ಸುರತ್ಕಲ್: "ರಾಜ್ಯ ಇಂಟಕ್, ಮೊಗವೀರ ಮಹಾಸಭಾ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಹಲವಾರು ಸಂಘಟನೆಗಳ ಸಹಕಾರದೊಂದಿಗೆ ಏಪ್ರಿಲ್ 30 ಹಾಗೂ ಮೇ 1ರಂದು ಚಿತ್ರಾಪುರ ಕಡಲ ತೀರದಲ್ಲಿ ಬೀಚ್ ಫೆಸ್ಟ್ ಸಂಭ್ರಮ ನಡೆಯಲಿದೆ" ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಮಂಗಳವಾರ ಸಂಜೆ ಚಿತ್ರಾಪುರ ಬೀಚ್ ನಲ್ಲಿ ಕಾರ್ಯಕ್ರಮದ ಲಾಂಛನವನ್ನು ಅನಾವರಣಗೊಳಿಸಿ ಮಾತಾಡಿದ ಅವರು, "ಏಪ್ರಿಲ್ 30 ಮತ್ತು ಮೇ 1ರಂದು ಕಾರ್ಮಿಕರಿಗಾಗಿ ಬೀಚ್ ಫೆಸ್ಟ್ ಮತ್ತು ಕಡಲ ತೀರದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 30ರಂದು ಸಾಮೂಹಿಕ ಯೋಗಾಭ್ಯಾಸ ನಡೆಯಲಿದ್ದು ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಗಾಳಿಪಟ ಸ್ಪರ್ಧೆ, ಆಹಾರೋತ್ಸವ, ಸರ್ಫಿಂಗ್ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಹಗ್ಗಜಗ್ಗಾಟ, ಕಬಡ್ಡಿ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯರು ಮಾತ್ರವಲ್ಲದೆ ಇಡೀ ಜಿಲ್ಲೆಯ ಜನರು, ಹೊರಜಿಲ್ಲೆಯ ಆಸಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು" ಎಂದರು.
ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತಾಡುತ್ತಾ, "ಬೀಚ್ ಗಳನ್ನು ಸ್ವಚ್ಛವಾಗಿ ಇಂದಿನ ಮತ್ತು ಮುಂದಿನ ಪೀಳಿಗೆಗೂ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆಹಾರೋತ್ಸವ ಕೂಡ ಬೇರೆ ಕಡೆಗಿಂತ ಸಂಪೂರ್ಣ ಭಿನ್ನಾವಾಗಿದ್ದು ಸ್ಥಳೀಯ ಮಹಿಳೆಯರು ಶುಚಿ ರುಚಿಯಾದ ಆಹಾರ ಖಾದ್ಯ ತಯಾರಿಸಿ ಬಡಿಸಲಿದ್ದಾರೆ. ಶ್ರಮಿಕರು ಒಟ್ಟು ಸೇರಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದು ಎಲ್ಲರಿಗೂ ಸ್ವಾಗತವಿದೆ" ಎಂದರು.
ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಅವರು ಮಾತಾಡುತ್ತಾ, "ಬೀಚ್ ಫೆಸ್ಟ್ ನಮ್ಮ ನಿಮ್ಮೆಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ. ಕಡಲ ತೀರದ ನಾನಾ ಸ್ಪರ್ಧೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಿ" ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಯತೀಶ್ ಬೈಕಂಪಾಡಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ರತನ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಮೊಗವೀರ ಸಭಾ ಗುರಿಕಾರ ಅಮರಾನಾಥ ಸುವರ್ಣ ಉಪಸ್ಥಿತರಿದ್ದರು.
ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು.