ಮೊದಲ ಕೊರೋನಾ ಅಲೆಗೆ ಬೆದರಿ ಮುದುರಿದ್ದ ಸರಕಾರಿ ಮತ್ತಿತರ ಲೈಬ್ರೆರಿಗಳು ತೆರೆದುಕೊಂಡು ಅರೆವರುಷ ಆದರೂ ಮಂಗಳೂರಿನ ತುಳು ಅಕಾಡೆಮಿಯ ಲೈಬ್ರೆರಿ ಮಾತ್ರ ಅಡ್ಡ ಹಾದಿಯಲ್ಲೇ ಉಳಿದಿದೆ.
ಲೈಬೆರ್ ಎಂಬ ಇಟಾಲಿಯನ್, ಲ್ಯಾಟಿನ್ ಶಬ್ದ ಪುಸ್ತಕವನ್ನು ಸೂಚಿಸುತ್ತದೆ. ಅದು ಲೈಬ್ರೆರಿಗೆ ಮೂಲ. ಜ್ಞಾನ ಸಂಪಾದನೆ, ಸಾಮಾನ್ಯ ಓದು, ಅಧ್ಯಯನ, ಸಂಶೋಧನಾ ಮಾಹಿತಿ ಇವುಗಳಿಗೆಲ್ಲ ನೆಲೆಯಾಗಿರುವುದೇ ಲೈಬ್ರೆರಿ. ಜನ ಇನ್ನೂ ಮುದ್ರಿತ ಓದು ಬಿಟ್ಟಿಲ್ಲವಾದರೂ ಇಂದು ಜಾಲ ತಾಣವೇ ದೊಡ್ಡ ಲೈಬ್ರೆರಿಗಳ ವಿಶ್ವವಾಗಿದೆ.
ಅಂತರಜಾಲ ತಾಣಗಳು ಸಾಮಾನ್ಯ ಓದಿನಿಂದ ಹಿಡಿದು ಗಹನ ಅಧ್ಯಯನಕ್ಕೆಲ್ಲ ತೆರೆದುಕೊಂಡಿವೆ, ಕೆಲವು ಲೈಬ್ರೆರಿ ಎಂದು ಕರೆದುಕೊಂಡಿವೆ. ಬೇಕಾದ್ದು ಬೇಡವಾದದ್ದು ಜಾಲತಾಣಗಳಲ್ಲಿ ಮಾತ್ರ ಇದೆ ಎಂದುಕೊಳ್ಳಬೇಡಿ. ಸಾಮಾನ್ಯ ಲೈಬ್ರೆರಿಗಳಲ್ಲೂ ಲೈಬ್ರೆರಿ ನಿಧಿ ಕರಗಿಸಲೆಂದೇ ಬಂದ ಬೂಸಾ ಸಾಹಿತ್ಯಗಳಿಗೇನೂ ಕೊರತೆಯಿಲ್ಲ. ವಾಚನಾಲಯಗಳ ಹೊಸ ವಿಭಾಗ ಡಿಜಿಟಲ್ ಗ್ರಂಥಾಲಯ. ಇದು ಕೂಡ ಜಾಲತಾಣಗಳ ಪುಟ ಒದಗಿಸುವ ನೆಲೆಗಳೇ ಆಗಿವೆ.
ಕ್ರಿ. ಪೂ. 2,600ರ ಮಣ್ಣಿನ ಫಲಕದ ಬರಹ ಸುಮೇರ್ನಲ್ಲಿ ಲಭ್ಯವಾಗಿದ್ದು ಹಳೆಯ ದಾಖಲೆ. ಆದರೆ ಕ್ರಿ. ಪೂ. 5ನೇ ಶತಮಾನದಿಂದ ಗ್ರೀಸ್ನಲ್ಲಿ ಅಧಿಕೃತ ಗ್ರಂಥಾಲಯಗಳು ಆರಂಭವಾದವು. ಗ್ರಂಥಾಲಯ, ವಾಚನಾಲಯಗಳಲ್ಲಿ ವೈಯಕ್ತಿಕ, ಸಾರ್ವಜನಿಕ ಎಂದು ಎರಡು ಬಗೆ ಇವೆ. ಮುದ್ರಣ ಯಂತ್ರಗಳು ಬರುವುದಕ್ಕೆ ಮೊದಲು ಕೃತಿಗಳನ್ನು ಮರು ಬರೆದು ಪ್ರತಿ ಮಾಡಬೇಕಿತ್ತು. ಹಾಗಾಗಿ ವೈಯಕ್ತಿಕ, ಖಾಸಗಿ ಲೈಬ್ರೆರಿಗಳು ಹೆಚ್ಚು ಇದ್ದವು. ಭಾರತದಲ್ಲಿ ತಕ್ಷಶಿಲೆ, ನಳಂದಾ ಮೊದಲಾದ ಕಡೆಯ ಗ್ರಂಥಾಲಯಗಳು ಪ್ರಸಿದ್ಧವಿದ್ದವು. ಮಧ್ಯ ಯುಗದಲ್ಲಿ ಅರಬ್ ಪರ್ಯಾಯ ದ್ವೀಪದ ಲೈಬ್ರೆರಿಗಳು ಖ್ಯಾತವಿದ್ದವು.
