ಮಾದಕವ್ಯಸನ ಪ್ರಪಂಚದ ಐದು ಮಾರಕ ರೋಗಗಳಲ್ಲಿ ಒಂದಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯು 1956 ರಲ್ಲಿ ಘೋಷಿಸಿದೆ. ಅಮಲು ರೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಬೀರುವುದಲ್ಲದೆ, ವ್ಯಕ್ತಿಯು ಘನತೆ ಗೌರವಗಳನ್ನು ಕಳೆದುಕೊಂಡು ಅವನ ಜೀವನವೇ ಬೀದಿಪಾಲಾಗುವಂತೆ ಮಾಡುತ್ತದೆ. ಮಾದಕ ಅಮಲಿನ ಅಭ್ಯಾಸದಲ್ಲಿ ನಿರತರಾದವರು ಎಂದಿಗೂ ಈ ನಶೆಯಿಂದ ಹೊರಗೆ ಬರಲಾರರು. ಅಂತಹ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದು ಅತ್ಯವಶ್ಯವಾಗಿದೆ.
ಮಾದಕ ವಸ್ತುಗಳ ಚಟ ಇಂದು ಹೆಚ್ಚಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಶಾಲಾ ಮಕ್ಕಳು, ಯುವಕರು, ವಿದ್ಯಾವಂತರು, ಬುದ್ದಿವಂತರು, ಸಾಧಕರು, ಮಹಿಳೆಯರು ಸಹಿತ ಇದರ ಕಪಿ ಮುಷ್ಠಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಭಾರತ ದೇಶವು ಇಂದು ಮಾದಕ ವಸ್ತುಗಳ ಮತ್ತು ಕಳ್ಳ ಸಾಗಾಣಿಕೆಯ ವ್ಯಾಪಾರದ ಕೇಂದ್ರವಾಗಿ ಬದಲಾಗುತ್ತಿದೆ. ‘ಪ್ರಪಂಚದ ಅದೃಶ್ಯ ಕೊಲೆಗಾರ’ನಾಗಿ ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಮಾದಕ ವಸ್ತುಗಳಿಗೆ ಜನರು ಆಕರ್ಷಿತರಾಗುವುದು ಈ ಶತಮಾನದ ದುರಂತವೇ ಸರಿ. ಅಂಗಡಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಹೊಗೆಸೊಪ್ಪಿನ ವಿವಿಧ ಉತ್ಪನ್ನಗಳನ್ನು ಯಾವುದೇ ಶರ್ತವಿಲ್ಲದೆ ಅಪ್ರಾಪ್ತ ವಯಸ್ಸಿನ ಮಕ್ಕಳೂ ಖರೀದಿಸಬಹುದಾಗಿದೆ.! ಅಣಬೆಗಳಂತೆ ಹೆಜ್ಜೆ ಹೆಜ್ಜೆಗೂ ಲಭ್ಯವಿರುವ ಬಾರ್, ವೈನ್ಶಾಪ್, ಪಬ್ಗಳು ಮದ್ಯಪಾನ ಸೇವಿಸಲು ಪ್ರೇರೇಪಿಸಿದಂತಿದೆ. ಎಲ್ಲೆಲ್ಲೂ ಗುಟ್ಟಿನಲ್ಲಿ ಸಿಗುವ ಮಾರಕ ಮಾದಕ ವಸ್ತುಗಳಿಂದಾಗಿ ಯುವಜನಾಂಗ ಅನಾಹುತ ಸೃಷ್ಠಿಮಾಡಿಕೊಳ್ಳುತ್ತಿದೆ. ಮಾದಕ ವಸ್ತುಗಳ ಚಟ ಒಂದು ರೋಗ ಎಂಬ ಸತ್ಯಾಂಶ ಸೇವನೆ ಬಯಸುವ ಜನರಿಗೆ ಆರಂಭದಲ್ಲಿ ಗೊತ್ತಾಗುವುದೇ ಇಲ್ಲ. ಇದಕ್ಕಾಗಿ ಮಾದಕ ವಸ್ತುಗಳು ‘ಕಪಟಿ, ಶಕ್ತಿಶಾಲಿ, ಮನಸ್ಸಿಗೆ ಗೊಂದಲ ತರುವ ಪದಾರ್ಥ’ಗಳೆಂದು ಕರೆಯುತ್ತಾರೆ. ‘ಮಾದಕ ದ್ರವ್ಯಗಳಿಂದಾಗುವ ಮತ್ತು.... ಅದೊಂದು ಆಪತ್ತು’ ಎನ್ನುವ ಗ್ರಹಿಕೆಯಿಲ್ಲದೆ ಮರಣಪಾಲಾಗುವವರೇ ಜಾಸ್ತಿ. ಸಮೀಕ್ಷೆಗಳ ಪ್ರಕಾರ 14 ರಿಂದ 22ರ ವಯೋಮಿತಿಯಲ್ಲಿ ಇದರ ರುಚಿ ನೋಡುವವರು ಜಾಸ್ತಿ ಎನ್ನುವ ಆಘಾತಕಾರಿ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಪ್ರಸ್ತುತ 10 ಜನರ ಸಾವಿನಲ್ಲಿ 3 ಮಂದಿ ಮದ್ಯ ಸೇವನೆ ಮಾಡುವ, 3 ಮಂದಿ ಧೂಮಪಾನ ಮತ್ತಿತರ ಚಟಗಳುಳ್ಳ ವ್ಯಕ್ತಿಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 10 ಮಂದಿ ವ್ಯಸನಿಗಳಾಗಿದ್ದರೆ, ಪ್ರಸ್ತುತ 100ರಲ್ಲಿ 30 ಮಂದಿ ದುಶ್ಚಟಗಳಲ್ಲಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ದುಶ್ಚಟಗಳಿಗೆ ಪ್ರಮುಖ ಕಾರಣಗಳು:
ಮಾದಕ ವಸ್ತುಗಳ ಬಳಕೆಗೆ ನಿರ್ಧಿಷ್ಟವಾದ ಕಾರಣಗಳಿಲ್ಲ. ಕ್ಷುಲ್ಲಕ ಕಾರಣ, ಕ್ಷಣಿಕ ತೀರ್ಮಾನಗಳೇ ಈ ಸಮಸ್ಯೆಯ ಮೂಲವಾಗಿದೆ. ಕೆಲವರು ದೇಹವನ್ನು ತಣ್ಣಗಿರಿಸಲು, ಮತ್ತೆ ಕೆಲವರು ಬೆಚ್ಚಗಿರಿಸಲು, ಕೆಲವು ಮಂದಿ ಉಲ್ಲಾಸಕ್ಕಾಗಿ, ಮತ್ತು ಕೆಲವರು ಸಮಸ್ಯೆಗಾಗಿ., ಹೀಗೆ ನಾನಾ ಕಾರಣ ನೀಡಿ ಇದರ ಬಳಕೆ ಮಾಡುತ್ತಾರೆ. ಊಟವಿಲ್ಲದೆ ಸಾಯುವ ಸಂಖ್ಯೆಗಿಂತಲೂ ಚಟವನ್ನು ಬೆಳೆಸಿ ಸಾಯುವವರೇ ಹೆಚ್ಚು. ‘ದುರ್ಬಲ ಮನಸ್ಸು ಮತ್ತು ಅಶಕ್ತ ವ್ಯಕ್ತಿತ್ವವೇ’ ವ್ಯಸನಕ್ಕೆ ಮೂಲ ಕಾರಣ. ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಅಭ್ಯಾಸ ನಂತರ ಚಟವಾಗಿ ಮಾನಸಿಕ, ದೈಹಿಕ ಅವಲಂಬನೆಯಾಗಿ ಕೊನೆಗೆ ಗುಲಾಮನಾಗಿರಿಸುವ ಭೀಕರ ಸಮಸ್ಯೆ ಇದಾಗಿದೆ. ಚಟಗಳನ್ನು ರೂಡಿಸಿಕೊಳ್ಳಲು ಪ್ರೇರಣೆಯಾಗುವ ಅಂಶಗಳು ಈ ಕೆಳಗಿನಂತಿವೆ.
• ವೈದ್ಯರ ಮೂಲಕ ಹಲವಾರು ಕಾಯಿಲೆಗಳಿಗೆ ನೀಡಲ್ಪಡುವ ಮಾತ್ರೆಗಳಲ್ಲಿ ರೋಗಿಯ ದುರುಪಯೋಗದಿಂದ ಕೆಲವು ಗುಳಿಗೆಗಳು ದೈಹಿಕ, ಮಾನಸಿಕ ಅವಲಂಬನೆಯಾಗಿ ಔಷಧಿಯ ನೆಪದಲ್ಲಿ ಮಾದಕ ವಸ್ತುಗಳ ಬಳಕೆಯಾಗುತ್ತಿದೆ.
