ಮುಂಬಯಿ: ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ವಿಶ್ವವ್ಯಾಪಿ ಆಗುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ. ಕನ್ನಡಿಗರ ಸಹೃದಯತೆ ಇದಕ್ಕೆ ಕಾರಣ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ  ಶುಭ ಧನಂಜಯ ತಿಳಿಸಿದರು.

ದಿ| ವಿಷ್ಣು ನಾಯ್ಕ ಸಂಸ್ಮರಣಾ ವೇದಿಕೆ, ಹೃದಯ ವಾಹಿನಿ ಮಂಗಳೂರು, ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಮತ್ತು ಕನ್ನಡ ಸಂಘ ಅಂಡಮಾನ್ ಸಂಯುಕ್ತವಾಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಅಂಡಮಾನ್‍ನ  ಪೋರ್ಟ್ ಬ್ಲೇರ್‍ನ ಎಸ್.ಆರ್ ಕ್ಯಾಸೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಬೆಳಗಿಸಿ ಉದ್ಘಾಟಿಸಿ ಶುಭ ಮಾತನಾಡಿದರು.  

ಡಾ| ಅರ್ಚನಾ ಅಥಣಿ ಅವರು ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕಕ್ಕೂ ಮತ್ತು ಅಂಡಮಾನಿಗೂ ಭಾವನಾತ್ಮಕ ಸಂಬಂಧವಿದೆ. ಸ್ವಾತಂತ್ರ್ಯದ ಕಿಡಿ ಹಚ್ಚಿದ  ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕ ಅವರನ್ನು ಇಲ್ಲಿ ನೆನೆಸುವುದು ನಮ್ಮ ದೇಶಪ್ರೇಮದ ಕೆಚ್ಚನ್ನು ಹೆಚ್ಚಿಸುವುದು ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಶಿವಗಂಗೆ ಮೇಲಣ ಗವಿಮಠದ ಡಾ| ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಜಿ ತಮ್ಮ ಆಶೀರ್ವಚನನುಡಿಗಳನ್ನಾಡಿ ಪ್ರತಿಯೊಬ್ಬ ಭಾರತೀಯನು ಅಂಡಮಾನ್ ಜೈಲಿಗೆ ಭೇಟಿ ಕೊಡಬೇಕು, ಆಗ ವೀರ ಸಾವರ್ಕರ್ ಅವರಂತಹ  ಸ್ವಾತಂತ್ರ್ಯ ಸೇನಾನಿಗಳು ಅನುಭವಿಸಿದ ಯಾತನೆ ಎಂತಹದ್ದೆಂದು ತಿಳಿದುಕೊಳ್ಳಬಹುದು. ಬ್ರಿಟಿಷರ ದೌರ್ಜನ್ಯದಿಂದ ಎಷ್ಟೋ ಭಾರತೀಯ ಸ್ವಾತಂತ್ರ್ಯ ಸೇನಾನಿಗಳು ಈ ನೆಲದಲ್ಲಿ ನರಕ ಅನುಭವಿಸಿ ಜೀವ ತೆತ್ತಿದಿದ್ದಾರೆ.  ಸದಾ ಅವರನ್ನು ಸ್ಮರಿಸುವುದರಿಂದ ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ ಎಂದರು.

ಗೌರವ ಅತಿಥಿsಗಳಾಗಿ ಖ್ಯಾತ ಚಿಂತಕರು ಮತ್ತು ವಾಗ್ಮಿ ಹಾಗೂ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮೊಹಮ್ಮದ್ ರಫಿ ಪಾಷ ಉಪಸ್ಥಿತರಿದ್ದು ಅಂಡಮಾನ್‍ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕನ್ನಡಿಗ ಡಾ| ಟಿ.ಎಸ್ ಅಶೋಕ್ ಕುಮಾರ್ ಅವರಿಗೆ ಸಮ್ಮೇಳನ ಸಮಿತಿಯಿಂದ ಗೌರವ ಪುರಸ್ಕಾರ ಪ್ರದಾನಿಸಲಾಯಿತು.

ಸಮ್ಮೇಳನ ಸಮಿತಿ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವನೆಗೈದು ಹೃದಯವಾಹಿನಿ ಕರ್ನಾಟಕ  2004ರಿಂದ ಪ್ರತಿ ವರ್ಷ ನಿರಂತರವಾಗಿ ದೇಶದ ವಿವಿಧ ರಾಜ್ಯಗಳ ಕನ್ನಡ ಸಂಘಗಳ ಸಹಯೋಗದೊಂದಿಗೆ 19 ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿ ಕರ್ನಾಟಕದ ಸಾವಿರಾರು ಕನ್ನಡಿಗರಿಗೆ ಕಲಾವಿದರಿಗೆ, ಕವಿಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ರಾಷ್ಟ್ರಮಟ್ಟದಲ್ಲಿ ವೇದಿಕೆಯನ್ನು ಕಲ್ಪಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದೆ ಎಂದರು.     

