ಬಫರ್ zone (ಇದು ಯಾರ ಆವಾಸ ?)

ಪುಸ್ತಕ ಪರಿಚಯ : - ಕಾದಂಬರಿ

ಲೇಖಕರು : ರತ್ನಾಕರ್ ಗಡಿಗೇಶ್ವರ

ಪುಟಗಳು : 116

ಬೆಲೆ : 120

ಮಲೆನಾಡು...ನೋಡುಗರಿಗೆ ಮಾತ್ರ ಅದು ಸ್ವರ್ಗ. ಅಲ್ಲಿ ಜೀವಿಸುವವರಿಗೆ ಮಾತ್ರ ಅಲ್ಲಿನ ಸವಾಲುಗಳ ಅರಿವಿರುತ್ತದೆ. ಅಲ್ಲಿನ ಮಳೆ, ಕಲ್ಲು, ಮಣ್ಣು, ಬೆಟ್ಟ ಗುಡ್ಡ, ಹರಿವ ನೀರು, ಬೀಸೊ ಗಾಳಿ, ಅರಣ್ಯ ಮತ್ತು ಅಲ್ಲಿನ ಜೀವವೈವಿಧ್ಯತೆ, ತೋಟಗಾರಿಕೆ, ಎಲ್ಲದರೊಟ್ಟಿಗೆ ಒಂದು ಚೆಂದದ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತದೆ ಮೂಲ ಮಲೆನಾಡಿಗರಿಗೆ.

ಪ್ರಸ್ತುತ ಈ ಬಫರ್ ಜೋನ್ ಕಾದಂಬರಿ, ಇಂತಹದ್ದೇ ಅಪ್ಪಟ ಮಲೆನಾಡಿಗರ ಬದುಕನ್ನು ತೆರೆದಿಡುವ ಪುಸ್ತಕ. ಭದ್ರಾ ವನ್ಯಜೀವಿ ಯೋಜನೆಯಡಿಯಲ್ಲಿ ನೆಲೆ ಮತ್ತು ನಗುವನ್ನು ಕಳೆದುಕೊಂಡು ಅಲೆಮಾರಿಯಂತೆ ಸರ್ಕಾರ ನಿಗದಿಪಡಿಸಿದ ಬೇರೊಂದು ಸ್ಥಳದಲ್ಲಿ ಬದುಕು ಕಟ್ಟಿಕೊಳ್ಳಲು ಒದ್ದಾಡಿ, ಕೊನೆಗೆ ಸಾಧ್ಯವಾಗದೆ ಮತ್ತೊಂದಡೆ ಹೋಗಿ ನೆಲೆನಿಂತವರ ಅಳಲು, ಜೊತೆಗೆ ನೆಲೆನಿಂತ ಜಾಗವು ಮತ್ಯಾವುದೊ ಬಫರ್ ಜೋನ್ ಎಂಬ ಸರ್ಕಾರದ ಮತ್ತೊಂದು ಯೋಚನೆಗೆ ಆಹಾರವಾಗುವಾಗ, ಆ ರೈತರ ಮನದೊಳಗೆ ಹುಟ್ಟುವ ಕೋಲಾಹಲ, ಯೋಚನೆಗಳ ತಳಮಳ, ಎಲ್ಲವನ್ನು ಯಂಕ್ಟಣ್ಣ, ಮಂಜಕ್ಕ ಮತ್ತು ಇದರಲ್ಲಿ ಬರುವ ಇನ್ನಿತರ ಪಾತ್ರಗಳ ಮೂಲಕ ನೈಜಘಟನೆಗಳನ್ನು ಪದಗಳ ರೂಪಕ್ಕಿಳಿಸುವಲ್ಲಿ ಯಶಸ್ವಿಯಾದ, ಶ್ರೀಯುತ ರತ್ನಾಕರ್ ಅವರ ಪಾತ್ರ ದೊಡ್ಡದು.

