ಮಂಗಳೂರು: ಕಷ್ಟದ ದಿನಗಳು ಸಂಯಮ ಕಲಿಸಿವೆ. ಬಡತನವೇ ಸಾಧನೆಗೆ ಸ್ಪೂರ್ತಿಯಾಗಿದೆ. ಸಂಪತ್ತು ಕೈಯಲ್ಲಿದ್ದಾಗ ದಾನ ಮಾಡಿದರೆ ಕೆಟ್ಟವರಾಗುವುದಿಲ್ಲ. ಮೂರು ದಿನದ ಬದುಕಲ್ಲಿ ಎಲ್ಲರೊಡನೆ ಆತ್ಮೀಯವಾಗಿ ಕಳೆಯಬೇಕು ಎಂದು ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿಯಾಗಿ ಭಾಗವಹಿಸಿದ ಅವರು ತಮ್ಮ ಜೀವನಾನುಭವವನ್ನು ತೆರೆದಿಟ್ಟ ಅವರು ಉದ್ಯೋಗಾಕಾಂಕ್ಷಿಗಳಿಗಾಗಿ ದ.ಕ.ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯುವ ಯೋಜನೆ ಇದೆ ಎಂದರು.
ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣನಾಗಿ, ಬೀದಿಯಲ್ಲಿ ಸುತ್ತಿ ಬೆಲ್ಲ ಮಾರುತ್ತಿದ್ದ ನಾನು ಕಠಿಣ ಪರಿಶ್ರಮದಿಂದ ದುಡಿದು, ಇಂದು ಏಳು ಸಾವಿರ ಮಂದಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದೇನೆ. ಆರಂಭದ ದಿನಗಳಲ್ಲಿ ಮಿಕ್ಸಿಂಗ್ ಮಾಡಿದ ಸಿಮೆಂಟನ್ನು 20 ಮಹಡಿಗಳ ಕಟ್ಟಡಕ್ಕೆ ಹೊತ್ತುಕೊಂಡು ಹೋಗುವ ಕೆಲಸ ಮಾಡಿದ್ದೆ, 1979ರಲ್ಲಿ ಡ್ರೆಜ್ಜಿಂಗ್ ಕಂಪನಿಯಲ್ಲಿ ಮರೈನ್ ಸರ್ವೇ ಕೆಲಸ ಸೇರಿದೆ. 1985ರಲ್ಲಿ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಕೆಲಸ. ನೆದರ್ಲ್ಯಾಂಡ್ನ ಶೂನ್ಯ ಆಮ್ಲಜನಕ ಪ್ರದೇಶದಲ್ಲಿ ತರಬೇತಿಯು ಬದುಕು ಬದಲಿಸಿತು. ಕಂಪನಿಯಲ್ಲಿ 30 ವರ್ಷ ಬದ್ಧತೆಯಿಂದ ಕೆಲಸ ಮಾಡಿದೆ ಎಂದು ಅವರು ಹೇಳಿದರು.
2010ರಲ್ಲಿ ದುಬೈಯಲ್ಲಿ ನಾಲ್ಕು ಮಂದಿ ಸೇರಿ ನಮ್ಮದೇ ಮುಝೈನ್ ಸಂಸ್ಥೆ ಆರಂಭಿಸಿದೆವು. ಕಾರ್ಮಿಕರೆನ್ನುವ ಬದಲಿಗೆ ಪಾಲುದಾರರು ಎಂಬ ನಿಟ್ಟಿನಲ್ಲಿ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದರಿಂದ ಕಂಪನಿ ಕೆಲವೇ ಸಮಯದಲ್ಲಿ ಬಹಷ್ಟು ಉನ್ನತ ಸಾಧನೆ ಮಾಡಿದೆ. ಏಳು ಸಾವಿರ ಮಂದಿ ಕಾರ್ಮಿಕರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಯವರೇ ಇದ್ದಾರೆ ಎಂದರು.
ದಕ್ಷಿಣ ಕನ್ನಡ ಸುಶಿಕ್ಷಿತರ ಜಿಲ್ಲೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೌಹಾರ್ದದಿಂದ ಬದುಕಬೇಕು.ಯಾವುದೇ ಟೀಕೆಗಳಿಗೆ ಪ್ರತಿಕ್ರಿಯೆ ನೀಡಬಾರದು. ಧನಾತ್ಮಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಕರಾವಳಿಯಲ್ಲಿ ಬಹಳಷ್ಟು ಪ್ರತಿಭೆಗಳಿದ್ದರೂ, ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಕೆಲಸ ಸಿಗಲು ಕಷ್ಟವಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಪಾಠದ ಜತೆ ಪ್ರಾಯೋಗಿಕ ಅನುಭವಕ್ಕೂ ಆದ್ಯತೆ ಕೊಡಬೇಕು ಎಂದು ಅವರು ತಿಳಿಸಿದರು.
ಎಂಎಸ್ಇಝಡ್ನ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.