ಮಂಗಳೂರು: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸುವ ಸ್ವಚ್ಛೋತ್ಸವ - ನಿತ್ಯೋತ್ಸವ ಮಾಸಾಚರಣೆ ಕಾರ್ಯಕ್ರಮವು ಅಕ್ಟೋಬರ್ 2 ರಿಂದ 31 ರವರೆಗೆ ರಾಜ್ಯಾದಾದ್ಯಂತ ನಡೆಯಲಿದೆ.

ಪ್ರತಿಯೊಂದು ಗ್ರಾಮವು ಸ್ವಚ್ಛ ಸುಂದರ ಆರೋಗ್ಯಕರ ತ್ಯಾಜ್ಯ ಮುಕ್ತವಾಗಿಸುವ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಜ್ಯದಾದ್ಯಂತ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದೆ.

ರಾಜ್ಯದ ಎಲ್ಲಾ ಗ್ರಾಮಪಂಚಾಯತ್‌ಗಳಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಸ್ವಚ್ಛ ಸಂಕೀರ್ಣವು ಏಕರೂಪದ ಬಣ್ಣ, ಚಿಹ್ನೆ, ಸಂದೇಶ, ವಿನ್ಯಾಸ ನೀಡಿ ಏಕರೂಪದ ಬ್ರ‍್ಯಾಂಡಿoಗ್‌ಗೆ ಯೋಜನೆ ರೂಪಿಸಿದೆ. ರಾಜ್ಯದಾದ್ಯಂತ 400ಕ್ಕೂ ಅಧಿಕ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳು ಪೂರ್ಣಗೊಂಡು ಕಾರ್ಯ ನಿರ್ವಹಣೆಯ ಹಂತದಲ್ಲಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 150 ನೇ ಜಯಂತಿ ಯ ಸಮಾರೋಪ ಸಂದರ್ಭದಲ್ಲಿ ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು  ಇಲಾಖೆ ನಾಡಿನ ಜನರಿಗೆ ಸಮರ್ಪಿಸುತ್ತಿದೆ.

ದಿನಾಂಕ 02.10.2020 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಅನಂತಾಡಿ ಗ್ರಾಮ ಪಂಚಾಯತ್ ಇದರ ನೂತನ ಸ್ವಚ್ಛ ಸಂಕೀರ್ಣವನ್ನು  ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಕ್ಕೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಶೌಚಾಲಯದ ಶಂಕುಸ್ಥಾಪನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀ ರಾಜಣ್ಣ, ಜಿಲ್ಲೆಯ ಶಾಸಕರು, ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಭಾಗವಹಿಸಲಿದ್ದಾರೆ.

ಅಕ್ಟೋಬರ್ 15 ರಂದು ಮಂಗಳೂರು ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತಿಯ ಸ್ವಚ್ಛ ಸಂಕೀರ್ಣ ಬ್ರಾಂಡಿoಗ್‌ನಡಿ ಲೋಕಾರ್ಪಣೆಗೊಳ್ಳಲಿದೆ.

ಉಳಿದಂತೆ ಅಕ್ಟೋಬರ್ 20 ರೊಳಗೆ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮಪಂಚಾಯತ್‌ನ ಸ್ವಚ್ಛ ಸಂಕೀರ್ಣ ಘಟಕ, ಸುಳ್ಯ ತಾಲೂಕಿನ ಐವರ್ನಾಡು ಗ್ರಾಮಪಂಚಾಯತ್‌ನ ಸ್ವಚ್ಛ ಸಂಕೀರ್ಣ ಘಟಕ, ಕಡಬ ತಾಲೂಕಿನ ಕೌಕ್ರಾಡಿ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮಪಂಚಾಯತ್‌ನ ಸ್ವಚ್ಛ ಸಂಕೀರ್ಣ ಘಟಕ ಲೋಕಾರ್ಪಣೆಗೊಳ್ಳಲಿದೆ.

ಉದ್ದೇಶ: ಕರ್ನಾಟಕದ ಪ್ರತಿಯೊಂದು ಗ್ರಾಮವನ್ನು ತ್ಯಾಜ್ಯಮುಕ್ತ, ಸ್ವಚ್ಛಸುಂದರ, ಮತ್ತು ಆರೋಗ್ಯಕರವಾಗಿಸುವ ಉದ್ದೇಶದಿಂದ ಕರ್ನಾಟಕದ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ರಾಜ್ಯಾದಾದ್ಯಂತ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ಪ್ರಸ್ತುತ ಎಲ್ಲ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸ್ವಚ್ಛ ಸಂಕೀರ್ಣ ಎಂದು ಹೆಸರಿಸಿ ಏಕರೂಪದ ಬ್ರಾಂಡಿoಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ವಿನ್ಯಾಸ:  ಸ್ವಚ್ಛ ಸಂಕೀರ್ಣ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ವಿನ್ಯಾಸವು ವರ್ತುಲ ಆರ್ಥಿಕತೆಯ ಮಾದರಿಯಿಂದ ಸ್ಪೂರ್ತಿ ಪಡೆದಿದೆ. ಅಲ್ಲಿ ತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ಸಂಸ್ಕರಿಸಿ ಉನ್ನತೀಕರಿಸಿದ ಮತ್ತು ಉಪಯುಕ್ತ ದಿನನಿತ್ಯದ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.

ಸ್ವಚ್ಛ ಸಂಕೀರ್ಣದಲ್ಲಿ ಘನ, ದ್ರವ ತ್ಯಾಜ್ಯ ತಿರಸ್ಕೃತ ಇ-ತ್ಯಾಜ್ಯ ಮತ್ತು ಜೈವಿಕ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ - ಸುಸ್ಥಿರ  ವ್ಯವಸ್ಥೆಯನ್ನೊಳಗೊಂಡ ಪರಿಸರ ಸ್ನೇಹಿ ಉದ್ಯಾನವನದ ಅನುಭವ ನೀಡಲು ಯೋಜನೆ ರೂಪಿಸಲಾಗಿದೆ.  

ಕಲಾಕೃತಿಗಳು, ಉನ್ನತೀಕರಿಸಿದ ಉತ್ಪನ್ನ ಘಟಕಗಳು, ಮಾಹಿತಿ ಆಧಾರಿತ ಭಿತ್ತಿ ಪತ್ರಗಳೊಂದಿಗೆ ಸ್ವಚ್ಛ ಸಂಕೀರ್ಣ ಜ್ಞಾನದ ಕಣಜವಾಗಲಿದೆ. ಇದು ಬರೀ ತ್ಯಾಜ್ಯ ನಿರ್ವಹಣೆಯ ತಾಣವಲ್ಲದೆ ಮಕ್ಕಳು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಕರ್ನಾಟಕದ ಜನರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಉಪಯೋಗ ಕುರಿತು ಅರ್ಥ ಮಾಡಿಕೊಳ್ಳಲು  ಮಾಹಿತಿ ತಾಣಗಳಾಗಿ ಕಾರ್ಯ ನಿರ್ವಹಿಸಲಿದೆ.