ಈಜಿಪ್ತ್, ಚೀನಾಗಳು ಕೂಡ ಪುರಾತನ ಲೈಬ್ರೆರಿ ಹೊಂದಿದ ದೇಶಗಳೆನಿಸಿವೆ. ಲೈಬ್ರೆರಿಗಳು ಮಾಹಿತಿ ಕೇಂದ್ರಗಳಾದುದರಿಂದ ಪತ್ರಿಕಾಲಯಗಳು ತಮ್ಮದೇ ಲೈಬ್ರೆರಿ ಹೊಂದಿರುತ್ತವೆ. ಮಂಗಳೂರಿನಲ್ಲಿ ಯಥಾಪ್ರಕಾರ ಬಾಸೆಲ್ ಮಿಶನ್ನ ಹಳೆಯ ಲೈಬ್ರೆರಿ ಮರೆಯುವಂತಿಲ್ಲ. ಎಲ್ಲ ಧರ್ಮಗಳ ಮಠಗಳೂ ತಮ್ಮದೇ ಆದ ಒಂದು ಬಹುತೇಕ ಧಾರ್ಮಿಕ ಯಂತ್ರಗಳ ಲೈಬ್ರೆರಿ ಹೊಂದಿರುತ್ತವೆ.
ತುಳು ಅಕಾಡೆಮಿಯ ಇತಿಹಾಸ ಕಾಲು ಶತಮಾನದ್ದು. ಅಲ್ಲಿನ ಲೈಬ್ರೆರಿ ಚರಿತ್ರೆ ಒಂದು ದಶಕದ್ದು. ಐದು ವರುಷಗಳ ಹಿಂದೆ ಬಾಸೆಲ್ ಮಿಶನ್ನ ಬೆನೆಟ್ ಅಮ್ಮಣ್ಣರನ್ನು ಹಿಡಿದುಕೊಳ್ಳುವ ತುಳು ಅಕಾಡೆಮಿಯು ಸಂಶೋಧನೆಗೂ ಒದಗುವ ಗ್ರಂಥಾಲಯ ತೆರೆಯಿತು. ಕೊರೋನಾ ಬಂದ ಕಾರಣ ಅದನ್ನು ಮುಚ್ಚಲಾಯಿತು. ಅನಂತರ ಅದು ತೆರೆಯಲೆ ಇಲ್ಲ ಎಂದು ಲೆಕ್ಕ.
ಕೊರೋನಾ ಸ್ವಲ್ಪ ಕಡಿಮೆಯಾದ ಮೇಲೂ ತುಳು ಅಕಾಡೆಮಿಯ ಗ್ರಂಥಾಲಯ ಮತ್ತು ಆರ್ಕೈವ್ನ ಬಾಗಿಲು ತೆರೆಯಲಿಲ್ಲ. ಜನ ಬಾಗಿಲು ನೋಡಿ ವಾಪಸು ಹೋಗುತ್ತಾರೆ. ಆದರೆ ತುಳು ಅಕಾಡೆಮಿಯ ಕಚೇರಿಯ ಕಡೆಯಿಂದ ಗ್ರಂಥಾಲಯಕ್ಕೆ ಹೋಗಲು ಒಂದು ಅಡ್ಡ ಹಾದಿ ಇಟ್ಟಿದ್ದಾರೆ. ಅಲ್ಲಿ ವಿಚಾರಿಸಿ ಹೋಗುವವರೇ ಇಲ್ಲ. ಯಾಕೆಂದರೆ ಒಳ ಹೋಗುವಾಗ ಮೊದಲು ಕಾಣುವುದು ಮುಚ್ಚಿದ ಮುಂಬಾಗಿಲು. ಸಂಧಿ ಬಾಗಿಲು ಬಲ್ಲವರಿಲ್ಲ, ಗೊಂದಲದಿಂದ ಒಳ ಹೋಗುವರಿಲ್ಲ. ಹಾಗಾಗಿ ಈ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ. ಸಂಬಂಧಿಸಿದವರು ಇದನ್ನು ಸರಿಪಡಿಸಬೇಕು.
ಈ ಬಗೆಗೆ ಒಬ್ಬಿಬ್ಬರಲ್ಲಿ ವಿಚಾರಿಸಿದಾಗ ಲೈಬ್ರೆರಿ ಸಿಬ್ಬಂದಿಯೇ ಇಲ್ಲ ಎಂದು ಹೇಳುತ್ತಾರೆ. ಬಿಜೆಪಿ ಸರಕಾರ ಬಂದ ಮೇಲೆ ಅನುದಾನ ಅರೆಬರೆ ಕೊಡುತ್ತಿರುವುದೂ ಸಿಬ್ಬಂದಿ ನೇಮಕಾತಿಗೆ ತಡೆಯಾಗಿದೆ ಎಂದು ಹೇಳುತ್ತಾರೆ. ಒಟ್ಟಾರೆ ಅಕಾಡೆಮಿಗೆ ಗ್ರಂಥಾಲಯ ಭೂಷಣಂ, ಓದುಗರಿಗೆ ಬರೇ ಕೋಣ ಭಾಷಣಂ.
-By ಪೇಜಾ