ಮಂಗಳೂರು: ವಿಶ್ವಕೊಂಕಣಿ ಕೇಂದ್ರ ಶಕ್ತಿನಗರ, ಮಂಗಳೂರು ಸಹಯೋಗದಲ್ಲಿ ದ.ಕ. ಜಿಲ್ಲಾ .ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ) ಮಂಗಳೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪೂರ್ವಭಾವಿ ಕೌಶಲ್ಯ ತರಬೇತಿ “ವಿಕಾಸ-2025” ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸುಮಾರು ಐವತ್ತು ವಿದ್ಯಾರ್ಥಿಗಳಿಗೆ ರೂ. ಐದು ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ‘ವಿದ್ಯಾಕಲ್ಪಕ’ ವಿದ್ಯಾರ್ಥಿ ವೇತನ ನಿಧಿಯಿಂದ ವಿತರಿಸಲಾಯಿತು.
ಚಪ್ಟೇಗಾರ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರವೀಂದ್ರ ನಾಯಕ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ, ಪಿ ಎ ಕಾಲೇಜ್ ಆಫ್ ಫಾರ್ಮಸಿ ಮಂಗಳೂರು ಇಲ್ಲಿಯ ಡಾ ಮನೋಹರ ನಾಯಕ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ನಡೆಸಿದರು. ಅನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಔಷಧ ವಿಜ್ಞಾನದ ಕ್ಷೇತ್ರದ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ "ಇಂದಿನ ಯುಗದಲ್ಲಿ ಶಿಕ್ಷಣದ ಮೂಲಕ ಕೌಶಲ್ಯ ತರಬೇತಿ ನೀಡುವುದು ಅಗತ್ಯವಾಗಿದ್ದು ಇಂತಹ ತರಬೇತಿ ಶಿಬಿರವನ್ನು ಚಪ್ಟೇಗಾರ ಸಂಘದ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಪಡೆಯಬೇಕು. ಮನೋಸಾಮರ್ಥ್ಯವನ್ನು ಗಟ್ಟಿಗೊಳಿಸಿ, ಆಲದ ಮರದಂತೆ ವಿಶಾಲವಾಗಿ ಬೆಳೆದು ಎಲ್ಲರೊಂದಿಗೆ ಸೇರಿ ಆತ್ಮವಿಶ್ವಾಸದಿಂದ ಸಮಾಜದಲ್ಲಿ ಕಾರ್ಯಪ್ರವ್ರತ್ತರಾಗಬೇಕು” ಎಂದು ಸ್ಫೂರ್ತಿದಾಯಕ ಸಂದೇಶ ನೀಡಿದರು.
ಪ್ರೇರಣಾ ಕೌಶಲ್ಯ ಸಂಭಂಧಿತ ತರಬೇತು ಕಾರ್ಯಾಗಾರವನ್ನು ಕುಡ್ಪಿ ವಿದ್ಯಾ ಶೆಣೈ ನಡೆಸಿಕೊಟ್ಟರು. ಹಾಗೂ ತ್ರಿಶಾ ಕ್ಲಾಸಸ್ ಸ್ಥಾಪಕರಾದ ಸಿ ಎ ಗೋಪಾಲಕೃಷ್ಣ ಭಟ್ ಇವರು ಕಾಮರ್ಸ್ ಕ್ಷೇತ್ರದ ಶಿಕ್ಷಣ- ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಗೋಪಾಲಕೃಷ್ಣ ನಾಯಕ್ ಇವರು ಯಕ್ಷಗಾನ, ಕಲೆ, ಹವ್ಯಾಸಗಳ ಬಗ್ಗೆ ಮಾಹಿತಿ ಚರ್ಚಿಸಿದರು. ಯೋಗಗುರು ಕುಂಬಳೆಕಾರ ಮೋಹನ ಕುಮಾರ ರವರು ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಬಗ್ಗೆ ತಿಳುವಳಿಕೆ ನೀಡಿದರು. ಪ್ರಕಾಶ ಶೆಣೈ ಯು ಅವರ ಸಾಧನಾ ಬಳಗ ತಂಡದವರಿಂದ ಕೊಂಕಣಿ ವಿವಿಧ ಸಾಂಸ್ಕೃತಿಕ ಆಟಗಳು, ನೃತ್ಯ, ಕಲೆ ಅಭ್ಯಾಸ ನೀಡಿದರು. ವಿಶ್ವಕೊಂಕಣಿ ಕೇಂದ್ರದ ಸಿ ಎ ಒ ಬಿ ದೇವದಾಸ ಪೈ, ದ.ಕ ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲಕ್ಷ್ಮೀ ಕಿಣಿ ಪ್ರಾರ್ಥಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ದ.ಕ ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘದ ಚಿದಾನಂದ ಎಮ್ ವಂದಿಸಿದರು.