ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಗೌರವ್ ಹೆಗ್ಡೆ ನಿರ್ದೇಶನದ ಕಿರುಚಿತ್ರ ‘ಮಾಯಾಚಕ್ರ’ದ ಪ್ರೀಮಿಯರ್ ಷೋ ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕಾಲೇಜಿನ ಆಡಿಯೋ ವೀಡಿಯೋ ಥಿಯೇಟರ್‍ನಲ್ಲಿ ನಡೆಯಿತು. 

ಕಿರುಚಿತ್ರ ವೀಕ್ಷಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಗೌರವ್ ಹೆಗ್ಡೆ ಮತ್ತು ಅವರ ತಂಡದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿದರು.  ಎಳವೆಯಲ್ಲಿಯೇ ಇಂತಹ ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಸಮಾಜಕ್ಕೆ ಪ್ರೇರಣಾದಾಯಕ.  ತನಿಖಾ ಪತ್ರಿಕೋದ್ಯಮದ ಕಥಾಹಂದರ ಹೊಂದಿರುವ ಈ ಕಿರುಚಿತ್ರವು, ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸಬೇಕಾಗುವ ತೊಂದರೆಗಳು, ಸವಾಲುಗಳು ಮತ್ತು ಸಮಾಜದ ಒತ್ತಡಗಳ ನೈಜ ಚಿತ್ರಣವನ್ನು ನೀಡುತ್ತದೆ. ‘ಮಾಯಾಚಕ್ರ’ದ  ಇನ್ನೊಂದು ವಿಶೇಷತೆ, ಚಿತ್ರದಲ್ಲಿ ಸ್ಥಳೀಯ ಸ್ಥಳಗಳು ಮತ್ತು ಪ್ರತಿಭೆಗಳನ್ನು ಬಳಸಿರುವುದು. ಈ ಮೂಲಕ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪ್ರತಿಭಾವಂತರಿಗೆ ತಮ್ಮ  ನಟನಾಕೌಶಲ್ಯವನ್ನು ತೋರಿಸಲು ವೇದಿಕೆ ಒದಗಿಸಲಾಗಿದೆ ಎಂದರು. 

ಸಿನಿಮಾದ ನಿರ್ದೇಶಕ ಗೌರವ್ ಹೆಗ್ಡೆ ಮಾತನಾಡಿ, “ಈಗಿನ ರೀಲ್ಸ್ ಜಮಾನದಲ್ಲಿ ದೀರ್ಘ ಅವಧಿಯ ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಒಂದು ಸವಾಲಿನ ಕೆಲಸ. ಆ ಅಂಶವನ್ನು ಮನದಲ್ಲಿ ಇಟ್ಟುಕೊಂಡು, ನಾವು ಸುಮಾರು ಅರ್ಧ ಗಂಟೆಯ ಅವಧಿಯ ಸಿನಿಮಾವನ್ನು ತಯಾರಿಸಿದ್ದೇವೆ. ಈ  ಕಿರುಚಿತ್ರದ ಮೂಲಕ ಸಾಮಾನ್ಯ ಜನರ ಹಕ್ಕನ್ನು  ಪ್ರಶ್ನಿಸಲು ಮುಂದಾದ ಒಬ್ಬ ಪತ್ರಕರ್ತೆಯ ಧೈರ್ಯ, ಸತ್ಯಕ್ಕಾಗಿ ಹೋರಾಟ ಮತ್ತು ಆ ಹೋರಾಟದ ವಿರುದ್ಧ ಬಲಿಷ್ಠ ಲಾಬಿ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ತಿಳಿಸಲಾಗಿದೆ. ಮಾಧ್ಯಮದ ಜವಾಬ್ದಾರಿ, ಸಮಾಜದಲ್ಲಿ ಬೇರೂರಿರುವ ಅಸಮರ್ಪಕ ಪದ್ಧತಿಗಳ ವಿರುದ್ಧ ಧೈರ್ಯದಿಂದ ನಿಲ್ಲುವ ಅಗತ್ಯ, ಮತ್ತು ಸತ್ಯಕ್ಕಾಗಿ ಹೋರಾಡುವವರ ಎದುರಿಸುವ ಸಂಕಷ್ಟಗಳನ್ನು ಚಿತ್ರಿಸಲಾಗಿದೆ ಎಂದರು.  

ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ,ಆಸಕ್ತಿಯ ಹಾದಿಯಲ್ಲಿ ನಿರಂತರ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ಯಶಸ್ಸು ನಮ್ಮದಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಆಸಕ್ತಿಯನ್ನು ಗುರುತಿಸಿ, ಅದನ್ನು  ಪೋಷಿಸುತ್ತಾ ಸಾಗಬೇಕು ಎಂದರು.

ಸಂಗೀತ ನಿರ್ದೇಶಕ ಹಾಗೂ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಗೌತಮ್ ಮಾತನಾಡಿ, ಸಾಧಾರಣ ಕಥಾಹಂದರದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶವನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಸುದೀಪ್ ಇದ್ದರು. ಕಿರಣ್ ಕಾರ್ಯಕ್ರಮ ನಿರೂಪಿಸಿ, ಶಶಾಂಕ್ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು.