ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಬಸದಿ, ದೇವಾಲಯದ ಅರ್ಚಕರು, ಸಹಾಯಕರು, ಆಡಳಿತ ಮಂದಿಗೆ ಇಂದು ಸರಕಾರ ಅರೆ ಕಾಲಿಕ ಸಂಬಳ ನೀಡಿ ದಿನವಿಡೀ ದುಡಿಯುವಂತೆ ಮಾಡಿದೆ. ಇದರಿಂದಾಗಿ ಅವುಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯ ಇಲ್ಲ. ಬಸದಿ, ದೇವಾಲಯಗಳು ಉಂಬಳಿಯ ಪ್ರದೇಶಗಳನ್ನು ಕಳೆದುಕೊಂಡು ಕಷ್ಟಕರ ಪರಿಸ್ಥಿತಿಯಲ್ಲಿವೆ. ಪೂಜಾ ಗೃಹಗಳು ಸದಾ ತೆರೆದಿದ್ದು ಭಕ್ತರಿಗೆ ಭಗವಂತನ ದರುಶನ ದೊರಕುವಂತೆ ಸರಕಾರ ತಸ್ತೀಕು ಹೆಚ್ಚಿಸಬೇಕೆಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೂಡುಬಿದಿರೆ ಧವಲತ್ರಯ ಟ್ರಸ್ಟ್ ಜೈನ ಮಠದ ಭಟ್ಟಾರಕ ಭವನದಲ್ಲಿ ನಡೆಸಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸೌಲಭ್ಯಗಳ ಮಾಹಿತಿ ಶಿಬಿರ ಉದ್ಘಾಟಿಸಿ ಜೂನ್ 20 ರಂದು ಮಾತನಾಡಿದರು.
ಶಿಗ್ಗಾಂವಿ ಇತ್ಯಾದಿ ಪ್ರದೇಶಗಳಲ್ಲಿ 1998 ರಿಂದ ಮಕ್ಕಳು, ಮಹಿಳೆಯರನ್ನು ಕುಟುಂಬಕ್ಕೆ ಸೇರಿಸಿದ ಕೆಲಸ ಮಾಡಿದ ಕಾರಣ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆಯಾಗಿ ಮಾಡಲಾಗಿದೆ ಎಂದು ಬೆಳುವಾಯಿ ನಡ್ಯೋಡಿ ಗುತ್ತು ಮೂಲದ ಪರಿಮಳ ಜೈನ್ ನುಡಿದರು.
ಬಸದಿ, ದೇವಾಲಯದ, ಅರ್ಚಕರ, ಸಹಾಯಕ ದಾಖಲೆಗಳು ಸಮರ್ಪಕವಾಗಿ ಇದ್ದರೆ ಸರಕಾರ ಅನುದಾನ ಸಿಗುತ್ತದೆ. ಪ್ರತಿ ಹೋಬಳಿ, ತಾಲೂಕು ಮಟ್ಟಕ್ಕೆ ಒಂದು ಸಮುದಾಯ ಭವನ, ಬಸದಿ ಪುನರ್ ನವೀಕರಣ, ಕಾಂಪೌಂಡ್ ನಿರ್ಮಾಣ, ಅಲ್ಪಸಂಖ್ಯಾತರ ಮಕ್ಕಳ ವಿದ್ಯಾಭ್ಯಾಸ, ಅನಾಥಾಶ್ರಮ, ವೃದ್ಧಾಶ್ರಮ, ಅಂಗವಿಕಲರ ಕಲ್ಯಾಣ, ತರಬೇತಿ ಇತ್ಯಾದಿ ಹಲವಾರು ಯೋಜನೆಗಳ ಸಮಗ್ರ ಮಾಹಿತಿಯನ್ನು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕುಮಾರ್ ಕೋಟ್ಯಾನ್ ತಿಳಿಸಿದರು.
ಕಲ್ಯಾಣ ಅಭಿವೃದ್ಧಿ ಇಲಾಖೆಯ ರವೂಫ್ ರವರು ವಿದ್ಯಾಭ್ಯಾಸ, ಶ್ರಮ ಶಕ್ತಿ, ಗಂಗಾ ಕಲ್ಯಾಣ ಇತ್ಯಾದಿ ಯೋಜನೆಗಳ ಮಾಹಿತಿ ಹಂಚಿಕೊಂಡರು.
ಧರ್ಮಸ್ಥಳದ ಜಯ ಕೀರ್ತಿ ಜೈನ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ಜೈನ ಮಠದ ಸಲಹಾ ಸಮಿತಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ವಂದಿಸಿದರು.