ಮುಂಬಯಿ: ಸಾಯನ್ ಪೂರ್ವದ ಗೋಕುಲದಲ್ಲಿನ ಸರಸ್ವತಿ ಸಭಾಗೃಹದಲ್ಲಿ ಜಿಪಿಕೆ ಟ್ರಸ್ಟ್ ಮತ್ತು  ಬಿಎಸ್‍ಕೆಬಿ ಅಸೋಸಿಯೇಶನ್‍ನ ಸಂಯುಕ್ತ ಆಶ್ರಯದಲ್ಲಿ ಸಂಭ್ರಮಿಸಿದ ರಾಷ್ಟ್ರದ 75ನೇ  ಗಣರಾಜ್ಯೋತ್ಸವವನ್ನು ಕಳೆದ ಶುಕ್ರವಾರ (ಜ.26)ರಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಅತ್ಯಂತ ಸಂಭ್ರಮದಿಂದ ಆಚರಿಸಿತು.  

ಮುಂಜಾನೆ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಶ್ರೀದೇವರಿಗೆ ಪೂಜೆ ನೆರವೇರಿಸಿದ ಬಳಿಕ ಗೋಕುಲದ ತೆರೆದ ಮೇಲ್ಮಾಳಿಗೆಯಲ್ಲಿ ಉಭಯ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡು ಆಶ್ರಯದ ಕಾರ್ಯಾಧ್ಯಕ್ಷ ರಾಜಾರಾಮ ಆಚಾರ್ಯ, ಗೌ| ಕಾರ್ಯದರ್ಶಿ ಎ.ಪಿ.ಕೆ.ಪೋತಿ ರಾಷ್ಟ್ರ ಧ್ವಜಾರೋಹಣಗೈದು ರಾಷ್ಟ್ರವಂದನೆ ನಡೆಸಿದರು.

ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಅವಿನಾಶ್ ಶಾಸ್ತ್ರಿ, ಗೌ| ಕಾರ್ಯದರ್ಶಿ ಎ.ಪಿ.ಕೆ. ಪೋತಿ  ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕಾರ್ಯದರ್ಶಿ ವೈ. ಮೋಹನರಾಜ್ ಮತ್ತು ಚಿತ್ರಾ ಮೇಲ್ಮನೆ, ಗೋಕುಲ ಕಲಾವೃಂದದ ಕಾರ್ಯಾಧ್ಯಕ್ಷೆ ಪಿ.ವಿನೋದಿನಿ ಆರ್.ರಾವ್ ಉಪಸ್ಥಿತರಿದ್ದು, ಬಿಎಸ್‍ಕೆಬಿಎ ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಅವರಿಗೆ "ಗೋಕುಲ ರತ್ನ" ಪ್ರಶಸ್ತಿ ಪ್ರದಾನಿಸಿ, ಶಾಲು, ಪುಷ್ಪಗುಚ್ಛ, ಸ್ಮರಣಿಕೆ, ಗೋಕುಲ ರತ್ನ ಪ್ರಶಸ್ತಿಯನ್ನೊಳಗೊಂಡ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಿದರು.  

ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಸಿ, ಎಚ್. ಎಸ್ ಸಿ ಮತ್ತು ವಿವಿಧ  ಪದವಿ ಹಾಗೂ ಉನ್ನತ ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿದರು.  ವಿವಿಧ ಕ್ಷೇತ್ರಗಳಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಡಾ| ವೈ. ವಿ ಮಧುಸೂದನ್ ರಾವ್, ಡಾ| ಪ್ರಗತಿ ಹೆಬ್ಬಾರ್ ಮತ್ತು ಡಾ| ಅರ್ಚನಾ ಪ್ರವೀಣ್ ಕುಮಾರ್ ಅವರನ್ನು ಸ್ಮರಣಿಕೆಗಳನ್ನಿತ್ತು ಗೌರವಿಸಿದರು. 

ಡಾ| ಸುರೇಶ್ ಅವರು ಪ್ರಶಸ್ತಿ ವಿಜೇತ ಸುಬ್ಬಣ್ಣರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ನೂತನ ಗೋಕುಲ ಕಟ್ಟಡದ ಉದ್ಘಾಟನೆಯಾದ ನಂತರದ ಪ್ರಗತಿಯನ್ನು ಸದಸ್ಯರಿಗೆ ತಿಳಿಸುತ್ತಾ ಗೋಕುಲದ ಮುಂದಿನ ಯೋಜನೆಗಳಿಗಾಗಿ  ಫೆಬ್ರವರಿ 4 ರಂದು ಷಣ್ಮುಖಾನಂದ ಸಭಾಗೃಹದಲ್ಲಿ ಆಯೋಜಿಸಿದ "ಮಹೇಶ್ ಕಾಲೆ ಅಭಂಗ್" ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ  ಸದಸ್ಯರ  ಸಹಕಾರ ಕೋರಿದರು.  

