದವಳೂ ಶಪಿಸಿದ್ದೂ ಉಂಟು ನಿನ್ನ ಮನಸಾರೆ. ಬಯಸಿತು ಅವಳ ಮನ ಅಲಮೇಲಮ್ಮನ ಹಾಗೆ, ತನ್ನ ಶಾಪವೂ ಫಲಿಸಿ ಈ ಭುವಿಯಲ್ಲಿ ಹೆಣ್ಣೆಂಬ ಸಂತತಿಯು ಇಲ್ಲದಂತಾಗಲಿ ಎಂದು. ಎಷ್ಟು ತಾನೇ ಸಹಿಸುವಳು ಅವಳು ಪ್ರತಿ ಶ್ವಾಸದಲ್ಲೂ ಭಯ, ಅವಮಾನಗಳೇ  ತುಂಬಿದಾಗ ಅವಳ ಮನ ಕೆರಳಿ ಕೆಂಡವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಎಷ್ಟು ತಾನೇ ಸಹಿಸುವಳು ಅವಳು ಪ್ರತಿ ಶ್ವಾಸವು ಭಯ ಅವಮಾನಗಳಿಂದ  ತುಂಬಿದಾಗ ಬದುಕುವ ಬಯಕೆಯೇ ಬರಡಾಗುವುದು. ತಿಳಿದಿದೆ ಅವಳಿಗೆ ಪಾರ್ವತಿಯ ಶಾಂತ ಸ್ವರೂಪ ಹಾಗೂ ಭದ್ರಕಾಳಿಯ ವಿಶ್ವರೂಪ. ಕಾಳಿಯ ಕೋಪಕ್ಕೆ ಪ್ರಕೃತಿಗೆ ಅಪಾರ ಪೆಟ್ಟಾಗಿದ್ದು ಅರಿತಿರುವಳು ಆಕೆ. ಅಬಲೆಯಾದವಳಿಗೆ ಸಬಲೆಯಾಗುವುದು ಕಷ್ಟವೇನಲ್ಲ. ಹಾಗೆ ತನ್ನ ತಾಳ್ಮೆಯ ಕಳೆದುಕೊಂಡರೆ ಅದುವೇ ಸೃಷ್ಟಿಯ ವಿನಾಶದ ಆರಂಭವೆಂಬ ಜ್ಞಾನವಿದೆ. ಇದ ತಿಳಿದು ಗಂಡೆಂಬ ಪ್ರಾಣಿಯು ಹೆಣ್ಣುತ್ತ ಕಾಮದ ನೋಟವ ಬೀರದೆ, ಅವಳೊಂದಿಗಿನ ಅರಾಜಕತೆಗೆ ಮುಕ್ತಿ ಹಾಡಿ, ಅವನದೇ ಬದುಕನ್ನ ಬಂಗಾರವಾಗಿಸಬೇಕಿದೆ. ಇನ್ನೂ ಈಗಿನ ಸನ್ನಿವೇಶಕ್ಕೆ ಹೆಣ್ಣಿಂದ ವೃಷ್ಟಿಯ ಕಾಲ ದೂರವಂತೂ ಇಲ್ಲಾ. ಹೆಣ್ಣಿನೊಂದಿಗಿನ ಗಂಡಿನ ನಡೆಯಿಂದ ದೊರೆಯುವುದು ನಾಕ ಅಥವಾ ನರಕ. ಹೆಣ್ಣೇ ಸೃಷ್ಠಿಯ ಕಣ್ಣು. ಸಾಕಿನ್ನೂ ಆರಲಿ ಅವಳೊಂದಿಗಿನ ಅತ್ಯಾಚಾರವೆಂಬ ಅಂಗೈ ಹುಣ್ಣು.  ಮಾನಿನಿಯ ಮಹತ್ವ ಇರುವುದು ಜಗದಗಲ ಆದರೆ ನೀನ್ ಅರಿತದ್ದು ಅಡಿಯಗಲ. ಇನ್ನಾದರೂ ನಿಲ್ಲಲಿ ಈ ಕ್ರೌರ್ಯ. ಜಗದಲ್ಲಿ ಶಾಂತಿ ನೆಲೆಸಬೇಕಾದರೆ ಮೊದಲು ನಿನ್ನ ಮನೆಯಾಕೆ ನಿರ್ಭೀತಳಾಗಬೇಕು. ಕೇಳಲ್ಲ ಅವಳು ಹೆಚ್ಚೇನು ಕೊಟ್ಟರೆ ನೀನು ಕಿಂಚಿತ್ತು ಗೌರವ. ರಾಷ್ಟ್ರಪಿತ ಬಯಸಿದ ಸ್ವಾತಂತ್ರ್ಯ ತರಲು ಸಜ್ಜಾಗಿ ಇನ್ನಾದರೂ ಅವರ ಋಣ ಮುಕ್ತವಾಗೋಣ. ನೆನಪಿರಲಿ ಹೆಣ್ಣೆಂದರೆ ಕೇವಲ ಹೆಣ್ಣಲ್ಲಾ ಅವಳು ಮುಕ್ಕಣ್ಣನ ಹುರಿಗಣ್ಣು.


By ಮಾಗಿದ ಮನಸ್ಸು