ಬಂಟ್ವಾಳ ಸಮೀಫದ ಸ್ಪರ್ಷ ಕಲಾ ಮಂದಿರದಲ್ಲಿ ತುಳುಕೂಟ ಬಂಟ್ವಾಳ ವತಿಯಿಂದ ತುಳುವೆರೆನ ತುಳುನಾಡ ಸಂತೆ ಲಾಂಛನದಲ್ಲಿ ಹಲಸು ಮಾವುಗಳ ಹಬ್ಬವನ್ನು ಆಚರಿಸಲಾಯಿತು.
ಉದಯಕುಮಾರ್ ಮದ್ವ ಅವರಿಂದ ವಿಶಿಷ್ಠ ಶೈಲಿಯ ಹಲಸು ಹಬ್ಬದ ಯಕ್ಷಗಾನ ಶೈಲಿಯ ಭಾಗವತಿಕೆಯ ಮೂಲಕ ಪ್ರಾರ್ಥನಾ ಗೀತೆ ಹಾಡಲಾಯಿತು.
ಆ ಸಂದರ್ಭದಲ್ಲಿ ಜಯಾನಂದ ಪೆರಾಜೆಯವರ ಅಧ್ಯಕ್ಷತೆಯಲ್ಲಿ ನಡೆಸಲಾದ ಬಹುಭಾಷಾ ಕವಿಗೋಷ್ಠಿಯನ್ನುಡಾ. ಕೊಳ್ಚಪ್ಪೆ ಗೋವಿಂದ ಭಟ್ ರವರು ವಿಜಯಕುಮಾರ ಭಂಡಾರಿ ಹೆಬ್ಬಾರ್ಬೈಲ್ ಅವರ ಪೂವರಿ ಪತ್ರಿಕೆ ಲೋಕಾರ್ಪಣೆಯೊಂದಿಗೆ ಉದ್ಘಾಟಿಸಿದರು. ಅವರು ಮಳೆಗಾಲದಲ್ಲಿ ಈ ರೀತಿಯ ಕಾರ್ಯಕ್ರಮಗಳ ಅನಿವಾರ್ಯತೆ ಇದೆ ಅಂದರು.
ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿಯವರು ಮುಖ್ಯ ಆಹ್ವಾನಿತರಾಗಿದ್ದು ಕವಿಭಾವ ಕವಿಮಾತು ಎಂಬ ನೆಲೆಯಲ್ಲಿ ಚಾಲನೆ ನೀಡುತ್ತಾ ತುಳು ನಾಡ ಮಳೆಗಾಲದ ಈ ವಿಶೇಷ ಹಬ್ಬವು ಜನಸಂಪರ್ಕ ಸೇತುವೆಯೂ ಆಗಿದ್ದು ಅಂತಾರಾಷ್ಟ್ರೀಯ ಯೋಗ ದಿನದಂದೇ ನಡೆಯುತ್ತಿರುವುದು ಯೋಗಾಯೋಗ ಹಾಗೂ ಹಲಸು ಮಾವುಗಳ ಈ ಪರ್ವ ಕಾಲದಲ್ಲಿ ಬಹುಭಾಷಾ ಗೋಷ್ಠಿಯು ಇತರೇತರ ಭಾಷಾ ವಿನಿಮಯಕ್ಕೂ ಸಹಕಾರಿ ಎಂದು ತುಳು ಹಾಗೂ ಕನ್ನಡದಲ್ಲಿ ಕ್ರಮವಾಗಿ ಹಲಸು ಹಾಗೂ ಯೋಗಗಳ ಕುರಿತಾದ ಗಜಲ್ ಗಳನ್ನು ವಾಚಿಸಿದರು.
ಸಿದ್ಧಕಟ್ಟೆಯ ಡಾ. ಸುದೀಪ್ ಕುಮಾರ್, ಬಂಟ್ವಾಳ ಕ.ಸಾ.ಪ ಅಧ್ಯಕ್ಷ ವಿಶ್ವನಾಥ್ ಬಾಳಿಗಾ, ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ,ಕಾರ್ಯದರ್ಶಿ ಎಚ್ಕೆ ನಯನಾಡು, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
ಗುಣಾಜೆ ರಾಮಚಂದ್ರ ಭಟ್ ಮತ್ತಿತರ ಸುಮಾರು ನಲುವತ್ತು ಮಂದಿ ತುಳು, ಕನ್ನಢ, ಅರೆಭಾಷೆ, ಶಿವಳ್ಳಿ, ಹವ್ಯಕ,, ಬ್ಯಾರಿ ಭಾಷೆ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಯ ಹಲವು ಸಕಾಲಿಕ ಕವನ ವಾಚನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಯಾನಂದ ಪೆರಾಜೆ ಎಲ್ಲರ ಕವನಗಳನ್ನೂ ಆಲಿಸಿ ಪ್ರತಿಕ್ರಯಿಸಿದರು. ರವೀಂದ್ರ ಕುಕ್ಕಾಜೆ ನಿರೂಪಣೆ ಮಾಡಿದ್ದರು.
ನಂತರ ಡಾ ವಾಣಿಶ್ರೀ ಕಾಸರಗೋಡ್ ಸಾರಥ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.