ಮಂಗಳೂರು, ಏಪ್ರಿಲ್ 04: 13 ದಿನಗಳಲ್ಲಿ 11 ಬಾರಿ ನಿರಂತರ ಪೆಟ್ರೋಲಿಯಂ ಬೆಲೆ ಏರಿಕೆ ಆಗಿದೆ. ರಸಗೊಬ್ಬರದ ಬೆಲೆ 40% ಏರಿಸಿದ್ದಾರೆ. ಜನರ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸಿರುವ ಬಿಜೆಪಿ ಸರಕಾರಗಳು ಅದನ್ನು ಮುಚ್ಚಿ ಹಾಕಲು ಸಾಮಾಜಿಕ ಗೊಂದಲ ಉಂಟುಮಾಡುತ್ತಿದ್ದಾರೆ. ಇದನ್ನು ಬದಲಿಸಬೇಡವೆ? ಎಂದು ಮಾಜೀ ಮಂತ್ರಿ ರಮಾನಾಥ ರೈ ಹೇಳಿದರು.

ಜಾತ್ರೆಯ ಸಂತೆಯಲ್ಲಿ ಒಂದು ಸಮುದಾಯದವರನ್ನು ವ್ಯಾಪಾರ ಮಾಡದಂತೆ ಬ್ಯಾನರ್ ಹಾಕುವುದು, ಹಲಾಲ್ ಮಾಂಸ ಕೊಳ್ಳಬೇಡಿ. ಇವೆಲ್ಲ ಎಂಥ ವಿಭಜಕ ರಾಜಕೀಯ. ಕೆಲಸ ಮಾಡಿದ್ದನ್ನು ಹೇಳಿ ಮತ ಕೇಳಲಾಗದ್ದರಿಂದ ಹಿಂದೂ ಧರ್ಮದ ಮನಸ್ಸು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೊಬ್ಬ ಕಾಂಗ್ರೆಸ್‌ನವನು ಇಲ್ಲಿನ ಪೋಲೀಸು ಠಾಣೆಯ ಎಫ್‌ಐಆರ್ ನಲ್ಲಿ ಇಲ್ಲ. ಯಾಕೆಂದರೆ ನಾವು ಸಂವಿಧಾನದಂತೆ ನಡೆಯುವವರು ಎಂದು ರೈ ಹೇಳಿದರು.

ಹಲವು ಹತ್ಯೆಗಳು ಆದವು. ಟಿಪ್ಪು ಜಯಂತಿಯಂದು ನಮ್ಮಲ್ಲಿ ಬಿರುವ ಒಬ್ಬನನ್ನು ಕೊಂದು, ಕಾಂಗ್ರೆಸ್‌ನತ್ತ ಬೆರಳು‌ ತೋರಿಸಿದರು. ಆಮೇಲೆ ಕೊಲೆ ಮಾಡಿದವರು ಸಂಘ ಪರಿವಾರದವರು ಎಂದು ರೈ ಹೇಳಿದರು.

ಬೋಸ್ನಿಯಾಕ್ಕೆ ದೇಶಾತೀತ ಪೋಲೀಸರನ್ನು ನಿಲ್ಲಿಸಿದ್ದಾರೆ. ಭಾರತದಲ್ಲಿ ಇಂತಾ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ದೇಶಾತೀತ ಪೋಲೀಸರನ್ನು ನಿಲ್ಲಿಸುವ ಸ್ಥಿತಿ ಬರಬೇಕೆ? ದಕ್ಷಿಣ ಕನ್ನಡವನ್ನು ಹಿಂದೂ ಪ್ರಯೋಗ ಶಾಲೆ ಮಾಡಿ ಹಾಳು ಮಾಡಬೇಕೆ ಎಂದು ಅವರು ಕೇಳಿದರು.

ಅಚ್ಛೇ ದಿನ ತರುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಈಗ ಮತೀಯ ಗಲಭೆಗಳ ಮೂಲಕ ಮತ ಪಡೆಯಲು ನೋಡುತ್ತಿದ್ದೀರಿ. ಜಿಲ್ಲಾಡಳಿತವು ಈ ಕೂಡಲೆ ಶಾಂತಿ ಸಭೆ ನಡೆಸಿ ಈ ಉದ್ವಿಗ್ನ ಸ್ಥಿತಿ ಅಳಿಸಿ ಹಾಕಬೇಕು. ಅತಿಯಾದ ದೇವರು, ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಇಲ್ಲಿ ರಾಜಕೀಯ ನಡೆದಿದೆ. ಇಲ್ಲಿ ಅವೆಲ್ಲ ಅತಿಯಾಗದಿದ್ದರೆ ಜಿಲ್ಲೆ ನಿಜವಾಗಿಯೂ ಬುದ್ಧಿವಂತರ ಜಿಲ್ಲೆಯಿದು ಎಂದು ಹಿರಿಯರೊಬ್ಬರು ಹೇಳಿದ್ದನ್ನು ರೈ ನೆನಪಿಸಿದರು.

ಈ ಜನ ಸ್ವಾತಂತ್ರ್ಯ ಹೋರಾಟಗಾರರನ್ನು, ಗಾಂಧೀಜಿಯವರನ್ನು ಬೈಯುತ್ತಾರೆ. ಬೆಲೆಯೇರಿಕೆಗೆ ನೆಹರು ಕಾರಣ ಎನ್ನುತ್ತಾರೆ. ನಮ್ಮ ಜಿಲ್ಲೆಯ ಸಾಮಾಜಿಕ ಸಾಮರಸ್ಯ, ಸೌಹಾರ್ದ ಉಳಿಸಬೇಕು. ಮನುಷ್ಯ ದ್ವೇಷಿ,  ಮಾನವ ದ್ವೇಷಿ ಎಂದೂ ರಮಾನಾಥ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಹರಿನಾಥ್, ಶಶಿಧರ ಹೆಗ್ಡೆ, ಪ್ರಕಾಶ ಸಾಲಿಯಾನ್, ಮುಸ್ತಫಾ, ಲ್ಯಾನ್ಸ್ ಲಾಟ್ ಪಿಂಟೋ, ನೀರಜ್ ಪಾಲ್, ದಂಡಕೇರಿ ಮೊದಲಾದವರು ಉಪಸ್ಥಿತರಿದ್ದರು.