ಉಜಿರೆ: ಶ್ರುತ (ಶಾಸ್ತ್ರ) ಅಂದರೆ ತೀರ್ಥಂಕರರು ನೀಡಿದ ವಚನಗಳ ಅನುಸಾರ ರಚನೆಗೊಂಡ ಗ್ರಂಥಗಳು. ಇವುಗಳು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ. ಇದನ್ನು ಜೈನರು ಪ್ರತಿವರ್ಷ “ಶ್ರುತ ಪಂಚಮಿ” ಎಂದು ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡುತ್ತಾರೆ.
ಇದೇ 15 ರಂದು ನಾಳೆ ಮಂಗಳವಾರ ಎಲ್ಲಾ ಬಸದಿಗಳಲ್ಲಿ ಶ್ರುತ ಪಂಚಮಿ ಆಚರಣೆ ನಡೆಯುತ್ತದೆ.
ಆತ್ಮಕಲ್ಯಾಣಕ್ಕಾಗಿ ಏನು ಮಾಡಬೇಕೆಂದು ನೆನಪಿಸುವ ಪಾವನ ಪರ್ವವೇ ಶ್ರುತ ಪಂಚಮಿ. ಜೈನಾಗಮಗಳ ಅಧ್ಯಯನ, ಚಿಂತನ-ಮಂಥನ ಹಾಗೂ ಸ್ವಾಧ್ಯಾಯದಿಂದ ಆತ್ಮಕಲ್ಯಾಣಗುತ್ತದೆ. ಜ್ಞಾನವು ಲಿಪಿ ಬದ್ಧವಾದ ದಿನವನ್ನು ಸ್ಮರಿಸಿ ಜ್ಞಾನ ಸಂಪಾದನೆಗಾಗಿ ಜೈನರು ಬಸದಿಗಳಲ್ಲಿ ಹಾಗೂ ತಮ್ಮ ಮನೆಗಳಲ್ಲಿ ಶ್ರುತ ಪಂಚಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.
ಹಿಂದೆ ಗುರುಪರಂಪರೆಯಿಂದ ಜ್ಞಾನವು ಮೌಖಿಕವಾಗಿ ಶಿಷ್ಯರಿಗೆ ದೊರಕುತ್ತಿತ್ತು. ಮಹಾವೀರ ತೀರ್ಥಂಕರರು ಮೋಕ್ಷ ಪಡೆದ ನಂತರ ಶ್ರುತಕೇವಲಿಗಳ ವರೆಗೆ ದ್ವಾದಶಾಂಗ ಜಿನವಾಣಿಯು ಮೌಲಿಕವಾಗಿ ಅಖಂಡ ಪ್ರವಾಹವಾಗಿ ಬಂತು. 683 ವರ್ಷಗಳ ಬಳಿಕ ಪುಷ್ಪದಂತ, ಭೂತಬಲಿ ಆಚಾರ್ಯರುಗಳು ಗ್ರಂಥಗಳನ್ನು ಲಿಪಿಬದ್ಧವಾಗಿ ಬರೆದು ಜ್ಯೇಷ್ಠ ಶುದ್ಧ ಪಂಚಮಿಯ ದಿನ ಮುಗಿಸಿ ಶಾಸ್ತ್ರಗ್ರಂಥಗಳನ್ನೆಲ್ಲ ಅಲಂಕರಿಸಿ ಭಕ್ತಿಯಿಂದ ಪೂಜಿಸಿದರು. ಅಂದಿನಿಂದ ಪ್ರತಿವರ್ಷ ಜೈನರು ಶ್ರುತ ಪಂಚಮಿಯನ್ನು ಶ್ರದ್ಧಾ-ಭಕ್ತಿಯಿಂದ ಆತ್ಮಕಲ್ಯಾಣದ ಪಾವನ ಪರ್ವವನ್ನಾಗಿ ಆಚರಿಸುತ್ತಾರೆ.