ನಗರ ಬೆಳೆದಂತೆ ಅಲ್ಲಿನ ನದಿಗಳೇ ಗಟಾರ ಎನಿಸುವಾಗ ತೋಡುಗಳ ಕತೆ ಕೇಳುವ‌ವರಾರು? ಮೊದಲು ಗಟಾರವಾಗಿ ಆಮೇಲೆ ಅವು ಒಳಚರಂಡಿ ಆಗಿಬಿಡುತ್ತವೆ.

ಅಂಥ ಒಂದು ತೋಡು ಕಾರ್ನಾಡ್ ಸದಾಶಿವರಾವ್ ರಸ್ತೆಯಲ್ಲಿ ಅಡ್ಡಕ್ಕೆ ಇದ್ದುದನ್ನು ನೀವು ನೋಡಿರಲು ಸಾಧ್ಯವಿಲ್ಲ. ಆದರೆ ಅದನ್ನು ಊಹಿಸಲು ಸಾಧ್ಯವಿತ್ತು. ರಸ್ತೆಯ ಆಕಡೆ ಕೆಳಕ್ಕೆ ತೋಡು ವಿಠೋಬಾ ರುಕುಮಾಯಿಯರತ್ತ ಹರಿಯುತ್ತದೆ, ಈ ಕಡೆ ಎಸ್‌ಸಿಡಿಸಿಸಿ ಬ್ಯಾಂಕಿನ ಅಂಚಿನಿಂದ ಮೇಲಿನಿಂದ ತೋಡು ಕೆಳಕ್ಕೆ ಇಳಿಯುತ್ತದೆ. ಒಳಗೆ ತೋಡು ಆದರೂ ಒಳಚರಂಡಿ ಎನಿಸಿ ರಸ್ತೆಯಡಿ ಅಡಗಿಸಿಡಲಾಗಿತ್ತು ಈ ತೋಡನ್ನು.

ಹಾಗಿದ್ದ ಮೇಲೆ ಅದರ ಮೇಲೊಂದು ಸೇತುವೆ ಇರಬೇಕು. ಇಲ್ಲಿನ ಸಮಸ್ಯೆ ಎಂದರೆ ತೋಡಿನ ಅಡ್ಡಕ್ಕೆ ಸೇತುವೆ ಕಟ್ಟಿ ಫಲವಿಲ್ಲ. ಅದು ರಸ್ತೆಯಗಲಕ್ಕೂ ಹರಿದಿರುವುದರಿಂದ ಅಗಲಕ್ಕೆ ಎಂಬ ಲೆಕ್ಕದಲ್ಲೂ ತೋಡಿನ ಉದ್ದಕ್ಕೂ ಅಂದರೆ ಇಲ್ಲಿ ‌ರಸ್ತೆಯ ಅಗಲಕ್ಕೆ ಸೇತುವೆ ಕಟ್ಟಲಾಗಿದೆ.

ತೋಡಿನ ಇಕ್ಕೆಲಗಳಲ್ಲಿ ಸಿಮೆಂಟ್ ಕಂಬ ನಿಲ್ಲಿಸಿ ಅದರ‌ ಮೇಲೆ ಸೇತುವೆ ರಚಿಸಲಾಗಿತ್ತು. ಅದರ ಮೇಲೆ ಕಾರ್ನಾಡ್ ಸದಾಶಿವರಾವ್ ರಸ್ತೆಯ ಈ ಭಾಗ ನಿರ್ಮಾಣವಾಗಿತ್ತು. ರಸ್ತೆಯು ಡಾಮಾರು ಆಮೇಲೆ ಕಾಂಕ್ರೀಟ್ ಎಂದು ಉನ್ನತೀಕರಿಸಿಕೊಂಡಿದೆ. ಆದ್ದರಿಂದ ಈ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಸೇತುವೆ ಮುಟ್ಟುವ ಭಾಗ್ಯವಿಲ್ಲ, ಅದರ ಮೇಲೆ ನಿರ್ಮಿಸಲಾದ ರಸ್ತೆಯ ಮೇಲೆ ಅವು ಓಡಾಡುತ್ತಿದ್ದವು. ಹಾಗಾಗಿ ಇದನ್ನು ಅದೃಶ್ಯದ ಇಲ್ಲವೇ ಇನ್‌ವಿಸಿಬಲ್ ಸೇತುವೆ ಎನ್ನಬಹುದು.

ಬೆಂಗಳೂರಿನ ‌ವೃಷಭಾವತಿ, ಚೆನ್ನೈನ ಕೂವಂ, ಪೂನಾದ ಮುಳಾ, ಮುಂಬಯಿಯ ಸಪೋರಾ ಮೊದಲಾದ ನದಿಗಳನ್ನು ಜನರು ಗಟಾರಗಳೆಂದೇ ಪರಿಗಣಿಸುವಂತಾಗಿದೆ. ಚೆನ್ನೈನ ಕೂವಂ ನದಿ ಅತಿ ಮಲಿನತೆಯ ನದಿ ಎನಿಸಿದೆ. ಅದನ್ನು ಸ್ವಲ್ಪವಾದರೂ ಶುದ್ಧೀಕರಿಸುವ ಕೆಲಸದಲ್ಲಿ ಆಡಳಿತ ತೊಡಗಿಕೊಂಡಿದೆ. ಬೆಂಗಳೂರಿನ ವೃಷಭಾವತಿ ಮೂಲ ಮಲ್ಲೇಶ್ವರದ‌ ಸ್ಯಾಂಕಿ ಕೆರೆಯಾಚೆ. ಸೂರ್ಯನಾಥ ಕಾಮತ್ ಎಂಬವರು ದಡ್ಡತನ ಮಾಡಿ ಬೆಂಗಳೂರು ಗೆಜೆಟಿಯರ್‌ನ ಹೊಸ ಆವೃತ್ತಿಯಲ್ಲಿ ಅದರ ಮೂಲವನ್ನು ಬಸವನಗುಡಿಗೆ ದಾಟಿಸಿದ್ದಾರೆ. ಇತಿಹಾಸ ತಿರುಚುವ ಕೆಲಸಗಳಲ್ಲಿ ಇದೂ ಒಂದಾಗಿದೆ.

ಮಂಗಳೂರಿನ ಕುದ್ರೋಳಿ, ಅಳಕೆ, ಕೊಡಿಯಾಲ, ಮಾಲೆಮಾರ್,‌ ಕೂಳೂರು, ಮರೋಳಿ, ಜೆಪ್ಪು, ಕಡೆಕಾರ್‌ ಎಲ್ಲ ಕಡೆಯ ತೋಡುಗಳು ಇಂದು ಗಟಾರಗಳೆಂದೇ ಪರಿಗಣನೆಗೆ ಬರುತ್ತಿವೆ. ಮಾಲೆಮಾರ್ ಮೊದಲಾದ ಕಡೆ‌  ತೋಡಿನ ದಾರಿ ತಡೆದು ನಿಸರ್ಗಕ್ಕೆ ವಂಚಿಸಿದವರೂ ನಮ್ಮಲ್ಲಿದ್ದಾರೆ. ಕಾರ್ನಾಡ್ ಸದಾಶಿವರಾವ್ ರಸ್ತೆ ಮೇಲಿನ ಸೇತುವೆ ಇಷ್ಟಾದರೂ ಸೋತಿರಲಿಲ್ಲ; ಅಳುತ್ತಿರಲಿಲ್ಲ. ಆದರೆ ಸ್ಮಾರ್ಟ್ ಸಿಟಿ ನಿಧಿ ಇದೆ. ಮಂಗಳೂರನ್ನು ಬುದ್ಧಿವಂತ ನಗರ ಮಾಡುವ ಆಡಳಿತಗಾರರು ಮಂಗಳೂರಿನಲ್ಲಿ ಇಲ್ಲ. ಆದರೆ ಕಾಂಕ್ರೀಟ್ ಕಾಡು ಮಾಡುವ ಆಡಳಿತಗಾರರು ಎಲ್ಲೆಡೆ ಇದ್ದಾರೆ. ಅದರಲ್ಲೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗಟ್ಟಿ ರಸ್ತೆ ಅಗೆದು ಮತ್ತೆ ಗಟ್ಟಿ ರಸ್ತೆ ಮಾಡಿದ ಕಾಮಗಾರಿಗಳೇ ಹೆಚ್ಚು. ಇದು ನಾಗರಿಕರು ಹುಬ್ಬಿನ ಮೇಲೆ ಬೆರಳೇರಿಸುವಂತೆ ಮಾಡಿರುವುದಂತೂ ಸುಳ್ಳಲ್ಲ. ಕಾರ್ನಾಡ್ ಸದಾಶಿವರಾವ್ ರಸ್ತೆ ಮೇಲಿನ ಸೇತುವೆ ಮತ್ತೆ ಮತ್ತೆ ಅಗೆಯಲು ದಾರಿ ಮಾಡಿಕೊಡದಂತೆ ಹೊಸದಾಗಿ ಮೂಡಿ ಬರಲಿ.

-By ಪೇಜಾ

« Previous articleThe top five overseas players in the IPL 2021- Article By Urban D'Souza

Leave Comments