ಮಂಗಳೂರು, ಜೂ.12:  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ”ಗುರುವಾರ ನಗರದ ಪುರಭವನಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ವಿರುದ್ಧ ನಿರಂತರವಾಗಿ ಹೋರಾಡಿದರೆ ಮಾತ್ರ  ದಕ್ಷಿಣ ಕನ್ನಡ ಜಿಲ್ಲೆ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಬಹುದು.  ’ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್’ ಎಂಬ ಮಾತಿದೆ. ವಿದ್ಯಾರ್ಥಿ ಜೀವನ  ಎಂಬುದು  ಚಿನ್ನದಂತಹ ಅವಕಾಶ ಮತ್ತು  ಶಿಕ್ಷಣ ಪ್ರತಿಯೊಬ್ಬರ ಜೀವನದ ಮುಖ್ಯವಾದ  ಹಂತ.  ಮಕ್ಕಳು ಶಿಕ್ಷಣ ಎಂಬ  ಅವಕಾಶದಿಂದ  ವಂಚಿತರಾಗಬಾರದು. ಬಾಲಕಾರ್ಮಿಕತೆಯನ್ನು ನಿರ್ಮೂಲನೆಗೊಳಿಸಿ ಶಿಕ್ಷಣ ಎಂಬ ಅವಕಾಶವನ್ನು ಅವರಿಗೆ ನೀಡಿದರೆ   ನಮ್ಮ ದೇಶ ಬಲಿಷ್ಠವಾಗಬಹುದು. ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಬೇಕಾದರೆ  ಬಾಲಕಾರ್ಮಿಕತೆಯ  ವಿರುದ್ಧ ಶ್ರಮವಹಿಸಬೇಕು. ಬಾಲಕಾರ್ಮಿಕತೆಯನ್ನು ನಿರ್ಮೂಲನೆಗೊಳಿಸುವುದು ಕೇವಲ ಇಲಾಖೆಗಳಿಗೆ ಮಾತ್ರ  ಜವಾಬ್ದಾರಿಯಲ್ಲ, ನಮ್ಮೆಲ್ಲರ ಹೊಣೆಯೂ  ಆಗಿದೆ.  ಹೋಟೆಲ್ ಅಥವಾ ಫ್ಯಾಕ್ಟರಿಗಳ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಸಂಬಂಧಪಟ್ಟ ಇಲಾಖೆಯ ದೂರವಾಣಿ ಸಂಖ್ಯೆ ಅಳವಡಿಸಬೇಕು. ಇದರಿಂದ ಸಾರ್ವನಿಕರಿಗೆ ಬಾಲಕಾರ್ಮಿಕರು ಕಂಡರೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲು ಸಹಾಯವಾಗುತ್ತದೆ ಎಂದರು. ಬಾಲಕಾರ್ಮಿಕತೆ ಹೋಗಲಾಡಿಸಲು ಎಲ್ಲರ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.

ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ  ವಕೀಲ ನಿಖೇಶ್ ಶೆಟ್ಟಿ ಮಾತನಾಡಿ, ಸಂವಿಧಾನದ ಪ್ರಕಾರ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಕ್ಕೆ ಒಳಪಡಿಸಬೇಕು. 6 ರಿಂದ 14 ವರ್ಷದೊಳಗಿನ  ದುಡಿಯುವ  ಮಕ್ಕಳ ರಕ್ಷಣೆ ಮಾಡಬೇಕು. ಬಾಲಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಲು ಅನೇಕ ಕಾಯ್ದೆ ಕಾನೂನುಗಳಿವೆ. ಸರಕಾರದಿಂದ ಸೌಲಭ್ಯ, ಯೋಜನೆಗಳು ಸಿಗುತ್ತಿದ್ದು,  ಬಡತನ ಬಾಲಕಾರ್ಮಿಕತೆಗೆ ಕಾರಣವಲ್ಲ. ಮಕ್ಕಳು ಹಣದಾಸೆಗೆ ಅಥವಾ ತಂದೆ ತಾಯಿಯ ಕೆಟ್ಟ ಹವ್ಯಾಸಗಳಿಗೆ  ಶಾಲೆಗೆ ಹೋಗದೆ ದುಡಿಯಲು ಹೋಗುತ್ತಾರೆ.  ಶಿಕ್ಷಣ ಎಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಪ್ರತಿ ಮಕ್ಕಳಿಗೂ  ಶಿಕ್ಷಣದ  ಮಹತ್ವ ತಿಳಿಸಿ ಜಾಗೃತಿ  ಮೂಡಿಸಿ  ಅವರ ಉತ್ತಮ ಭವಿಷ್ಯ ರೂಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ  ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ  ಉಪನಿರ್ದೇಶಕ ಎಂ.ಎಸ್ ಮಹಾದೇವ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಹಿರಿಯ ಅಧಿಕಾರಿ ಡಾ.ಸುಮಂಗಳ ನಾಯಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ಪ್ರದೀಪ್ ಡಿಸೋಜಾ, ಪರಿಸರಾಧಿಕಾರಿ ಡಾ. ಲಕ್ಷ್ಮಿಕಾಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭರತ್, ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ,ಸಹಾಯಕ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ  ಬಿಂದಿಯಾ ನಾಯಕ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್.ವಿ , ಮಕ್ಕಳ ಕಲ್ಯಾಣ ಸಮಿತಿ  ಅಧ್ಯಕ್ಷೆ  ಅಕ್ಷತಾ ಆದರ್ಶ್, ಪ್ರಜ್ಞ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್,  ಪಡಿ ಸರ್ಕಾರೇತರ ಸಂಸ್ಥೆಯ ನಿರ್ದೇಶಕ  ರೆನ್ನಿ ಡಿಸೋಜಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಸ್ವಾಗತಿಸಿ,ಕಾರ್ಯಕ್ರಮವನ್ನು ಡಾ. ಮಂಜುಳಾ ಶೆಟ್ಟಿ, ಉಮೇಶ್ ನಿರೂಪಿಸಿ, ವಿಲ್ಮಾ ವಂದಿಸಿದರು.