ಮುಂಬಯಿ:  ಮುಂಬಯಿ ಕಂಡ ಅಪರೂಪದ ರಂಗ ಪ್ರತಿಭೆ ಸದಾನಂದ ಸುವರ್ಣ ಅವರ ನೆನಪಿನಲ್ಲಿ 'ರಂಗ ಸಂವಾದ' ಕಾರ್ಯಕ್ರಮವು ಇತ್ತೀಚೆಗೆ ಕನ್ನಡ ಕಲಾ ಕೇಂದ್ರದ ಕಿರು  ಸಭಾಗೃಹದಲ್ಲಿ ಜರಗಿತು. ಕನ್ನಡ ಕಲಾ ಕೇಂದ್ರ, ರಂಗಮಿಲನ ಮುಂಬೈ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದರು.

ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ರಂಗಭೂಮಿ ಕುರಿತ ಮಾತುಕತೆಯಲ್ಲಿ, ನಾಟಕದಲ್ಲಿ ನಿರ್ದೇಶಕ ಕೇವಲ ನೆಪ ಮಾತ್ರ. ಆದರೆ ಆ ನಾಟಕವನ್ನು ಪ್ರೇಕ್ಷಕನಿಗೆ ದಾಟಿಸುವುದು ನಟ - ನಟಿಯರು. ಆದರೆ ಈಗ ನಟನ ಗಟ್ಟಿಯಾದ ಬೆಳವಣಿಗೆ ಆಗ್ತಾ ಇಲ್ಲ. ಈಗ ರಂಗಭೂಮಿಯನ್ನು ಆಯ್ಕೆ ಮಾಡುತ್ತೇವೆ ಅನ್ನುವಾಗ ಅಲ್ಲಿ ಬದ್ಧತೆ ಇರುವುದಿಲ್ಲ. ಯಾಕೆ ಹೀಗೆ ಆಗುತ್ತಿದೆ. ಎಂದು ಪ್ರಶ್ನಿಸಿದ ವಿದ್ದು ಮುಂಬೈಯಲ್ಲಿ ಭದ್ದತೆಯ ಒಂದಿಷ್ಟು ಕಲಾವಿದರನ್ನು ನಾವು ಕಾಣಬಹುದು ಎಂದರು. ಇಂದು ನಾಟಕದ ಪ್ರಾರಂಭದ ನಡೆ ರಿಯಾಲಿಟಿ ಶೋಗಳಿಗೆ ಮೆಟ್ಟಿಲಾಗುತ್ತಿರುವುದು ವಿಪರ್ಯಾಸ. ಕೇವಲ ಚಟಕ್ಕಾಗಿ ನಾಟಕಗಳಾಗಬಾರದು. ಆದ್ದರಿಂದ ರಂಗದ ಮೇಲೆ ಮೂಡಿಬರುವ ಮೊದಲು ಆಗುವ ನಾಟಕದ ಪ್ರೋಸೆಸ್ ಲೋಕ ಬಹಳ ಮುಖ್ಯ. ಇಂದು ನಾಟಕ ಎಂದರೆ ಧ್ವನಿ ಮತ್ತು ಬೆಳಕಿನ ಸಂಯೋಜನೆ ಎಂದು ವಿದ್ದು ವಿಷಾದ ವ್ಯಕ್ತಪಡಿಸಿದರು. ತುಳು ನಾಟಕಗಳು ಬಹಳಷ್ಟು ಜನರನ್ನು ತಲುಪುತ್ತದೆ. ಇವರು ಪತ್ರಿಕೆಗಳಿಗೆ ಕೋಟಿಗಟ್ಟಲೆ ಜಾಹೀರಾತು ನೀಡುತ್ತಾರೆ. ಆದರೆ ಅಂತಹ ಪತ್ರಿಕೆಗಳು ರಂಗಭೂಮಿಗೆ ಏನು ಕೊಡುಗೆ ನೀಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈಗ ರಂಗಕರ್ಮಿಗಳು ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ. ಆ ಮೂಲಕ ಗಟ್ಟಿಯಾದ ರಂಗಭೂಮಿಯನ್ನು ನಾವೆಲ್ಲರೂ ಕೂಡಿ ಕಟ್ಟಬೇಕು. ರಂಗಭೂಮಿಗೆ ಪೂರಕವಾಗಿ ಏನಾದರೂ ಮಾಡುವಾಗ ಅದರಲ್ಲಿ ಸ್ಪಷ್ಟ ಉದ್ದೇಶ ಇರಬೇಕು ಎಂದರು.