ಸುಬ್ಬಣ್ಣ ರಾವ್ ಅವರು ತನ್ನ ಹಾಗೂ ಗೋಕುಲದ ಸುಮಾರು ಆರು ದಶಕಗಳ ಬಾಂಧವ್ಯ, ಡಾ| ಸುರೇಶ್ ರಾವ್ ರಾವ್ ಅವರ ನೇತೃತ್ವದಲ್ಲಿ ಆಶ್ರಯ ಮತ್ತು ಗೋಕುಲ ಪುನರ್ನಿರ್ಮಾಣ, ಸುಂದರ ದೇವಾಲಯ ನಿರ್ಮಾಣ ಇತ್ಯಾದಿಗಳನ್ನು ಕೊಂಡಾಡಿ ತನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಹಾಗೂ ಗೋಕುಲದ ಪದಾಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು. 

ಬೆಳಿಗ್ಗೆಯಿಂದ ವಾಕರ್ಡ್ ಹಾಸ್ಪಿಟಲ್, ಮುಂಬಯಿ  ಸೆಂಟ್ರಲ್ ಅವರು ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಹಲವಾರು ಸದಸ್ಯರು ಪಡೆದುಕೊಂಡರು. 

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಗಳ ಸದಸ್ಯರು, ಮಹಿಳೆಯರು, ಮಕ್ಕಳು ಸಾಂಸ್ಕೃತಿಕ ವೈಭವ ಪ್ರಸ್ತುತ ಪಡಿಸಿದ್ದು ದೇಶಭಕ್ತಿ ಗೀತೆಗಳು ಮತ್ತು ದೇಶಭಕ್ತಿ ಗೀತೆಗಳ ಸಮೂಹ ನೃತ್ಯ, ಅಪರಾಹ್ನ ಯುವ ವಿಭಾಗವು "ಪಾಶ್ಚತ್ಯ ವರ್ಸಸ್ ಶಾಸ್ತ್ರೀಯ ನೃತ್ಯ, ಜುಗಲ್‍ಬಂದಿ, ಡ್ಯಾನ್ಸ್ ಫೇಸ್ ಆಫ್ ಕಾರ್ಯಕ್ರಮ, ಗೀತಾ ಹೆರಲಾ ಮತ್ತು ಶಾಂತಿಲಕ್ಷ್ಮಿ ಉಡುಪ ರವರ ನಿರ್ದೇಶನದಲ್ಲಿ ಬಾಲಕಲಾವೃಂದದ ಚಿಣ್ಣರಿಂದ "ರಾಣಿ ಅಬ್ಬಕ್ಕ"  ಕಿರು ಪ್ರಹಸನ ಹಾಗೂ ಶೈಲಿನಿ ರಾವ್ ನಿರ್ದೇಶನದ "ಅಜ್ಜಿ ಆಸ್ತಿ" ನಾಟಕವನ್ನು ಗೋಕುಲ ಸದಸ್ಯರು ಪ್ರದರ್ಶಿಸಿದರು. ಚಂದ್ರಾವತಿ ರಾವ್ ರವರ ನಿರೂಪಣೆಗೈದರು. 

ವಾಮನ್ ಹೊಳ್ಳ ಸ್ವಾಗತಿಸಿದರು. ಸಂಜೀವನಿ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಲಕ್ಷ್ಮೀಶ್ ಆಚಾರ್ಯ ರವರು ಟ್ರಸ್ಟ್ ನ ಬಗ್ಗೆ ಮಾಹಿತಿಯನ್ನು ನೀಡುತ್ತಾ,  ಟ್ರಸ್ಟ್ ನ ವತಿಯಿಂದ  ಗೋಕುಲಕ್ಕೆ ಅತ್ಯಂತ ಅತಿ  ಹೆಚ್ಚಿನ ಸೇವೆ ಸಲ್ಲಿಸಿದ ಸದಸ್ಯರಿಗೆ  ಕೊಡಮಾಡಲಾಗುವ "ಗೋಕುಲ ರತ್ನ" ಪ್ರಶಸ್ತಿಯ ಬಗ್ಗೆ ವಿವರಿಸಿದರು. ಚಿತ್ರಾ ಮೇಲ್ಮನೆ ಸನ್ಮಾನ ಪತ್ರ ವಾಚಿಸಿದರು. ವಿದ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಎ.ಪಿ,ಕೆ ಪೋತಿ  ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತ್ಯ ಕಂಡಿತು.