ಉಜಿರೆ:  ಬೆಂಗಳೂರಿನ ವಕೀಲರಾದ ನಾರಾಯಣ ಸ್ವಾಮಿ ಮತ್ತು ರಮೇಶ್ ಗೌಡರು ಮತ್ತು ಹಾಸನದ ವಕೀಲರ ಸಂಘದ ಅಧ್ಯಕ್ಷ ಮೊಗಣ್ಣ ಗೌಡ ನೇತೃತ್ವದಲ್ಲಿ 450 ಮಂದಿ ವಕೀಲರ ನಿಯೋಗ 90 ಕಾರುಗಳ ಜಾಥಾದಲ್ಲಿ ಶನಿವಾರ ಸಂಜೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನ್ಯಾಯವೇ ದೇವರು. ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ ನ್ಯಾಯದಾನ ಪದ್ಧತಿ ಅಳವಡಿಸಲಾಗಿದೆ. ನ್ಯಾಯ ನಮ್ಮ ಅಸ್ಮಿತೆಯಾಗಿದೆ. ಧರ್ಮಸ್ಥಳದ ಬಗ್ಯೆ ಅಪಪ್ರಚಾರದಿಂದ ತಮಗೆಲ್ಲರಿಗೂ ತೀವ್ರ ಖೇದವಾಗಿದೆ. ಆಧಾರರಹಿತ ಅಪಪ್ರಚಾರ ತಡೆಯಲು ತಾವು ಕೂಡಾ ಪ್ರಯತ್ನಿಸುವುದಾಗಿ ತಿಳಿಸಿದ ಅವರು ಸತ್ಯ, ಧರ್ಮ, ನ್ಯಾಯದ ಪರಿಪಾಲನೆಗೆ ತಾವೆಲ್ಲರೂ ಪೂಜ್ಯ ಹೆಗ್ಗಡೆಯವರ ಜೊತೆ ಬದ್ಧರಾಗಿದ್ದೇವೆ ಎಂದು ವಕೀಲರುಗಳ ನಿಯೋಗದವರು ಭರವಸೆ ನೀಡಿದರು.

ಧರ್ಮಸ್ಥಳದಲ್ಲಿ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತವೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರು.

ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಧರ್ಮಸ್ಥಳದಲ್ಲಿ ಕಳೆದ ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನಗಳು ಜಾತಿ-ಮತ ಬೇಧವಿಲ್ಲದೆ ನಿತ್ಯವೂ ನಡೆಯುತ್ತಿದೆ. ಇವುಗಳಲ್ಲಿ ನೊಂದವರಿಗೆ, ಸೋತವರಿಗೆ “ಭಯ” ಪಡಬೇಡಿ ಎಂದು ನೀಡುವ “ಅಭಯದಾನ” ಅತ್ಯಂತ ಶ್ರೇಷ್ಠವಾಗಿದ್ದು, ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು, ಸೇವಾಕಾರ್ಯಗಳು, ದಾನ, ಧರ್ಮಾದಿ ಸತ್ಕಾರ್ಯಗಳು ಟ್ರಸ್ಟ್ಗಳ ಮೂಲಕ ಪಾರದರ್ಶಕವಾಗಿ ನಡೆಯುತ್ತವೆ ಎಂದು ಹೆಗ್ಗಡೆಯವರು ವಕೀಲರುಗಳಿಗೆ ಮಾಹಿತಿ ನೀಡಿದರು.

ಬೆಂಗಳೂರು, ಮೈಸೂರು ಮತ್ತು ಹಾಸನದಿಂದ ಬಂದ ವಕೀಲರುಗಳು ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸಿ ಊರಿಗೆ ಮರಳಿದರು.


ದಶಲಕ್ಷಣ ಪರ್ವ ಆಚರಣೆ

ಉಜಿರೆ: ಜೈನಧರ್ಮದ ಸಂಪ್ರದಾಯದಂತೆ ಆಧ್ಯಾತ್ಮಿಕ ಮತ್ತು ಸಂಸ್ಕಾರದ ಉನ್ನತಿಗಾಗಿ ಪ್ರತಿವರ್ಷ ಭಾದ್ರಪದ ಮಾಸದ ಪಂಚಮಿಯಿಂದ  ಹುಣ್ಣಿಮೆ ವರೆಗೆ “ದಶಲಕ್ಷಣ” ಪರ್ವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.

ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ. ಎಲ್ಲವೂ ನಿತ್ಯವೂ ಪಾಲಿಸಬೇಕಾದ ತತ್ವಗಳಾಗಿದ್ದು, ಇವು ಶ್ರೇಷ್ಠವಾದುದರಿಂದ ಪ್ರತಿಯೊಂದು ತತ್ವದ ಹಿಂದೆ “ಉತ್ತಮ” ಎಂಬ ವಿಶೇಷಣ ಬಳಸುತ್ತಾರೆ.

ಈ ಬಾರಿ ಆ. 28 ರಿಂದ ಸೆ. 6ರ ವರೆಗೆ ದಶಲಕ್ಷಣ ಪರ್ವವನ್ನು ಆಚರಿಸಲಾಗುತ್ತದೆ.

ಆ. 28: ಗುರುವಾರ: ಉತ್ತಮ ಕ್ಷಮಾಧರ್ಮ

ಆ. 2: ಶುಕ್ರವಾರ: ಉತ್ತಮ ಮಾರ್ದವ ಧರ್ಮ

ಆ. 30: ಶನಿವಾರ : ಉತ್ತಮ ಆರ್ಜವ ಧರ್ಮ

ಆ. 31: ಭಾನುವಾರ: ಉತ್ತಮ ಶೌಚ ಧರ್ಮ

ಸೆ. 1: ಸೋಮವಾರ : ಉತ್ತಮ ಸತ್ಯಧರ್ಮ

ಸೆ. 2: ಮಂಗಳವಾರ : ಉತ್ತಮ ಸಂಯಮ ಧರ್ಮ

ಸೆ. 3: ಬುಧವಾರ : ಉತ್ತಮತಪ ಧರ್ಮ

ಸೆ. 4: ಗುರುವಾರ : ಉತ್ತಮ ತ್ಯಾಗ ಧರ್ಮ

ಸೆ. 5: ಶುಕ್ರವಾರ: ಉತ್ತಮ ಆಕಿಂಚನ್ಯ ಧರ್ಮ

ಸೆ. 6: ಶನಿವಾರ: ಉತ್ತಮ ಬ್ರಹ್ಮಚರ್ಯ


ದಶಲಕ್ಷಣ ಪರ್ವ ಆಚರಣೆ ಬಳಿಕ “ಕ್ಷಮಾವಳಿ” ನಡೆಯುತ್ತದೆ. ಅಂದರೆ, ಬಂಧುಗಳಲ್ಲಿ ಆಪ್ತಮಿತ್ರರಲ್ಲಿ ವ್ಯವಹಾರದಲ್ಲಿ ಮನ, ವಚನ, ಕಾಯದಿಂದ ಯಾವುದೇ ತಪ್ಪು ಆದಲ್ಲಿ ಅದಕ್ಕೆ  ಪಶ್ಚಾತ್ತಾಪಪಟ್ಟು ಕ್ಷಮೆ ಯಾಚಿಸುವುದೇ “ಕ್ಷಮಾವಳಿ” ಆಗಿದೆ. ಸದ್ಯ, ಕಾಲಕ್ಕೆ ತಕ್ಕಂತೆ ಸಂವಹನ, ದೂರವಾಣಿ, ಪತ್ರ ಮೂಲಕ “ಕ್ಷಮಾವಳಿ” ಆಚರಿಸುವ ಪದ್ಧತಿ ಇದೆ.

ದಶಲಕ್ಷಣ ಪರ್ವದ ಸಂದರ್ಭದಲ್ಲಿ ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ, ಆರಾಧನೆ, ನಡೆಯುತ್ತದೆ. ಎಲ್ಲಾ ಶ್ರಾವಕರು ಬಸದಿಗೆ ಹೋಗಿ ದೇವರ ದರ್ಶನ ಮಾಡಿ, ಜಪ, ತಪ, ಧ್ಯಾನ, ಸ್ವಾಧ್ಯಾಯದಲ್ಲಿ ನಿರತರಾಗುತ್ತಾರೆ. ಉಪವಾಸ ಮೊದಲಾದ ವೃತ-ನಿಯಮಗಳನ್ನೂ ಪಾಲಿಸಿ ಧಾರ್ಮಿಕ ಹಾಗೂ ಆಧ್ಯಾತ್ಮ ಚಿಂತನೆಯಲ್ಲಿ ನಿರತರಾಗುತ್ತಾರೆ.