ಅಂಡಮಾನ್ ಕನ್ನಡ ಸಂಘದ ಕಾರ್ಯದರ್ಶಿ ಎಸ್.ರೋನಿಕಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಗೌರವ ಅತಿಥಿsಗಳಾಗಿ ಬೆಂಗಳೂರಿನ ಸ್ವಾಮಿ ಎಂಟರ್‍ಪ್ರೈಸಸ್‍ನ ಕಾರ್ಯಾಧ್ಯಕ್ಷ  ಗೊ.ನಾ. ಸ್ವಾಮಿ, ರಾಯಚೂರಿನ ಕುಬೇರ ಗ್ರೂಪ್ಸ್ ಕಾರ್ಯಾಧ್ಯಕ್ಷ ಡಾ| ಈ.ಆಂಜನೇಯ, ಕನ್ನಡ ಸಂಘ ಅಂಡಮಾನ್ ಕಾರ್ಯಕಾರಿ ಸಮಿತಿಯ ಡಾ| ಶಿವಕುಮಾರ್ ಹ.ದೊ.,ನಿವೃತ್ತ ಜಿಲ್ಲಾಧಿಕಾರಿ ಡಾ| ಡಿ.ಎಸ್ ವಿಶ್ವನಾಥ್,  ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ನಾಗರಾಜ್ ಮುಂತಾದವರು ವೇದಿಕೆಯಲ್ಲಿದ್ದರು.  

ಸಮ್ಮೇಳನಾಧ್ಯಕ್ಷೆ ಡಾ| ಅರ್ಚನಾ ಅಥಣಿ ಅವರ ಉಪಸ್ಥಿತಿ ಹಾಗೂ ಡಾ| ಪ್ರಕಾಶ ಗ.ಖಾಡೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಸಲ್ಪಟ್ಟಿದ್ದು  ಕವಿಗಳಾದ ಪ್ರೊ| ಬಿಂಡಿಗನವೀಲೆ ಭಗವಾನ್, ಫೋಟೋ  ಜರ್ನಲಿಸ್ಟ್ ಆರೀಫ್ ಕಲ್ಕಟ್ಟ, ಆರತಿ ಸುರೇಶ್,  ಮನು ಮಂಗಳೂರು ತಮ್ಮ ಕವನನಗಳನ್ನು ಪ್ರಸ್ತುತ ಪಡಿಸಿದರು.  

ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಟಿವಿ9 ಖ್ಯಾತಿಯ ಮಹಾದೇವ ಸತ್ತಿಗೇರಿ ಇವರು ಹಾಸ್ಯ ಕಾರ್ಯಕ್ರಮ, ಬೆಂಗಳೂರುನ ರಂಗಪುತ್ಥಳಿ ಯಶೋಧ ಪಪ್ಪೆಟರಿಯ ಡಾ| ಯಶೋಧ ಶಶಿಧರ್,  ಗಾಯತ್ರಿ ದೇವಿ ಮತ್ತು ಹರೀಶ್ ಇವರು ತೊಗಲು ಗೊಂಬೆಯಾಟ, ಬೆಂಗಳೂರುನ ನಾಟ್ಯಾಂತರಂಗ ಕಲಾವಿದರು ಭರತನಾಟ್ಯ ರೂಪಕ, ಗುರು ಶುಭ ಧನಂಜಯ ನೃತ್ಯ ಸಂಯೋಜನೆಯಲ್ಲಿ ಕಲಾವಿದರಾದ ಅಂಜನ ಎಸ್., ಹರ್ಷಿತ ಎಚ್. ಪಿ., ಮುದ್ರಾ ಧನಂಜಯ, ಮಾಯಾ ಧನಂಜಯ, ಯಾಶಿಕಾ ಜೆ. ಕುಮಾರ್, ಕೃತಿಕಾ ಆರ್., ಖುಷಿ ನೃತ್ಯ ಪ್ರದರ್ಶನ ನೀಡಿದರು.

ಬೆಂಗಳೂರುನ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಅನು ಆನಂದ್ ಅವರು ಭರತನಾಟ್ಯ, ರಂಗ ಸಮಾಜ (ರಿ.) ಬೆಂಗಳೂರು ತಂಡವು ಎಸ್.ತಿಲಕ್‍ರಾಜ್ ಮತ್ತು ಎ.ಎಸ್ ಆರತಿ ಸುರೇಶ್ ಅಭಿನಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಐತಿಹಾಸಿಕ ಕಿರುನಾಟಕ ಪ್ರದರ್ಶಿಸಿತು. ಅಂತರಾಷ್ಟ್ರೀಯ ಜಾನಪದ ಗಾಯಕರಾದ ಗೋನಾ ಸ್ವಾಮಿ ಮತ್ತು ಶಿವರಾಜ್ ಪಾಂಡೇಶ್ವರ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.