ಕಾರ್ಕಳ ತಾಲ್ಲೂಕು ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲ್ಕೇರಿ ಅಂಗನವಾಡಿ ಕೇಂದ್ರದಲ್ಲಿ *ನವೆಂಬರ್ 14 ಶುಕ್ರವಾರದಂದು* ಜರುಗಿದ " *ಮಕ್ಕಳ ದಿನಾಚರಣೆ"_ಚಿಣ್ಣರ ಲೋಕ" ಕಾರ್ಯಕ್ರಮವನ್ನು* ಕರ್ನಾಟಕ ರಾಜ್ಯ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಮುಗ್ಧ ಮನಸ್ಸಿನ ಮಕ್ಕಳಲ್ಲಿ ಉತ್ಸಾಹದ ಚಿಲುಮೆ ಹರಿಸಬೇಕಾದದ್ದು ಹೆತ್ತವರ ಆದ್ಯ ಕರ್ತವ್ಯ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಗುರುತಿಸಿ ಪ್ರೋತ್ಸಾಹಿಸಿದಾಗ, ಅದ್ಭುತ ಪ್ರತಿಭೆಗಳ ಅನಾವರಣ ಸಾಧ್ಯ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯ ರೂಪಿಸುವ ಚಟುವಟಿಕೆಯ ತಾಣಗಳಾಗಿ ರೂಪ ಗೊಳ್ಳುತ್ತಿವೆ ಎಂದರು.

ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿಗಳಾದ ಶ್ರೀಮತಿ ಅನುರಾಧ ಮತ್ತು ಇಲಾಖೆಯ ಮೇಲ್ವಿಚಾರಕರಾದ ವಿನೋದ ರವರು ಬಾಲ ವಿಕಾಸ ಯೋಜನೆ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರಕಾರ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. 

ಫುಲ್ಕೇರಿ ಅಂಗನವಾಡಿ ಕೇಂದ್ರವು ಪರಿಸರದ ಅತಿ ಹೆಚ್ಚು ಪುಟಾಣಿ ಮಕ್ಕಳನ್ನು ಸೆಳೆದು, ಸಮುದಾಯದ ಸಹಭಾಗಿತ್ವದೊಂದಿಗೆ ಸದಾ ಮಾದರಿ ಚಟುವಟಿಕೆಯ ಕೇಂದ್ರವಾಗಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಯಶೋದ .ವಿ .ಶೆಟ್ಟಿ ಪಂಚಾಯತ್ ಸದಸ್ಯರುಗಳಾದ ಶ್ರೀ ವಸಂತ, ಶ್ರೀ ಸತೀಶ್ ಪೂಜಾರಿ ಮತ್ತು ಶ್ರೀಮತಿ ಅಮಿತಾ ಶೆಟ್ಟಿ, ಉದ್ಯಮಿ ಶ್ರೀ ವರದರಾಯ ಪ್ರಭು ಉಪಸ್ಥಿತರಿದ್ದರು. 

ಬಾಲ ವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಪ್ರಿಯಾ ರವರು ಸ್ವಾಗತಿಸಿ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಸಾಕಮ್ಮರವರು ಕಾರ್ಯಕ್ರಮವನ್ನು ಸಂಯೋಜಿಸಿ ವಂದನಾರ್ಪಣೆ ಗೈದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು. 

ಆ ಬಳಿಕ ನಡೆದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು.