ಉಡುಪಿ, ಆಗಸ್ಟ್ 07: ಸಾರ್ವಜನಿಕರಿಗೆ ಜನನ, ಮರಣ ದಾಖಲೆಗಳು ತಮ್ಮ ಶೈಕ್ಷಣಿಕ ಹಾಗೂ ಆರ್ಥಿಕ ವ್ಯವಹಾರಗಳು ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕ. ಇವುಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಅವರು ಬುಧವಾರ ನಗರದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರ ನಾಗರಿಕ ನೋಂದಣಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಕಾನೂನು ಜಾರಿಗೆ ತಂದಿದ್ದು, ಅದರನ್ವಯ ಪ್ರತಿಶತಃ ನೂರರಷ್ಟು ನೋಂದಣಿ ಕಾರ್ಯಗಳು ಆಗುವಂತೆ ಜನನ, ಮರಣ ನೋಂದಣಿ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದರು.
ಜನನ, ಮರಣ ಹಾಗೂ ನಿರ್ಜೀವ ಜನನಗಳ ಘಟನೆ ಸಂಭವಿಸಿದ 21 ದಿವಸಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ 21 ರಿಂದ ನಂತರ 30 ದಿನಗಳೊಳಗಾಗಿ ಶುಲ್ಕ 20 ರೂ. ಗಳನ್ನು ನೀಡಿ, ನಂತರ ಒಂದು ವರ್ಷದ ಅವಧಿಯೊಳಗೆ 50 ರೂ. ಶುಲ್ಕ ಭರಿಸಿ ಪ್ರಾಧಿಕಾರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವರ್ಷದ ನಂತರದ ವಿಳಂಬ ನೋಂದಣಿಗೆ ನ್ಯಾಯಾಲಯದ ಆದೇಶ ಪಡೆದು ಮಾಡಬಹುದಾಗಿದೆ ಎಂದರು.
ಒಂದೊಮ್ಮೆ ಜನನ, ಮರಣ ದಾಖಲಾತಿಗಳನ್ನು ತಪ್ಪು ಮಾಹಿತಿ ನೀಡಿ, ಘಟನೆಗಳನ್ನು ದಾಖಲಿಸುವ ಮಾಹಿತಿದಾರರಿಗೆ ದಂಡ ವಿಧಿಸಲಾಗುವುದು ಎಂದ ಅವರು, ವಿದೇಶದಲ್ಲಿ ಭಾರತೀಯ ಪೌರರು ಜನಿಸಿದ ಮಗುವಿನ ಮಾತಾ-ಪಿತರರು ಭಾರತದಲ್ಲಿ ನೆಲೆಸುವ ಉದ್ದೇಶದಿಂದ ಭಾರತಕ್ಕೆ ಹಿಂದಿರುಗಿದ ಪಕ್ಷದಲ್ಲಿ ಶಿಶುವು ಭಾರತಕ್ಕೆ ಆಗಮಿಸಿದ 60 ದಿನದ ಒಳಗಾಗಿ ಶಿಶುವಿನ ಜನನವನ್ನು ನೋಂದಣಿ ಮಾಡಿಸಲು ಅವಕಾಶವಿದೆ ಎಂದರು.
ಜನನ ಮರಣ ನೋಂದಣಿ ದಾಖಲಾತಿಗಳಲ್ಲಿ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶಗಳು ಇರುವುದಿಲ್ಲ. ಲಿಪಿಕ ಅಥವಾ ಔಪಚಾರಿಕ ತಪ್ಪುಗಳು ಅಂದರೆ ಅಜಾಗರೂಕತೆ, ಮುದ್ರಣ ದೋಷ, ವಾಸ್ತವಿಕ ತಪ್ಪು, ಯಾವುದೇ ದುರುದ್ದೇಶವಿಲ್ಲದೆ ಅನುಚಿತ ನಮೂದುಗಳನ್ನು ಮಾತ್ರ ತಿದ್ದುಪಡಿಗೆ ಅವಕಾಶವಿದೆ ಎಂದರು.
ಜನನ ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು 2015 ರಿಂದಲೇ ಜಾರಿಗೆ ತರಲಾಗಿದ್ದು, ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಇ-ಜನ್ಮ ತಂತ್ರಾಶದಲ್ಲಿ ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು ಎಂದರು.
ಜನನ, ಮರಣ ಘಟನೆಗಳ ನೋಂದಣಿ ಹಾಗೂ ಪ್ರಮಾಣಪತ್ರಗಳ ವಿತರಣೆಯನ್ನು ಸಕಾಲ ವ್ಯಾಪ್ತಿಯಲ್ಲಿ ಒಳಪಡಿಸಲಾಗಿದ್ದು, ಸಾರ್ವಜನಿಕರಿಗೆ ನಿಗಧಿತ ಕಾಲಾವಧಿಯ ಒಳಗೆ ವಿತರಣೆಗೆ ಕ್ರಮವಹಿಸಬೇಕು ಎಂದರು.
ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 763, ನಗರ ವ್ಯಾಪ್ತಿಯಲ್ಲಿ 5436 ಒಟ್ಟು 6,199 ಜನನ ಘಟನೆಗಳು ನೋಂದಾವಣೆಯಾದರೆ, ಗ್ರಾಮೀಣ ಪ್ರದೇಶದಲ್ಲಿ 4242, ನಗರ ಪ್ರದೇಶದಲ್ಲಿ 2789 ಒಟ್ಟು 7031 ಮರಣ ಘಟನೆಗಳು ನೋಂದಾವಣೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 22 ನಿರ್ಜೀವ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಲಿಂಗಾನುಪಾತವು 1000 ಗಂಡುಗಳಿಗೆ, 1004 ಹೆಣ್ಣು ಮಕ್ಕಳಿದ್ದಾರೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್ಪಿ ಸುಧಾಕರ್ ನಾಯಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್.ವಿ ದೊಡಮನಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.