ಬೆಳ್ತಂಗಡಿಯ ಜನತೆ ಮತ್ತು ನ್ಯಾಯವಾದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಹೊಸ ನ್ಯಾಯಾಲಯ ಸಂಕೀರ್ಣದ ಮೊದಲ ಹಂತದ ಕಾಮಗಾರಿಗೆ ಸರಕಾರ ರೂ 9 ಕೋಟಿ ಮಂಜೂರುಗೊಳಿಸಿರುವುದಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾರವರು ತಿಳಿಸಿದ್ದಾರೆ.
ಅನುದಾನ ಮಂಜೂರುಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಅಧ್ಯಕ್ಷರಾದ ಯು. ಟಿ ಖಾದರ್, ಲೊಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ, ಕಾನೂನು ಸಚಿವರಾದ ಎಚ್. ಕೆ ಪಾಟೀಲ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಬೆಳ್ತಂಗಡಿ ವಕೀಲರ ಸಂಘದ ಮನವಿಯ ಮೇರೆಗೆ ನಾನು ಇತ್ತೀಚೆಗೆ ನ್ಯಾಯಾಲಯಕ್ಕೆ ಭೇಟಿ ನೀಡಿ ಸುಮಾರು 60 ವರ್ಷ ಹಳೆಯದಾದ ಕಟ್ಟಡವನ್ನು ಪರಿಶೀಲಿಸಿ ಹೊಸ ನ್ಯಾಯಾಲಯದ ಸಂಕೀರ್ಣಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ, ವಿಧಾನ ಸಭಾ ಅಧ್ಯಕ್ಷರಿಗೆ ಕಾನೂನು ಸಚಿವರಿಗೆ, ಲೋಕೋಪಯೋಗಿ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿರುತ್ತೇನೆ.
ಬೆಳ್ತಂಗಡಿಯಲ್ಲಿ ನ್ಯಾಯಾಲಯದ ಸಂಕೀರ್ಣ ಮಂಜೂರು ಮಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು, ಕೆ ಪೀ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಂತಾದವರು ಈ ವಿಚಾರದಲ್ಲಿ ಮನವಿ ಸಲ್ಲಿಸಿರುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು ಈ ದಿನ ಬೆಂಗಳೂರಿನಲ್ಲಿ ಕಾನೂನು ಸಚಿವರಾದ ಎಚ್ ಕೆ ಪಾಟೀಲ್ ಮತ್ತು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಐವನ್ ಡಿ ಸೋಜಾ ರವರ ನೇತೃತ್ವದಲ್ಲಿ ಭೇಟಿ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಸಚಿವರಾದ ವಿನಯ ಕುಮಾರ್, ಸೊರಕೆ, ಕೆ ಪೀ ಸಿ ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ,ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ,ಇಳoತಿಲ, ಹಿರಿಯ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್ ಲೋಬೊ ಮತ್ತು ಕೋಶಾಧಿಕಾರಿ ಪ್ರಶಾಂತ್ ಎಮ್ ಮುಂತಾದವರು ಉಪಸ್ಥಿತರಿದ್ದರು.