ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಾಲೆ ಸ್ಫೂರ್ತಿ ಜೂನ್ 21 ರಂದು ಬೆಳುವಾಯಿಯ ನೂತನ ವಿಶಾಲ ಪ್ರದೇಶದಲ್ಲಿ ಪ್ರಾರಂಭಗೊಂಡಿದೆ. ಪ್ರಾರಂಭೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿ ಬೆಳುವಾಯಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಮಾತನಾಡಿ ವಿಶೇಷ ಚೇತನರ ಸೇವೆಗೈಯುತ್ತಿರುವ ಶ್ರಮ ಪ್ರಶಂಸನೀಯ ಎಂದರು.
ಮಂಗಳೂರು ಸೇವ್ ಲೈಫ್ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಶಾಲೆಯ 80 ಮಕ್ಕಳಿಗೂ ಪುಸ್ತಕ, ಲೇಖನ ಸಾಮಗ್ರಿ, ಯುನಿಫಾರ್ಮ್ ನೀಡಿ ಶುಭ ಹಾರೈಸಿದರು. ಮೇಕ್ ಸಂವನ್ ಸ್ಮೈಲ್ ಗುಂಪು ಶಾಲಾ ಕಟ್ಟಡ ಅಭಿವೃದ್ಧಿಗೆ ಅಹರ್ನಿಶಿ ದುಡಿದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಂದ ಸುಮಾರು 20ಕ್ಕೂ ಹೆಚ್ಚು ಶಾಲೆಗಳು ಪುನರುಜ್ಜೀವನಗೊಂಡಿರುತ್ತದೆ.
ಸಂಚಾಲಕ ನ್ಯಾಯವಾದಿ ರಾಜೇಶ್ ಸುವರ್ಣ, ಖಜಾಂಚಿ ಹಾಗೂ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ ಮಾತನಾಡಿ ಕೇವಲ 8 ವರ್ಷದ ಹಿಂದೆ ಪ್ರಾರಂಭವಾದ ಸಂಸ್ಥೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ವಿಶೇಷ ಚೇತನರು ಮಿಂಚುವಂತೆ ಮಾಡುತ್ತಿರುವ ಕಾರ್ಯ ಅತ್ಯಂತ ಪ್ರಶಂಸನೀಯ ಎಂದರು.
ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಅಧ್ಯಕ್ಷ ಸುನಿಲ್ ಮೆಂಡೋನ್ಸಾ ತನಗಾದ ಅನುಭವವ ಬೇರೆಯಾರಿಗೂ ಆಗದಂತೆ ಕನಸು ಕಂಡು ನನಸು ಮಾಡಲು ಪ್ರಯತ್ನಿಸಿ ದುಡಿಯುವ ಪ್ರಕಾಶ್ ಶೆಟ್ಟಿಗಾರ್ ರ ಅಭೂತಪೂರ್ವ ಕಾರ್ಯ ಪ್ರಶಂಸಿಸಿದರು. ಸಮಾಜ ಹಾಗೂ ಮಕ್ಕಳ ಸೇವೆ ನಿರಂತರ ನಡೆಸುತ್ತಿರುವ ಎಲ್ಲರನ್ನೂ ಅಬು ಲಾಲ್ ಪುತ್ತಿಗೆ ಅಭಿನಂದಿಸಿದರು.
ವೇದಿಕೆಯಲ್ಲಿ ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಹಾಜರಿದ್ದರು. ಸ್ಫೂರ್ತಿ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಶರ್ಮಿಳಾ ವಂದಿಸಿದರು.