• ವರ್ಷಕ್ಕೊಮ್ಮೆ ಅಮಲು(ಬಂಗಿ) ಪಾನಕ ಸೇವನೆ ಕರ್ನಾಟಕದ ಕೆಲವು ಸ್ಥಳಗಳಲ್ಲಿ ರೂಡಿಯಲ್ಲಿತ್ತು. ಇದು ಆರೋಗ್ಯಕ್ಕೆ ಒಳ್ಳೆಯದೆನ್ನುವ ನಂಬಿಕೆಯೂ ಇತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನ, ಮಾದಕ ವಸ್ತುಗಳ ಬಗ್ಗೆ ಜನರಲ್ಲಿರುವ ತಪ್ಪು ನಂಬಿಕೆಗಳಿವೆ. ಕಿಡ್ನಿ ಸಮಸ್ಯೆಗೆ ಬಿಯರ್ ಉತ್ತಮ ಎನ್ನುವ ಭಾವನೆ. ಬಾಣಂತಿಗೆ ಬ್ರಾಂದಿ ನೀಡಿದರೆ ಸನ್ನಿಯಾಗುವುದಿಲ್ಲ ಎನ್ನುವ ನಂಬಿಕೆ, ಪಾರ್ಶ್ವವಾಯುವಿಗೆ, ಲಕ್ವ ಹೊಡೆದು ನಿಷ್ಕ್ರೀಯವಾಗಿರುವ ಕೈಕಾಲುಗಳಿಗೆ ಬ್ರಾಂದಿ/ಸರಾಯಿ ಹಚ್ಚುವುದು, ಅಸ್ತಮ, ಬಾಲಗ್ರಹಕ್ಕೆ ಮಕ್ಕಳಿಗೆ ಭಟ್ಟಿ ಸರಾಯಿ ನೀಡುವುದು, ಹಲ್ಲು ನೋವಿಗೆ ನಶ್ಯ ತಿಕ್ಕುವುದು, ಗಾಯಗಳಿಗೆ ಹೊಗೆಸೊಪ್ಪು ನೀರು ಬಿಡುವುದು, ಬಿದ್ದು ಪೆಟ್ಟಾದ ಭಾಗಗಳಿಗೆ ಶರಾಬು ಸುರಿಯುವುದು, ದೇವರಿಗೆ, ಸತ್ತ ಆತ್ಮಗಳಿಗೆ, ದೈವಗಳಿಗೆ ಸರಾಯಿ ಅರ್ಪಿಸಿ ಪ್ರಸಾದದ ರೂಪದಲ್ಲಿ ಸೇವಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಸಿಗುವ ಕಳ್ಳು(ಶೇಂದಿ)ಯಿಂದ ಮದ್ಯಪಾನದ ಚಟ ರೂಡಿಸಿಕೊಂಡವರೇ ಜಾಸ್ತಿ. ಶೇಂದಿ ಹೊಟ್ಟೆಯೊಳಗಿನ ಹುಳುಗಳಿಗೆ ಉತ್ತಮ ಎನ್ನುವ ಅಭಿಪ್ರಾಯ, ಅಕ್ಕಿತಿಂಡಿಯಲ್ಲಿ ಮದ್ಯಪಾನದ ಬಳಕೆ ಇವೆಲ್ಲವೂ ಮದ್ಯಪಾನ ಸೇವಿಸಲು ಪ್ರೇರಣೆಯಾಗುತ್ತಿದೆ.
ಲಭ್ಯತೆ, ಪ್ಯಾಶನ್, ವಂಶ ಪಾರಂಪರ್ಯತೆ, ಜಿಗುಪ್ಸೆ, ಕೀಳು ಮನೋಭಾವನೆ, ನಿರಾಶೆ, ಬಡತನ, ನಿರುದ್ಯೋಗ, ಧೈರ್ಯ ತರಲು, ನಿದ್ರೆ, ಹಸಿವು, ಮೈಕೈ ನೋವು ಮತ್ತು ಶಾರೀರಿಕ ಆರಾಮಕ್ಕಾಗಿ ಮಾದಕ ವಸ್ತುಗಳ ಬಳಕೆ ಮಾಡುವವರೇ ಜಾಸ್ತಿ. ಮೋಜು ಮರ್ಜಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯಂತೆ ಶೋಕಿಗಾಗಿ, ಸಂಪ್ರದಾಯ, ವಿವಿಧ ಮೂಲಗಳ ಪ್ರೇರಣೆ, ಕಾಮೋತ್ತೇಜಕ, ಹಣಕಾಸು ಸಮಸ್ಯೆ, ಕಾಡುವ ಖಿನ್ನತೆ, ಪ್ರಚೋದನೆಗಾಗಿ, ನೋವು ನಿವಾರಕವಾಗಿ, ಸೃಜನಶೀಲತೆ ಹೆಚ್ಚಿಸಲು, ಮಾನಸಿಕ ಸಂತೋಷಕ್ಕಾಗಿ, ಹವಾಮಾನದ ವೈಪರೀತ್ಯ, ನಿರಾಶೆ, ದುಃಖ. ನೋವು, ಅವಾಮಾನಗಳಿಂದ ದೂರವಿರಲು, ಪ್ರತಿಭಟನೆ ಮತ್ತು ಅಕ್ರಮಣಶೀಲತೆಯನ್ನು ತೋರಿಸಲು, ಪ್ರತಿಭೆ ಪ್ರದರ್ಶನಕ್ಕಾಗಿ, ಪ್ರತಿಷ್ಠೆಗಾಗಿ, ಸಹವಾಸ ದೋಷ, ಕುತೂಹಲ, ಒತ್ತಡ ನಿವಾರಣೆ, ಏಕಾಗ್ರತೆ, ಜಾಹೀರಾತು, ಒಂಟಿತನ, ಸಮಸ್ಯೆ, ಸಂತೋಷ, ಸೋಲು ಎದುರಿಸಲು, ಪಾರ್ಟಿ ಸಮಾರಂಭಗಳ ಮೂಲಕ ಮದ್ಯಪಾನವನ್ನು ಮಾಡುತ್ತಾರೆ. ಮಾದಕ ವಸ್ತುಗಳನ್ನು ಸೇವಿಸುತ್ತಾರೆ.
ಆದುದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ಉತ್ತಮ ಭವಿಷ್ಯವನ್ನು ರೂಪಿಸುವುದು ಪ್ರತಿಯೊಬ್ಬರ ಉದ್ದೇಶವಾಗಿರಬೇಕು. ಒಂದೊಮ್ಮೆ ಈ ವಸ್ತುಗಳ ಸೇವನೆಯಿಂದ ಸಮಸ್ಯೆಗೊಳಗಾದವರಿದ್ದಲ್ಲಿ, ಶೀಘ್ರವೇ ಚಿಕಿತ್ಸೆ ಮತ್ತು ಸಲಹೆಯನ್ನು ಪಡೆಯಬೇಕು. ಮಾದಕ ವ್ಯಸನ ಚಿಕಿತ್ಸೆ ಅಗತ್ಯವಿರುವ ಖಾಯಿಲೆಯಾಗಿದೆ.
ಜನಜಾಗೃತಿ ಕಾರ್ಯಕ್ರಮ:
ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮದ್ಯಪಾನಾದಿ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ದುಶ್ಚಟಗಳಿಂದ ದೂರ ಸೆಳೆಯುವ, ಸನ್ಮಾರ್ಗಕ್ಕೆ ಪ್ರೇರೇಪಿಸುವ, ಸಚ್ಚಾರಿತ್ರ್ಯಕ್ಕೆ ಪ್ರಾಶಸ್ತ್ಯ ನೀಡುವ ಕಾರ್ಯಕ್ರಮವೇ ಜನಜಾಗೃತಿ. ನಡೆಯುವವರು ಜಾರದಂತೆ, ಜಾರುವವರು ಬೀಳದಂತೆ, ಬಿದ್ದವರನ್ನೆತ್ತುವ ಕಾಯಕವೇ ವೇದಿಕೆಯ ಪ್ರಮುಖ ಕೆಲಸ. ಅಮಲಿನ ಪಿಡುಗಿನಿಂದ ನಾಶವಾಗುತ್ತಿರುವ ಗ್ರಾಮಗಳ ಆರ್ಥಿಕತೆಯ ಮಟ್ಟವನ್ನು ಸಮಸ್ಥಿತಿಗೆ ತರುವ, ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ‘ಜನಜಾಗೃತಿ’. ಅಮಲುರೋಗದ ಬಗ್ಗೆ ಮಾಹಿತಿ ಶಿಬಿರಗಳು, ಗ್ರಾಮ ಸುಭಿಕ್ಷಾ ಕಾರ್ಯಕ್ರಮಗಳು, ಜಾಥಾಗಳು, ಅನಧಿಕೃತ ಶರಾಬು ಅಂಗಡಿಗಳ ವಿರುದ್ಧ ಜನಾಂದೋಲನ, ಮದ್ಯವರ್ಜನ ಶಿಬಿರಗಳೇ ಮುಂತಾದ ಕಾರ್ಯಕ್ರಮಗಳ ಮುಖೇನ ಜನಜಾಗೃತಿ ಮೂಡಿಸಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಸಂಘಟನೆಯನ್ನು ‘ಜನಜಾಗೃತಿ ವೇದಿಕೆ’ ಎಂಬ ಹೆಸರಿನಲ್ಲಿ 1991ರಿಂದ ರೂಪಿಸಲಾಗಿದೆ.
