40 ಲಕ್ಷ ರೂಪಾಯಿ ಕಾಮಗಾರಿ : ಲೈನ್ ದುರಸ್ತಿ : ಟ್ರಾನ್ಸ್ ಫಾರ್ಮರ್ ಅಳವಡಿಕೆ.
ಅಜೆಕಾರು : ಅಜೆಕಾರು ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಳೆ ವಾರ್ಡು 1ರಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಸ್ಕಾಂ ಅಧಿಕಾರಿಗಳು ಜನರ ಬಹುಕಾಲದ ಸಮಸ್ಯೆಯ ವಿವಿಧ ತುರ್ತು ಅಭಿವೃದ್ಧಿ ಕೆಲಸಗಳನ್ನು ಇತ್ತೀಚೆಗೆ ನಿರ್ವಹಿಸಿದರು. ಇದರಿಂದ ಅಪಾಯದ ಸಮಸ್ಯೆಗಳು ಈಡೇರಿದ್ದು ಜನತೆ ಮೆಸ್ಕಾಂ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕಾಡುಹೊಳೆ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಅವರು ಭಾನುವಾರ ಕಾಡುಹೊಳೆಯಲ್ಲಿ ಮೆಸ್ಕಾಂ ಅಧಿಕಾರಿಗಳು ನಿರ್ವಹಿಸಿದ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಿದರು.
ವಿದ್ಯುತ್ ಸರಬರಾಜು ಲೈನಿನ ವಯರ್ ತಾಗಿ ಇತ್ತೀಚೆಗೆ ಬೈಹುಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಭಸ್ಮವಾಗಿತ್ತು. ನಂದಾರು ಪರಿಸರದಲ್ಲಿ ಮರಕ್ಕೆ ವಿದ್ಯುತ್ ತಗುಲಿ ತೋಟ ಸಂಪೂರ್ಣ ಸುಟ್ಟುಹೋಗಿತ್ತು. ಹೀಗೆ ಮೆಸ್ಕಾಂನಿಂದ ಸಾಲು ಸಾಲು ಸಮಸ್ಯೆಯಿತ್ತು. ಪಂಚಾಯಿತಿ ಸದಸ್ಯರಾದ ಸ್ಥಳೀಯ ಯುವ ನಾಯಕ ಕೃಷ್ಣಮೂರ್ತಿ ಕಾಡುಹೊಳೆ ನೇತ್ರತ್ವದಲ್ಲಿ ಸದಸ್ಯರಾದ ವಸಂತ ನಾಯಕ್, ವಿಜಯ ನಾಯ್ಕ್ ಮೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆಯ ಮನವರಿಕೆ ಮಾಡಿದ್ದು ಇದೀಗ ನಮ್ಮ ಸಮಸ್ಯೆ ಬಗೆಹರಿದಿದೆ ಎಂದು ಸ್ಥಳೀಯ ಮುಖಂಡರಾದ ಉದ್ಯಮಿ ಮಂಜುನಾಥ್ ಟಿ. ತಿಳಿಸಿದರು.
ಜೋತು ಬಿದ್ದ ವಿದ್ಯುತ್ ಲೈನ್ ಬದಲಿಸುವುದು, ಗಿಡ್ಡವಿದ್ದ ವಿದ್ಯುತ್ ಕಂಬ ಬದಲಿಸಿ ಎತ್ತರದ ಕಂಬ ಅಳವಿಡಿಕೆ, 4 ಕಡೆ ಟ್ರಾಸ್ಸ್ ಫಾರ್ಮರ್ ಅಳವಡಿಕೆ ಸೇರಿ ಹಲವು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲಾಗಿದೆ. ನಮ್ಮ ಮನವಿಗೆ ಸಕಾಲದಲ್ಲಿ ಸ್ಪಂದಿಸಿದ ಮೆಸ್ಕಾಂ ಉಡುಪಿ ಇಇ ದಿನೇಶ ಉಪಾಧ್ಯಾಯ, ಹೆಬ್ರಿ ಉಪ ವಿಭಾಗದ ರಘುನಾಥ ನಾಯ್ಕ್, ಅಜೆಕಾರು ಸೆಕ್ಷನ್ನ ಉಪೇಂದ್ರ ವಾಗ್ಲೆ ಮತ್ತು ಅವರ ತಂಡಕ್ಕೆ ಕೃಷ್ಣಮೂರ್ತಿ ಕೃತಜ್ಷತೆ ಸಲ್ಲಿಸಿದ್ದಾರೆ.