ಮಂಗಳೂರು : ಆನೆಕಾಲು ರೋಗದಿಂದ ಕಾಲು ಕೊಳೆತು ನೀರಿಳಿಸುತ್ತಾ ಆ ವೃದ್ಧನಾದ ಮೂಕ ವ್ಯಕ್ತಿ ನೋಡುಗರಲ್ಲಿ ಕನಿಕರ ಹುಟ್ಟಿಸುತ್ತಾ ರಸ್ತೆ ಬದಿಯಲ್ಲೇ ಸುತ್ತು ಬಂದದ್ದು 10 ವರ್ಷ! ಅವರನ್ನು ಕಂಡವರು ಅಯ್ಯೋ ಎನ್ನದೆ ಇರಲಾರರು. ಅಂಗಡಿ ಜಗಲಿಯನ್ನೇ ಮನೆ ಮಾಡಿದ ಅವರತ್ತ ಕನಿಕರದ ದೃಷ್ಟಿ ಹರಿಸುವವರು ಕೂಡಾ ಜಿಗುಟು ವಾಸನೆ ಬೀರುವ ಅವರ ಬಳಿ ಸುಳಿದಾಡಲು ಹೇಸುತ್ತಿದ್ದರು. ಯಾರಾದರೂ ಮಾನವ ಹೃದಯಿಗಳು ಚಾಚುವ ಒಪ್ಪೊತ್ತಿನ ಆಹಾರದಿಂದಲೇ ಈ ವರೆಗೂ ಸಾವನ್ನು ಜಯಿಸಿ ಬಂದಿದ್ದರು. ಆದರೆ..... ತೀರಾ ಕೃಷಕಾಯರಾದ 75 ರ ಹರೆಯದ ಅವರು ಇತ್ತೀಚೆಗಿನಿಂದ ರಸ್ತೆ ಬದಿಯಲ್ಲೇ ಮುದುಡಿ ಉಪವಾಸ ಮರಣವನ್ನು ಇದಿರು ನೋಡುತ್ತಿದ್ದರು. ಪುತ್ತೂರಿನ   ದರ್ಬಾರ್ ನಿವಾಸಿಗಳಿಗೆ ಅವರದ್ದು ನಿತ್ಯ ದರ್ಶನ. ಅವರ ಬಗ್ಗೆ ಅವರಿವರು ಮಾತನಾಡುತ್ತಿದ್ದರೂ ಏನನ್ನೂ ಮಾಡಲಾರದ ಸಮಾಜದ ಮುಂದೆ ಪ್ರಶ್ನಾರ್ಥಕವಾಗಿಯೇ ಉಳಿದಿದ್ದರು...... ಆದರೆ, ಅವರನ್ನು ಗಮನಿಸಿದ ಯುವಕರ ಗುಂಪೊಂದು ಸಾಮಾಜಿಕ ತಾಣವನ್ನು ಸದ್ಬಳಸಿ ಆ ಮುದುಕನ ಕರುಣಾಜನಕ ದೃಶ್ಯವನ್ನು ಪಸರಿಸಿರುವುದು ನಿಜಕ್ಕೂ ಪುಣ್ಯದ ಕೆಲಸವಾಯಿತು.

  ವ್ಯಾಟ್ಸಾಪ್ ಗುಂಪಿನಲ್ಲಿ ತೇಲಿಬಂದ ವೃದ್ಧನ ಬಗ್ಗೆ ಸ್ನೇಹಾಲಯದ ರೂವಾರಿ ಬ್ರದರ್ ಜೋಸೆಫ್ ಕ್ರಾಸ್ತಾ ಗಮನಿಸಿದ್ದರು. ಸುದ್ದಿಯರಿತದ್ದೇ ತಡ, ಸಂಗಡಿಗರೊಂದಿಗೆ ದರ್ಬಾರ್ ಗೆ  ತೆರಳಿದ ಜೋಸೆಫ್ ಅವರು ಕಳೆದ ದಿನ ವೃದ್ಧನನ್ನು ಕರೆತಂದಿದ್ದಾರೆ. ತಿಂಗಳುಗಳಿಂದ ದೇಹದಲ್ಲಿರುವ ಪ್ಯಾಂಟು ಆನೆಕಾಲಿನ ಸ್ರಾವದಿಂದಾಗಿ ಕಾಲಿಗೆ ಅಂಟಿಕೊಂಡಿತ್ತು. ಸೂಕ್ತ ಆರೈಕೆಯನ್ನು ಒದಗಿಸಿದ್ದಾರೆ. ಇದೀಗ ಯೇನಪೋಯ ಆಸ್ಪತ್ರೆಯಲ್ಲಿ ದಾಖಲಿಸಿ ಅವರಿಗೆ ಸೂಕ್ತ ಶುಶ್ರೂಷೆ ಒದಗಿಸಲಾಗುತ್ತಿದೆ. ಮೂಕನಾದ ಅವರ ಮಾಹಿತಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಆದರೆ, ಸ್ನೇಹಾಲಯದಲ್ಲಿ ಅವರು ಸನಾಥತ್ವ ಕಂಡುಕೊಳ್ಳುವಂತಾಗಿದ್ದಾರೆ.