ರಂಗ ಸಂಗೀತ ನಿರ್ದೇಶಕರಾದ ದಿವಾಕರ್ ಕಟೀಲ್ ಅವರು ರಂಗ ಸಂಗೀತ ಪ್ರಾತ್ಯಕ್ಷಿಕೆಯಲ್ಲಿ ನಾಟಕದಲ್ಲಿ ಸಂಗೀತದ ಮಹತ್ವವನ್ನು ತಿಳಿಸುತ್ತಾ, ರಂಗ ಸಂಗೀತವು ಪ್ರೇಕ್ಷಕನಿಗೆ ನಾಟಕವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿವಿಧ ಭಾವನೆಗಳನ್ನು, ಸನ್ನಿವೇಶಗಳನ್ನು ಅಭಿವ್ಯಕ್ತಿಸಲು ರಂಗ ಸಂಗೀತ ಸಹಕಾರಿಯಾಗುತ್ತದೆ. ಮೌನವೂ ರಂಗದಲ್ಲಿ ಸಂಗೀತವಾಗಿ ಹೇಗೆ ಪಾತ್ರವಹಿಸಬಲ್ಲದು ಎಂದು ವಿವರಿಸಿದ ದಿವಾಕರ್ ಕಟೀಲ್ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ನಿನಗೆ ನೀನು ಗೆಳತಿ ನಾಟಕದ ನಾಂದಿ ಹಾಡಿನೊಂದಿಗೆ ಕಾರಂತರ ಗೋಕುಲ ನಿರ್ಗಮನ, ಕಂಬಾರರ ಸಾಂಬಶಿವ ಪ್ರಹಸನ,  ನಾರಾಯಣ ಶೆಟ್ಟಿ ನಂದಳಿಕೆ ಅನುವಾದಿಸಿದ ನಾಗಸಂಪಿಗೆ, ಬಿಸಿಲು ಬೆಳದಿಂಗಳು ಮೊದಲಾದ ನಾಟಕಗಳ ಹಾಡುಗಳನ್ನು ಪ್ರಸ್ತುತಪಡಿಸಿದರು.

ರಂಗ ಸಂವಾದದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ ಟಿ. ಆರ್. ಮಾತನಾಡುತ್ತಾ ಸದಾನಂದ ಸುವರ್ಣರು ರಂಗಭೂಮಿಯಲ್ಲಿ ಕೈಜೋಡಿಸುವ ಎಲ್ಲರಿಗೂ ಸ್ಪೂರ್ತಿಯ ಚೇತನ. ಅವರ ನೆನಪಿನಿಂದಲಾದರೂ ಇಲ್ಲಿನ ರಂಗಭೂಮಿಯ ಕಲಾವಿದರಿಗೆ ಒಂದಿಷ್ಟು ರಂಗದ ಮೇಲೆ ಪ್ರೀತಿ, ಬದ್ಧತೆಯ ಅರಿವು ಮೂಡಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಎಂದರು.

ಸಂವಾದದಲ್ಲಿ ಡಾಕ್ಟರ್ ಮಂಜುನಾಥ್, ಮಂಜುನಾಥಯ್ಯ, ರಂಗ ಪೂಜಾರಿ, ನವೀನ್ ಶೆಟ್ಟಿ ಇನ್ನ ಬಾಳಿಕೆ, ನಾರಾಯಣ ಶೆಟ್ಟಿ ನಂದಳಿಕೆ, ಗೋಪಾಲ್ ತ್ರಾಸಿ, ಜಗದೀಶ್ ಡಿ. ರೈ, ಎ. ಆರ್. ನಾರಾಯಣರಾವ್, ರಾಘವೇಂದ್ರ ಸಾಲ್ಯಾನ್ ಮೊದಲಾದವರು ಪಾಲ್ಗೊಂಡರು. ರಂಗಮಿಲನ ಮುಂಬಯಿ ಇದರ ಕಾರ್ಯದರ್ಶಿ ರಹಿಂ ಸಚ್ಚೆರಿಪೇಟೆ ಉಪಸ್ಥಿತರಿದ್ದರು. ರಂಗ ಮಿಲನದ ಅಧ್ಯಕ್ಷ ಮನೋಹರ್ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಕಾರ್ಯದರ್ಶಿ ರಮೇಶ್ ಬಿರ್ತಿ ವಂದನಾರ್ಪಣೆ ಮಾಡಿದರು.