ಕಥೆಯ ನಡುನಡುವೆ ಬರುವ ಪ್ರಕೃತಿಯ ವರ್ಣನೆ ಸೀದಾ ನಮ್ಮನ್ನು ಮಲೆನಾಡಿನ ಮಡಿಲಲ್ಲಿ ನಿಲ್ಲಿಸಿದರೆ, ಅದರಲ್ಲಿ ಬರುವ ವಿಭಿನ್ನ ಜಾತಿಯ ಸಸ್ಯಗಳ ಹೆಸರುಗಳು ಮತ್ತು ಅದರೆಡೆಗಿನ ಮಾಹಿತಿಗಳು ಹೊಸತೇ ಲೋಕವನ್ನು ನಮಗೆ ಪರಿಚಯಿಸುತ್ತದೆ. ಭದ್ರೆಯ ಹುಟ್ಟು, ಹರಿವಿನ ಚಿತ್ರಣದ ಜೊತೆಗೆ ಹಳ್ಳಿಗರ, ರೈತರ ಜೀವನದ ಪಾಡು ಹೇಗೆಂಬ ವಾಸ್ತವ ಪರಿಚಯಿಸುತ್ತದೆ. ಜೊತೆಜೊತೆಗೆ ಹಿಂದಿನವರ ಮೂಢನಂಬಿಕಯ ಆಚರಣೆಗಳು ಎಂದುಕೊಂಡು ಅಲ್ಲಗಳೆವ ಕೆಲವು ಹಬ್ಬಹರಿದಿನಗಳ ಹಿಂದಿನ ವೈಜ್ಞಾನಿಕ ಕಾರಣವನ್ನು ಲೇಖಕರು ತಮ್ಮ ಬರವಣಿಗೆಯ ಚಾತುರ್ಯದಲ್ಲಿ ಬಿಚ್ಚಿಟ್ಟಿದ್ದಾರೆ.

ಕತೆಯನ್ನು ಓದುತ್ತಾ ಹೋದಂತೆಲ್ಲ, " ಕಾಡುಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಘರ್ಷಕ್ಕೆ ಅರಣ್ಯ ಇಲಾಖೆಯೆ ಕಾರಣ " ಎಂಬ ಸಾಲು ಒಮ್ಮೆಯಾದರೂ ನಮ್ಮನ್ನು ಇದರೆಡೆಗೆ ಚಿಂತನೆಗೆ ದೂಡುತ್ತವೆ. ಒಂದೊಮ್ಮೆ ಹೌದು ಅಂತಲೂ ಅನ್ನಿಸುತ್ತದೆ..! ಕತೆಯಲ್ಲಿ ಬರುವ ಸುಬ್ಬಣ್ಣ ಎಂಬ ರೈತನ ಪಾತ್ರಧಾರಿ ನಮ್ಮ ಮಣ್ಣಿನ ಫಲವತ್ತತೆಯ ಅವಸಾನ, ಕಾಡುನಾಶ, ಸವಕಳಿ, ವಾತಾವರಣದ ವೈಪರೀತ್ಯ, ಎಲ್ಲದರ ಹಿಂದಿನ ಕಾರಣ ಏನು ಎಂಬುದನ್ನು, ಯಾವುದೇ ವಿಜ್ಞಾನಿ ಅಥವಾ ಮಣ್ಣಿನೆಡೆಗೆ ಪಿ.ಹೆಚ್.ಡಿ ಮಾಡಿದ ವಿದ್ಯಾವಂತನಿಗಿಂತ ಹೆಚ್ಚಿನದೇನೊ, ಆಗಿನ ಕಾಲದಲ್ಲಿ ಶಾಲೆ ಕಲಿಯದ ಸಾಮಾನ್ಯರಿಗು ತಿಳಿದಿತ್ತು, ಮತ್ತವರು ಆಚರಣೆಗಳ ಮೂಲಕ ಹೇಗೆ ಸೃಷ್ಟಿಯ ಅದ್ಬುತವೆನಿಸುವ ಪ್ರಕೃತಿಯನ್ನು ಉಳಿಸಿಕೊಂಡು ಬಂದಿದ್ದರು ಎಂಬ ಮಾಹಿತಿಯನ್ನು ನೇರ ಹೃದಯಕ್ಕೆ ನಾಟುವಂತೆ ಹೇಳುವ ಶೈಲಿ ನಿಜಕ್ಕೂ ಅದ್ಭುತವೆ.

'ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ' ಎಂಬ ಮಾತು ಸತ್ಯವೆ ಎನಿಸುವಂತೆ ಅನೇಕ ಸಂದರ್ಭಗಳು ಕತೆಯ ನಡುವೆ ಬಂದು ಹೋಗಿತ್ತವೆ. ಈ ಆಧುನಿಕತೆಯಲ್ಲಿ ಮೈಮರೆತಿರುವಾಗ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಅದರ ಹಿಂದಿನ ಕಾರಣಗಳು, ಪ್ರಕೃತಿಯ ಸಮತೋಲನಕ್ಕೆ ಪಶ್ಚಿಮ ಘಟ್ಟದ ಕಾಡುಗಳ ಉಳಿವಿನ ಅನಿವಾರ್ಯತೆ, ನಶಿಸುತ್ತಿರುವ ಜೀವವೈವಿಧ್ಯತೆಯನ್ನು ಉಳಿಸಲು ಇರುವ ದಾರಿ, ಎಲ್ಲವನ್ನೂ ವಿಸ್ತಾರವಾಗಿ ಲೇಖಕರು ಈ ಕಾದಂಬರಿಯಲ್ಲಿ ಕಟ್ಟಿಕೊಡುವ ಸುಂದರ ಪ್ರಯತ್ನ ಮಾಡಿದ್ದಾರೆ.

ಸರ್ಕಾರದ ಯೋಜನೆಗಳು ರೈತರನ್ನು ತಲುಪುವಲ್ಲಿ ಹೇಗೆ ವಿಫಲವಾಗುತ್ತವೆ, ಮತ್ತು ಜನಪ್ರತಿನಿಧಿಗಳ ಧೋರಣೆ, ಮನುಷ್ಯರ ಸ್ವಾರ್ಥಕ್ಕೆ ನಾಶವಾಗುತ್ತಿರುವ ನಮ್ಮ ಮಣ್ಣಿನ ಮೂಲ ಸಂಸ್ಕೃತಿಯ ಇಂಚಿಂಚೂ ಮಾಹಿತಿಯನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ರತ್ನಾಕರ್ ಸರ್ ಮಾಡಿರುವುದು ಅಭಿನಂದನಾರ್ಹವಾದುದು. ಇವರಿಂದ ಇಂತಹ ಮತ್ತಷ್ಟು ಅಧ್ಯಯನಾಶೀಲ ಮತ್ತು ಸಾಮಾಜಿಕ ಕಳಕಳಿಯ ಪುಸ್ತಕಗಳು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ದೊರೆಯಲಿ ಎಂಬ ಆಶಯದೊಂದಿಗೆ, ಬಫರ್ ಜೋನ್ ಎಂಬ ಈ ಅತ್ಯುತ್ತಮ ಪುಸ್ತಕ ನಮ್ಮ ಕೈಗಿರಿಸಿದ ರತ್ನಾಕರ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಎಲ್ಲರೂ ಪುಸ್ತಕವನ್ನು ಕೊಂಡು ಓದಿ, ಪ್ರೋತ್ಸಾಹ ನೀಡಿ. ಕನ್ನಡದ ಪುಸ್ತಕ ಲೋಕ ಮರಳಿ ತನ್ನ ವೈಭವವನ್ನು ಪಡೆಯಲಿ. ಹನಿ ಹನಿ ಸೇರಿದರೆ ಹಳ್ಳ...

- ಪಲ್ಲವಿ ಚೆನ್ನಬಸಪ್ಪ