ಈ ವೇದಿಕೆಯು ಹಳ್ಳಿ ಪೇಟೆಗಳಲ್ಲಿ ದುಶ್ಚಟ, ದುರಾಭ್ಯಾಸಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ವೈಜ್ಞಾನಿಕವಾಗಿ ಆಯೋಜಿಸಲ್ಪಟ್ಟ ‘ಸಮುದಾಯ ಮತ್ತು ವ್ಯಸನಮುಕ್ತಿ ಕೇಂದ್ರದ ಮೂಲಕ ಮದ್ಯವರ್ಜನ ಶಿಬಿರ’ಗಳನ್ನು ನಡೆಸುತ್ತದೆ. ರಾಜ್ಯಾದ್ಯಂತ ವಾರ್ಷಿಕವಾಗಿ 150 ಶಿಬಿರಗಳನ್ನು ಸಂಘಟಿಸಿ 10,000ಕ್ಕೂ ಅಧಿಕ ಮಂದಿಗೆ ಪಾನಮುಕ್ತರಾಗಲು ಅವಕಾಶ ನೀಡಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ವ್ಯಸನಿಗಳಿಗೆ 8 ದಿನದ ವಿಶೇಷ ತಜ್ಞರುಗಳಿಂದ, ಸಲಹೆಗಾರರಿಂದ ಮನೋದೈಹಿಕ ಚಿಕಿತ್ಸೆ ನೀಡಲಾಗುತ್ತಿದೆ. ಗುಪ್ತವಾಗಿ ಕುಡಿತ ಬಿಡಲು ಇಚ್ಚಿಸುವವರಿಗೆ ‘ವಿಶೇಷ ಶಿಬಿರ’ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಲಾೈಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರತೀ ತಿಂಗಳಲ್ಲಿ 2ರಂತೆ ಆಯೋಜಿಸಲಾಗುತ್ತಿದೆ. ಮದ್ಯಮುಕ್ತರನ್ನು ‘ನವಜೀವನ ಸಮಿತಿ’ಗಳಲ್ಲಿ ಸಂಘಟಿಸಿ ಅವರ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಪ್ರಕ್ರಿಯೆಯನ್ನು ನವಜೀವನ ಸಮಿತಿ ಮೂಲಕ ಜನಜಾಗೃತಿ ವೇದಿಕೆ ಮಾಡುತ್ತಿದೆ. ದುಶ್ಚಟಮುಕ್ತ ಸಮಾಜದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಗೆ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಮೂಲಕ ವಾರ್ಷಿಕವಾಗಿ ಒಂದು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಈ ಸಂದೇಶವನ್ನು ಪಡೆದು ಸಾತ್ವಿಕ ಜೀವನವನ್ನು ನಡೆಸಲು ಪ್ರೇರಣೆ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಮೌಲ್ಯಾಧಾರಿತ ರಾಜಕೀಯ ಸುಧಾರಣೆಗಳನ್ನು, ನಿರ್ಣಯಗಳನ್ನು ಕೈಗೊಳ್ಳುವಂತಾಗಲು ‘ಗ್ರಾಮ ಸ್ವಾಸ್ಥ್ಯ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿಶೇಷ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ದುಶ್ಚಟಮುಕ್ತರಾಗಲು ಬಯಸುವವರು ದೂರವಾಣಿ : 08256-232133, 9448468332, 9611581332ನ್ನು ಸಂಪರ್ಕಿಸಬಹುದು.
Article by - VIVEK V PAIS