ಮಂಗಳೂರು, ಜು 25: ವಿಮೆನ್ ಇಂಡಿಯಾ ಮೂವ್ಮೆಂಟ್‌ನವರ ದಕ್ಷಿಣ ಕನ್ನಡ ಜಿಲ್ಲಾ ಘಟಕದವರು ಜುಲಾಯಿ 25ರಂದು ಮಂಗಳೂರು ಗಡಿಯಾರ ಗೋಪುರದ ಸುತ್ತಿನಲ್ಲಿ ಅಗತ್ಯ ವಸ್ತುಗಳ ಬೆಲೆ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಆಯಿಶಾ ಬಜ್ಪೆಯವರ ನೇತ್ರತ್ವದಲ್ಲಿ ಈ ಪ್ರತಿಭಟನೆ ನಡೆಯಿತು. 

ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲೆ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ವಿಮೆನ್ಸ್ ಫ್ರಂಟ್ ನಾಯಕಿ ಮುಜಾಹಿದ ಕಣ್ಣೂರು, ಜಿಲ್ಲಾ ನಾಯಕಿ ರಜ್ಮಾ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

ಬಡವರ ಅನ್ನಕೆ ತೆರಿಗೆ ಹಾಕಿದ ಮೋದಿ ಸರಕಾರಕ್ಕೆ ಹಾಗೂ ಗಬ್ಬರ್ ಸಿಂಗ್ ಮೋದಿಯವರಿಗೆ ಮಹಿಳೆಯರು ಧಿಕ್ಕಾರ ಕೂಗಿದರು.

ಆಯಿಶಾ ಬಜ್ಪೆಯವರು ಮಾತನಾಡಿ ಅಚ್ಛೇ ದಿನ, ಮನ್ ಕಿ ಬಾತ್ ಎಂದು ಜನರನ್ನು ಮರುಳು ಮಾಡಿದ ಮೋದಿಯವರು ಅಧಿಕಾರಕ್ಕೆ ಮೋದಿಯವರು ಅಡುಗೆ ಮಾಡಲು ಕಣ್ಣೀರು ಹಾಕುವ ಸ್ಥಿತಿ ತಂದಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ತರುವುದರಿಂದ ಹಿಡಿದು ಬರೇ ಸುಳ್ಳುಗಳ ಆಡಳಿತ ನಡೆಸುತ್ತಿದ್ದಾರೆ. ಬಡವರ ಹೊಟ್ಟೆಗೆ ಹೊಡೆಯುವ, ಅಂಬಾನಿ ಅದಾನಿ ಡೊಳ್ಳು ಬೆಳೆಸುವ ಸರಕಾರದ ವಿರುದ್ಧ ಎಲ್ಲರೂ ಎದ್ದು ಹೋರಾಡಬೇಕು ಎಂದು ಆಯಿಶಾ ಹೇಳಿದರು.

ಅನಗತ್ಯವಾಗಿ ಎಲ್ಲದಕ್ಕೂ ಜಿಎಸ್‌ಟಿ ಹಾಕಿ ಜನರ ಬದುಕನ್ನು ಬೀದಿಗೆ ದೂಡಿದ ಈ ಸರಕಾರವು ಅತಿಯಾದ ಜಿಎಸ್‌ಟಿ ತಗ್ಗಿಸುವವರೆಗೆ ವಿಮೆನ್ ಇಂಡಿಯಾ ಮೂವ್ಮೆಂಟ್‌ನವರು ದೇಶದೆಲ್ಲೆಡೆ ಪ್ರತಿಭಟನೆ ಮಾಡುವುದಾಗಿ ಆಯಿಶಾ ಹೇಳಿದರು.

ನಿರ್ಮಲಾ ಸೀತಾರಾಮನ್ ಮಾದರಿಯ ಹಣಕಾಸು ಮಂತ್ರಿ ಮಹಿಳೆಗೂ ಜನಸಾಮಾನ್ಯ ಮಹಿಳೆಯರ ಕಷ್ಟ ತಿಳಿಯುತ್ತಿಲ್ಲ. ಬಿಜೆಪಿಯಿಂದ ಅಂಬಾನಿ ಅದಾನಿಗೆ‌ ಅಚ್ಛೇ ದಿನ್ ಬಂದಿದೆ. ನಮಗೆ ಉಪವಾಸ ದಿನ್ ಬಂದಿದೆ. ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ 40% ಕಮಿಶನ್ ಹೊಡೆದು ಜನರನ್ನು ಸುಲಿಯುವುದು ನಿಲ್ಲಿಸಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.