ಉಡುಪಿ ಮಾರ್ಚ್ 21 (ಕರ್ನಾಟಕ ವಾರ್ತೆ): ಕೊರೋನಾ ವೈರಸ್ ಕುರಿತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಜಾಗೃತರಾಗಿ ಆರೋಗ್ಯ ಇಲಾಖೆಯ ಜೊತೆ ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇಲಾಖೆಯ ಮುಖಾಂತರ ಈಗಾಗಲೇ ವೈದ್ಯಾಧಿಕಾರಿಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳಿಗೆ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ತರಬೇತಿ ನೀಡಲಾಗಿದ್ದು, ಆರೋಗ್ಯ ರಥದ ಮೂಲಕ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಐ.ಇ.ಸಿ. ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಮನೆ ಮನೆಗೆ ಕರಪತ್ರಗಳ ವಿತರಣೆ, ಭಿತ್ತಿಪತ್ರಗಳ ಮುಖಾಂತರ ಸಾರ್ವಜನಿಕರಲ್ಲಿಯೂ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಮುಖಾಂತರ ನೀಡಲಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮದ ಮಾಹಿತಿಯನ್ನು ಎಲ್ಲರೂ ತಪ್ಪದೇ ಪಾಲಿಸಿ ಜಗತ್ತಿನ ಎಲ್ಲರ ಆರೋಗ್ಯವನ್ನು ಕಾಪಾಡಲು ಪಣತೊಟ್ಟು ಆರೋಗ್ಯ ಇಲಾಖೆಯ ಜೊತೆ ಸಹಕರಿಸುವಂತೆ ಹಾಗೆಯೇ ಮಾ. 22 ರ ಬೆಳಗ್ಗೆ ಪ್ರಧಾನ ಮಂತ್ರಿ ಕೋರಿಕೆಯಂತೆ ಎಲ್ಲರೂ ಬೆಳಗ್ಗೆ 7.00 ರಿಂದ ರಾತ್ರಿ 9.00 ಗಂಟೆಯವರೆಗೆ ತಮ್ಮ ತಮ್ಮ ಮನೆಯಿಂದ ಹೊರಗಡೆ ಬರಬಾರದು, ಈ ನಿಟ್ಟಿನಲ್ಲಿ ಸಹಕರಿಸುತ್ತಿರುವ ಎಲ್ಲಾ ವೈದ್ಯಾಧಿಕಾರಿಗಳು, ನರ್ಸ್ಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೆ ಜಿ.ಪಂ. ಅಧ್ಯಕ್ಷರು ಧನ್ಯವಾದ ತಿಳಿಸಿರುತ್ತಾರೆ.