ಮಂಗಳೂರು:- ಕೊರೊನಾ ಕಾಲದ ಏಕತಾನತೆಯನ್ನು ಮರೆಸಲು ಶಕ್ತಿನಗರದ ಕಲಾಂಗಣದಲ್ಲಿ ನಡೆದ ತಿಂಗಳ ವೇದಿಕೆ ಸರಣಿಯ 227 ನೇ ಕಾರ್ಯಕ್ರಮವು ಸಹಕಾರಿಯಾಯಿತು. 06-12-20 ರಂದು ಸಂಜೆ 6.30 ಗಂಟೆಗೆ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ತುಂಬಿದ ಬಯಲು ರಂಗಮಂದಿರ ಸಾಕ್ಷಿಯಾಯಿತು.
ಮೊದಲಿಗೆ ಪ್ರಖ್ಯಾತ ಸಿ.ಎ. ಹಾಗೂ ಸಂಗೀತ ಪ್ರೇಮಿ ಒಲ್ವಿನ್ ರಾಡ್ರಿಗಸ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಧ್ಯಕ್ಷ ಲುವಿ ಪಿಂಟೊ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಸುಮೇಳ್, ಕಲಾಕುಲ್, ನಾಚ್ ಸೊಭಾಣ್, ವಾಮಂಜೂರಿನ ನ್ಯೂಸ್ಟಾರ್ ಬ್ರಾಸ್ ಬ್ಯಾಂಡ್ ಮತ್ತು ಆಲ್ವಿನ್ ಬಜ್ಪೆ ತಂಡದ 75 ಕಲಾವಿದರುಗಳು ಅರುಣ್ರಾಜ್ ರಾಡ್ರಿಗಸ್ ಪರಿಕಲ್ಪನೆಯಲ್ಲಿ ಮೂಡಿ ಬಂದ `ಯೆವಾ ನಾಚಾ ತೆಂಚಾ ವಾಂಗ್ಡಾ (ಬನ್ನಿ ಅವರ ಸಂಗಡ ಕುಣಿಯೋಣ) ಕಾರ್ಯಕ್ರಮವನ್ನು ಸಾದರಪಡಿಸಿದರು. ಇದರಲ್ಲಿ ಕ್ರಿಸ್ಮಸ್ ಸಂಬಂಧಿ ಹಾಡುಗಳು, ನೃತ್ಯಗಳು, ಕಿರುನಾಟಕ, ಬ್ಯಾಂಡ್ ವಾದನ ಹಾಗೂ ಕ್ರಿಸ್ಮಸ್ ಆಟ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಎರಿಕ್ ಒಝೇರಿಯೊ ಸಂಗೀತ ನಿರ್ದೇಶನ, ವಿಕಾಸ್ ಲಸ್ರಾದೊ ನಾಟಕ ನಿರ್ದೇಶನ ಹಾಗೂ ರಾಹುಲ್ ಪಿಂಟೊ ನೃತ್ಯ ಸಂಯೋಜನೆ ನೀಡಿದ್ದರು. ಪ್ರೇಕ್ಷಕರಿಗೆ ಕುಸ್ವಾರ್ (ಕ್ರಿಸ್ಮಸ್ ಸಿಹಿತಿಂಡಿ) ನೀಡಿ ಖುಶಿ ಪಡಿಸಲಾಯಿತು.