ಉಡುಪಿ ಮಾರ್ಚ್ 21 (ಕರ್ನಾಟಕ ವಾರ್ತೆ): ಮಾರ್ಚ್ 12 ರಂದು ಉಡುಪಿ ಶಾಸಕ ರಘುಪತಿ ಭಟ್ ನಗರಸಭಾ ವ್ಯಾಪ್ತಿಯ ಸುತ್ತಲಿರುವ ಗ್ರಾಮ ಪಂಚಾಯತ್‍ನ ಅಧ್ಯಕ್ಷರುಗಳೊಂದಿಗೆ ಹಾಗೂ ಪಿ.ಡಿ.ಓ ಗಳೊಂದಿಗೆ ನಗರಸಭಾ ಸಭಾಭವನದಲ್ಲಿ ನಗರಸಭೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಣಯದಂತೆ, ನಗರಸಭಾ ವ್ಯಾಪ್ತಿಯಲ್ಲಿ ಬೇಸಿಗೆಯ ನಿಮಿತ್ತವಾಗಿ ನೀರಿನ ಅಭಾವ ತಲೆದೂರುತ್ತಿದ್ದು, ಸದರಿ ನೀರಿನ ಅಭಾವವನ್ನು ಪರಿಗಣಿಸಿ ನೀರು ಸರಬರಾಜು ಹಾದು ಹೋಗಲು ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಗ್ರಾಮ ಪಂಚಾಯತ್‍ಗಳು ಹಾಲಿ ದಿನದ 24 ಗಂಟೆಯೂ ನೀರು ಉಪಯೋಗಿಸುತ್ತಿದ್ದು, ಈ ನೀರು ಸರಬರಾಜನ್ನು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವಂತೆ ದಿನದ 6 ಗಂಟೆಗೆ ಮಿತಿಗೊಳಿಸಲಾಗಿದೆ.

ಈ ಮಾರ್ಗದಲ್ಲಿ ಬಜೆ ಡ್ಯಾಂನಿಂದ ಮಣಿಪಾಲ ಜಿಎಸ್‍ಎಲ್‍ಆರ್ ವರೆಗೆ ಬರುವ ಎಲ್ಲಾ ಗ್ರಾಮಗಳಿಗೆ ಬೆಳಿಗ್ಗೆ ಗಂಟೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ನೀರಿನ ವೇಗ ಹಾಗೂ ಜಿಎಸ್‍ಎಲ್‍ಆರ್ ನ ಮಟ್ಟ ಹೆಚ್ಚಿಸಲು ನೀರು ಸರಬರಾಜು ಗೇಟ್‍ವಾಲ್ವ್‍ಗಳನ್ನು ನಗರಸಭಾ ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.