ಉಡುಪಿ ಮಾರ್ಚ್ 21 (ಕರ್ನಾಟಕ ವಾರ್ತೆ): ಕೊರೊನಾ ವೈರಾಣು ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ  ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯೂಲೇಷನ್ಸ್-2020 ರ ನಿಯಮ 12 ರಲ್ಲಿ ಹಾಗೂ Disaster Management Act 2005 ಕಲಂ 24 (ಎ), (ಬಿ), 30 (2) ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಿ, ಈ ಕೆಳಕಂಡ ಸೇವೆಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿರುತ್ತಾರೆ.

    ಸ್ಥಗಿತಗೊಂಡ ಹೊಸ ಸೇವೆಗಳು: ಪಹಣಿ ವಿತರಣಾ ಸೇವೆ, ಸ್ಪಂದನಾ ಕೇಂದ್ರಗಳ ಸೇವೆ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬೆಳಗಿನ ಕಚೇರಿಯ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಮಧ್ಯಾಹ್ನದ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಪ್ರತಿ ದಾಸ್ತಾವೇಜಿನ ನೊಂದಣಿ ಬಗ್ಗೆ 15 ನಿಮಿಷಗಳ ಅಂತರವಿರಿಸಿ ಸಮಯ ನಮೂದಿಸಿ ಟೋಕನ್‍ಗಳನ್ನು ವಿತರಿಸಿ, ದಾಸ್ತಾವೇಜುಗಳ ನೊಂದಣಿಗೆ ಕ್ರಮ ವಹಿಸಬೇಕು.  ಏಕಕಾಲದಲ್ಲಿ ಕಚೇರಿಗೆ ಹೆಚ್ಚು ಜನರ ಪ್ರವೇಶವನ್ನು ನಿರ್ಬಂಧಿಸಬೇಕು. ನೊಂದಣಿಗೆ ಬರುವವರಲ್ಲಿ ಯಾರಿಗಾದರೂ ಶೀತ, ನೆಗಡಿ ಮತ್ತು ಕೆಮ್ಮು ಇಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಸ್ಯಾನಿಟಯಸರ್ ಬಳಸಿ ಒಳ ಪ್ರವೇಶಿಸುವ ಬಗ್ಗೆ ಅಗತ್ಯ ವ್ಯವಸ್ಥೆ ಮಾಡಬೇಕು. 

     ಮೇಲ್ಕಂಡ ಸೇವೆಗಳಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.